ಮಳವಳ್ಳಿ: ‘ಆಗಸ್ಟ್ 25, 26ರಂದು ಗಗನಚುಕ್ಕಿ ಜಲಪಾತೋತ್ಸವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು’ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಸಾ.ರಾ.ಮಹೇಶ್ ಹೇಳಿದರು.
ಬುಧವಾರ ತಾಲ್ಲೂಕಿನ ಶಿವನಸಮುದ್ರ ಸಮೀಪದ ಗಗನಚುಕ್ಕಿ ಜಲಪಾತ ವೀಕ್ಷಣೆ ಮಾಡಿದ ನಂತರ ಅವರು ಮಾತನಾಡಿದರು.
‘ಆಗಸ್ಟ್ 11, 12ರಂದು ಮೈಸೂರು ಜಿಲ್ಲೆ ಚುಂಚನಕಟ್ಟೆ ಜಲಪಾತೋತ್ಸವ, 18,19 ಚಾಮರಾಜನಗರ ಜಿಲ್ಲೆ ಭರಚುಕ್ಕಿ ಜಲಪಾತೋತ್ಸವ ಹಾಗೂ 25,26 ರಂದು ಗಗನಚುಕ್ಕಿಯಲ್ಲಿ ಜಲಪಾತೋತ್ಸವ ನಡೆಯಲಿದೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಅಹ್ವಾನಿಸಲಾಗುವುದು. ಜಲಪಾತ ಸಮೀಪ ಅವಶ್ಯವಿರುವ ರಸ್ತೆ, ಪಾರ್ಕಿಂಗ್ ಸೌಲಭ್ಯ, ಶೌಚಾಲಯ ಸೇರಿ ಮೂಲಸೌಲಭ್ಯವನ್ನು ₹ 10 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗುವುದು’ ಎಂದು ಹೇಳಿದರು.
ಶಾಸಕ ಡಾ. ಕೆ.ಅನ್ನದಾನಿ ಮಾತನಾಡಿ ‘ಜಲಪಾತೋತ್ಸವದ ಅಂಗವಾಗಿ ವೈವಿಧ್ಯಮಯ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ಕಲಾತಂಡಗಳನ್ನು ಆಹ್ವಾನಿಸಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು’ ಎಂದರು.
ಪ್ರವಾಸೋದ್ಯಮ ಇಲಾಖೆ ನಿರ್ದೇಶ ರಾಮು, ಉಪನಿರ್ದೇಶಕ ಹರೀಶ್, ಉಪವಿಭಾಗಾಧಿಕಾರಿ ರಾಜೇಶ್, ಪುರಸಭೆ ಅಧ್ಯಕ್ಷ ರಿಯಾಜಿನ್, ಮುಖಂಡರಾದ ನಂದಕುಮಾರ್, ಹೊಯ್ಸಳ, ಆನಂದ, ವಿರೂಪಾಕ್ಷಮೂರ್ತಿ, ನಾಗಭೂಷಣ್, ಕಾಂತಾರಾಜು, ಶ್ರೀನಿವಾಸ ಇದ್ದರು.
ಅಧಿಕಾರಿಗಳ ವಿರುದ್ಧ ಆಕ್ರೋಶ: ‘ಜಲಪಾತ ವೀಕ್ಷಣೆಗೆ ಸಚಿವರು, ಶಾಸಕರು ಬಂದಿದ್ದರೂ ಕೆಲವು ಅಧಿಕಾರಿಗಳು ಬಂದಿಲ್ಲ ’ ಎಂದು ಸಾ.ರಾ.ಮಹೇಶ್ ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಉಪವಿಭಾಗಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಶಿಷ್ಟಾಚಾರ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.