ಬೆಳಕವಾಡಿ: ಗ್ರಾಮದ ಮುಸ್ಲಿಂ ಸಮುದಾಯದವರು ಸೋಮವಾರ ಇಲ್ಲಿನ ಫಕೀರಮಠದಲ್ಲಿ ಸಾಮೂಹಿಕವಾಗಿ ಗಂಧೋತ್ಸವ ಆಚರಣೆ ಮಾಡಿದರು.
ಗ್ರಾಮದ ಮುಸ್ಲಿಂ ಸಮುದಾಯದ ಪ್ರತಿ ಕುಟುಂಬದವರು ಮನೆಯಲ್ಲಿ ಗಂಧವನ್ನು ತೇದು ಅದನ್ನು ಜಾಮ ಮಸೀದಿಯಲ್ಲಿ ಇರಿಸಿದ್ದ ಬಿಂದಿಗೆಯಲ್ಲಿ ಹಾಕಿದರು. ನಂತರ ಹಝ್ರತ್ ಭಕ್ತ ಅಯಾಜ್ ಪಾಷ ಸಂಜೆ ಮಸೀದಿಯಿಂದ ಗಂಧ ತುಂಬಿದ ಬಿಂದಿಗೆಯನ್ನು ಹೊತ್ತು ಪ್ರಮುಖ ರಸ್ತೆಯಲ್ಲಿ ಬ್ಯಾಂಡ್ ಮೆರವಣಿಗೆಯಲ್ಲಿ ಸಾಗಿ ಜವನಗಹಳ್ಳಿ ಬಳಿ ಫಕೀರಮಠದಲ್ಲಿರುವ ಧರ್ಮಗುರು ಹಝ್ರತ್ ಕ್ವಾಜ ಗಂಜುಲ್ ಇಸ್ರಾರ್ ಸಮಾಧಿಗೆ , ಅಲಂಕಾರ ಮಾಡಿ ಗಂಧವನ್ನು ಲೇಪಿಸಿ ಪೂಜೆ ಸಲ್ಲಿಸಿ ದರ್ಶನ ಪಡೆದರು.
ಮೆರವಣಿಗೆ ಉದ್ದಕ್ಕೂ ಮುಸ್ಲಿಂ ಯುವಕರು ಬ್ಯಾಂಡ್ ವಾದ್ಯದ ಸದ್ದಿಗೆ ಹೆಜ್ಜೆ ಹಾಕಿ ನೃತ್ಯ ಮಾಡಿದರು. ಪಕೀರಮಠದ ಆವರಣವು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿತ್ತು. ರಾತ್ರಿ 10 ಗಂಟೆಗೆ ಟಿಪ್ಪುಕವಾಲಿ ತಂಡದ ಹರ್ಷಿಯಾ ನಾಜ್ , ಜಾಮೀರ್ ಶೇಜಾತ್ ಅವರಿಂದ ಕಾರ್ಯಕ್ರಮ ನಡೆಯಿತು. ಭಕ್ತರಿಗೆ ಭೋಜನದ ವ್ಯವಸ್ಥೆ ಕಲ್ಪಿಸಲಾಗಿತ್ತು. ಪಿಎಸ್ಐ ಬಿ.ವಿ.ಪ್ರಕಾಶ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.
ಜಾಮ ಮಸೀದಿ ಅಧ್ಯಕ್ಷ ಅಬ್ದುಲ್ ಕಲೀಲ್, ಕಾರ್ಯದರ್ಶಿ ಅರ್ಷದ್ ಪಾಷಾ, ಸದಸ್ಯರಾದ ಫಯಾಜ್ ಅಹಮದ್, ಅಪ್ಸರ್ ಪಾಷಾ, ಶೌಕತ್ ಅಲಿ ಬೇಗ್, ಅಲಿಂ ಪಾಷಾ, ಚಾಂದ್ ಪಾಷಾ, ಇನಾಯತ್ ಪಾಷಾ, ರಿಜ್ವಾನ್ ಪಾಷಾ, ಮುಖಂಡರಾದ ಮಕ್ಬುಲ್ ಅಹಮದ್,ಎಜಾಸ್ ಪಾಷಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.