ಮಳವಳ್ಳಿ (ಮಂಡ್ಯ ಜಿಲ್ಲೆ): ಸೆ.13 ಮತ್ತು 14ರಂದು ಆಯೋಜಿಸಿರುವ ತಾಲ್ಲೂಕಿನ ಶಿವನಸಮುದ್ರ ಬಳಿಯ ಗಗನಚುಕ್ಕಿ ಜಲಪಾತೋತ್ಸವ ವೀಕ್ಷಿಸಲು ಸಾವಿರಾರು ಪ್ರವಾಸಿಗರು ಆಗಮಿಸಿದ್ದಾರೆ. ಶನಿವಾರ ಸಂಜೆ 7ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ.
ಈ ಬಾರಿ ವೇದಿಕೆ ಕಾರ್ಯಕ್ರಮವನ್ನು ಮಲ್ಲಿಕ್ಯಾತನಹಳ್ಳಿ ಬಳಿ ಆಯೋಜಿಸಲಾಗಿದ್ದು, ಅಲ್ಲಿಂದ ಎರಡು ಕಿ.ಮೀ.ದೂರದಲ್ಲಿ ಇರುವ ಜಲಪಾತವನ್ನು ವೀಕ್ಷಿಸಲು 25 ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ.
ಜಲಪಾತದ ಬಳಿಗೆ ಯಾವುದೇ ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ. ಎರಡು ದಿನಗಳಲ್ಲಿ ಎರಡು ಲಕ್ಷಕ್ಕೂ ಅಧಿಕ ಮಂದಿ ಭಾಗಿಯಾಗುವ ನಿರೀಕ್ಷೆ ಇದೆ ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಹೇಳಿದರು.
ತಾಲ್ಲೂಕಿನ ವಿವಿಧೆಡೆಯಿಂದ ಬರುವ ಜನರಿಗೆ 50 ಉಚಿತ ಸಾರಿಗೆ ಬಸ್ ಕಲ್ಪಿಸಲಾಗಿದೆ.
ಎರಡು ದಿನ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ರುಚಿ ಹಾಗೂ ಶುಚಿಯಾದ ಊಟದ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಸುರಕ್ಷತೆಗೆ ನೂರಾರು ಪೊಲೀಸರ ಬಿಗಿಭದ್ರತೆ, ತುರ್ತು ಚಿಕಿತ್ಸೆ, ಪ್ರತ್ಯೇಕ ಶೌಚಾಲಯ, ವಿಶಾಲವಾದ ಪಾರ್ಕಿಂಗ್ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಪ್ರವಾಸಿಗರನ್ನು ರಂಜಿಸಲು ಪ್ರಖ್ಯಾತ ಕಲಾವಿದರಿಂದ ಜಾನಪದ, ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಲಿದೆ.
ವೇದಿಕೆಯ ಮುಂಭಾಗ ಸುಮಾರು 25 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದ.
ಪ್ಲಾಸ್ಟಿಕ್ ಮುಕ್ತ ಉತ್ಸವ: ಗಗನಚುಕ್ಕಿ ಜಲಪಾತೋತ್ಸವ ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಕೆ ಮುಕ್ತ ಆಗಿರಲಿದೆ. 40 ಮಳಿಗೆಗಳು ಸೇರಿದಂತೆ ಸಮಾರಂಭವನ್ನು ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತವಾಗಿಸುವ ಉದ್ದೇಶ ಹೊಂದಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.