
ಮಂಡ್ಯ: ‘ಗಾಂಧೀಜಿ ಅವರು ಸಮಾನತೆ ತತ್ವ ಸಾರಿದ ಮಹಾಪುರುಷರಾಗಿದ್ದು, ಸತ್ಯವೇ ದೇವರು ಎನ್ನುವುದನ್ನೂ ಹೇಳಿ ಹೋಗಿದ್ದಾರೆ’ ಎಂದು ಮೈಸೂರು ವಿದ್ವಾಂಸ ರಾಮೇಗೌಡ (ರಾಗೌ) ಹೇಳಿದರು.
ಕರ್ನಾಟಕ ಸಂಘ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಮಂಡ್ಯ ವಿಶ್ವವಿದ್ಯಾಲಯ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ನಗರದ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಶುಕ್ರವಾರ ಮುಕ್ತಾಯಗೊಂಡ ‘ಸತ್ಯಶೋಧನೆ–100’ ಗಾಂಧೀಜಿ ಎಂಬ ವರ್ತಮಾನ ಮೂರು ದಿನಗಳ ಚಿಂತನ– ಮಂಥನದ ಸಮಾರೋಪದ ಅಧ್ಯಕ್ಷತೆ ವಹಿಸಿ ಅವರು ಮಾನಾಡಿದರು.
ಅಧ್ಯಾತ್ಮದ ಪುನರುತ್ಥಾನ ಬಂದಿದ್ದೇ ರಾಮಕೃಷ್ಣ ಪರಮಹಂಸರು ಹಾಗೂ ಸ್ವಾಮಿ ವಿವೇಕಾನಂದರಿಂದ ಎನ್ನುವುದನ್ನು ಗಾಂಧೀಜಿ ಹೇಳಿದ್ದಾರೆ. ಎಲ್ಲಿಯೂ ನಾನೇ ಮಾಡುತ್ತೇನೆ ಅಥವಾ ನನ್ನಿಂದ ಮಾತ್ರ ಸಾಧ್ಯ ಎನ್ನುವುದನ್ನು ಹೇಳಿಲ್ಲ ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಮಾತನಾಡಿ, ‘ಬಹುತೇಕ ರಾಜಕಾರಣಿಗಳು ಮತಗಳನ್ನು ಮತ್ತು ಯುವ ಸಮೂಹವನ್ನು ಕೊಂಡುಕೊಳ್ಳುತ್ತಿದ್ದಾರೆ. ಹಾಗಾಗಿ ನಾವು ಪ್ರಶ್ನೆ ಮಾಡುವ ಶಕ್ತಿಯನ್ನೇ ಕಳೆದುಕೊಳ್ಳುತ್ತಿದ್ದೇವೆ. ಗಾಂಧೀಜಿ ಅವರ ಮಾತನ್ನು ಒಪ್ಪಿಕೊಂಡು ಹಾಗೂ ಅಪ್ಪಿಕೊಂಡು ಹೋಗುವುದು ಮುಖ್ಯವಾಗಬೇಕು. ಗಾಂಧಿ ಪ್ರಭಾವಕ್ಕೆ ಒಳಗಾಗಿರುವ ವ್ಯಕ್ತಿಗಳು ಜಿ.ಮಾದೇಗೌಡ ಅವರ ಹಾದಿಯಾಗಿ ರಾಜ್ಯದಲ್ಲಿ ಹಲವರು ಸಿಗುತ್ತಾರೆ’ ಎಂದು ತಿಳಿಸಿದರು.
‘ಗಾಂಧೀಜಿ ಅವರ ಶಿಕ್ಷಣದ ನೆಲೆಗಳು’ ವಿಷಯ ಮಂಡಿಸಿದ ಮೈಸೂರು ವಿವಿ ಸಂಶೋಧಕಿ ಶಬಾನಾ, ಗಾಂಧೀಜಿ ಅವರ ತತ್ವಗಳನ್ನು ಅಳವಡಿಸಿಕೊಂಡಿದ್ದರೆ ದೇಶ ಉತ್ತಮ ಸ್ಥಿತಿಯಲ್ಲಿರುತ್ತಿತ್ತು. ಗಾಂಧೀಜಿ ಅವರ ನಿರ್ಲಕ್ಷ್ಯ ಮನೋಭಾವ ಸಲ್ಲದು. ಶಿಕ್ಷಣ ಇರಬೇಕಾದದ್ದು ಯಾವ ನೆಲೆಯಲ್ಲಿ ಹಾಗೂ ಅದರಿಂದ ಏನೆಲ್ಲಾ ಪಡೆದುಕೊಳ್ಳುತ್ತಿದ್ದೇವೆ ಎಂಬ ಪ್ರಶ್ನೆ ಹುಟ್ಟಿಕೊಳ್ಳಬೇಕಿತ್ತು. ಆದರೆ ಇದರ ಬಗ್ಗೆ ಯೋಚನೆ ಮಾಡದಿರುವುದೇ ದುರಂತ’ ಎಂದರು.
ಕಾರ್ಯಕ್ರಮದಲ್ಲಿ ಗಾಂಧಿ ಭವನ ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಮಂಡ್ಯ ಸರ್ವೋದಯ ಮಂಡಳದ ಎಂ.ಬಿ. ಬೋರೇಗೌಡ, ಪಟೇಲ್ ಚಾರಿಟಬಲ್ ಟ್ರಸ್ಟ್ನ ಜೆ.ರಾಜಶೇಖರಯ್ಯ, ವಿದ್ಯಾರ್ಥಿಗಳಾದ ಸುಹೇಲ್, ಅಭೀಜ್ಞಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.