ಭಾರತೀನಗರ: ‘ಯಾವುದೇ ಅಪಘಾತ, ಅವಘಡ ಸಂಭವಿಸಿದ ನಂತರ ಪ್ರಥಮ ಚಿಕಿತ್ಸೆ ಪ್ರಮುಖವಾಗಿ ಅಗತ್ಯವಿರುತ್ತದೆ. ಪ್ರಥಮ ಚಿಕಿತ್ಸೆಯಿಂದ ಅಪಘಾತದಿಂದಾದ ಗಾಯದ ತೀವ್ರತೆ ಎಷ್ಟೆಂಬುದು ತಿಳಿಯುತ್ತದೆ’ ಎಂದು ಭಾರತೀಯ ರೆಡ್ಕ್ರಾಸ್ ಮಂಡ್ಯ ಘಟಕದ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಹೇಳಿದರು.
ಇಲ್ಲಿಯ ಭಾರತೀ ಕಾಲೇಜಿನ ಪದ್ಮ ಜಿ.ಮಾದೇಗೌಡ ನರ್ಸಿಂಗ್ ಕಾಲೇಜಿನಲ್ಲಿ ಭಾರತೀಯ ರೆಡ್ಕ್ರಾಸ್ ಸಹಯೋಗದಲ್ಲಿ ನಡೆದ ಪ್ರಥಮ ಚಿಕಿತ್ಸೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಶುಶ್ರೂಷಕಿ, ಶುಶ್ರೂಷಕರ ಕೆಲಸ ಮಾಡುವವರು ಇದನ್ನು ಚೆನ್ನಾಗಿ ಅರಿಯಬೇಕು. ಪ್ರಥಮ ಚಿಕಿತ್ಸೆ ಸಾಯಬಹುದಾದ ವ್ಯಕ್ತಿಯನ್ನು ಉಳಿಸುವ ಪ್ರಯತ್ನದಲ್ಲಿ ಒಂದಾಗಿದೆ. ಅಗ್ನಿ ಅವಘಡ ಇರಬಹುದು, ನೀರಿನಿಂದ ಅಥವಾ ರಸ್ತೆ ಅಪಘಾತವಾದಾಗ ಪ್ರಥಮ ಚಿಕಿತ್ಸೆ ಇರುತ್ತದೆಯಾದರೂ ಎಲ್ಲವೂ ಭಿನ್ನವಾಗಿರುತ್ತವೆ. ಇವುಗಳನ್ನು ಚೆನ್ನಾಗಿ ಅರಿತಿದ್ದರೆ ಮುಂದೆ ಆಗಬಹುದಾದ ದೈಹಿಕ ಹಾನಿಯನ್ನು ತಡೆಗಟ್ಟಬಹುದು’ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿದ್ದ ರಾಷ್ಟ್ರೀಯ ಮಟ್ಟದ ಪ್ರಥಮ ಚಿಕಿತ್ಸಾ ಮಾಸ್ಟರ್ ತರಬೇತುದಾರ ಡಾ.ನಾಗರಾಜು ಕೆ.ಪಿ. ಪ್ರಥಮ ಚಿಕಿತ್ಸೆಯ ವಿಧಾನಗಳನ್ನು ವಿವರಿಸಿದರು. ಭಾರತೀಯ ರೆಡ್ಕ್ರಾಸ್ ಸೊಸೈಟಿ ನಿರ್ದೇಶಕ ಕೆ.ಟಿ.ಹನುಮಂತು ಗೌರವ ಅತಿಥಿಯಾಗಿದ್ದರು. ನರ್ಸಿಂಗ್ ಕಾಲೇಜು ಪ್ರಾಂಶುಪಾಲ ಪ್ರೊ.ಮಗೇಶ್ಕುಮಾರ್ ಜಿ.ಲೋನಿ ಅಧ್ಯಕ್ಷತೆ ವಹಿಸಿದ್ದರು. ಬಿಇಟಿ ಹೆಲ್ತ್ ಸೈನ್ಸ್ನ ನಿರ್ದೇಶಕ ಡಾ.ಟಿ.ತಮೀಜ್ಮಣಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.