
ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ವಿಜೃಂಭಣೆಯಿಂದ ಗಣೇಶಮೂರ್ತಿ ಮೆರವಣಿಗೆ ನಡೆಯಿತು
ಮಂಡ್ಯ: ತಾಲ್ಲೂಕಿನ ಕೆರಗೋಡು ಪಡುವಲಬಾಗಿಲು ಆಂಜನೇಯ ದೇಗುಲದ ಬಳಿ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿ ವಿಸರ್ಜನೆಯ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.
ಯುವಕರ ಗುಂಪು ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು.
ನಗರದ ಕಾಳಿಕಾಂಬ ದೇವಾಲಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮತ್ತು ಶಾಸಕ ಪಿ.ರವಿಕುಮಾರ್ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಭಾನುವಾರ ಬೈಕ್ ರ್ಯಾಲಿಗೆ ಚಾಲನೆ ನೀಡಲಾಯಿತು.
ಕಾಂಗ್ರೆಸ್ ಮುಖಂಡರು ಸೇರಿದಂತೆ ನೂರಾರು ಕಾರ್ಯಕರ್ತರು ಕೆರಗೋಡು ಗ್ರಾಮಕ್ಕೆ ರ್ಯಾಲಿಯಲ್ಲಿ ಹೊರಟರು. ಎನ್.ಚಲವರಾಯಸ್ವಾಮಿ ಹಾಗೂ ಎಲ್ಲರೂ ಹಳದಿ ಕೆಂಪು ಬಣ್ಣದ ಕನ್ನಡದ ಶಾಲು ತೊಟ್ಟು ಗಮನ ಸೆಳೆದರು. ಬೈಕ್ ರ್ಯಾಲಿ ವೇಳೆ ಚಿಕ್ಕಮಂಡ್ಯ, ಸಾತನೂರು ಬಳಿ ಬೃಹತ್ ಬೆಲ್ಲದ ಹಾರ, ಸೇಬಿನ ಹಾರ ಹಾಕಿ ಸಚಿವರು, ಶಾಸಕರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಮುಖಂಡರಾದ ಕೆ.ಕೆ. ರಾಧಾಕೃಷ್ಣ, ಟಿ.ತ್ಯಾಗರಾಜು, ಎಚ್.ಎನ್. ಯೋಗೇಶ್, ಅಪ್ಪಾಜಿಗೌಡ, ಚಿದಂಬರ್, ಸಿ.ಡಿ.ಗಂಗಾಧರ, ವಿಜಯಕುಮಾರ್ ಇದ್ದರು.
‘ಡಿಕೆಶಿ ಸಿಎಂ ವಿಚಾರ ಹೈಕಮಾಂಡ್ ನಿರ್ಧಾರ’
ಮಂಡ್ಯ: ‘ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೊಡುವುದು ಅಥವಾ ಬಿಡುವುದು ಹೈಕಮಾಂಡ್ಗೆ ಬಿಟ್ಟ ವಿಚಾರ ನಾನು ಸಚಿವನಾಗಿದ್ದೇನೆ ಅಷ್ಟೇ, ವೈಯಕ್ತಿಕ ಅಭಿಪ್ರಾಯ ಹೇಳಲು ಆಗಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
‘ಸಿ.ಎಂ. ವಿಚಾರದಲ್ಲಿ ಮಾಧ್ಯಮದ ಮುಂದೆ ಮಾತನಾಡುವ ಹಕ್ಕು ಇಲ್ಲ. ಹೈಕಮಾಂಡ್ ಏನಾದರೂ ನನ್ನ ಅಭಿಪ್ರಾಯ ಕೇಳಿದರೆ ಹೇಳಬಹುದು, ಶಾಸಕರು, ನಾಯಕರು ಮಾತನಾಡುವುದನ್ನು ಹೈಕಮಾಂಡ್ ಗಮನಿಸುತ್ತಿರುತ್ತದೆ. ಸಚಿವ ಸಂಪುಟ, ಡಿ.ಕೆ.ಶಿವಕುಮಾರ್ ಅವರ ವಿಚಾರ ಹೈಕಮಾಂಡ್ ಮುಂದೆ ಇದ್ದು, ಎಲ್ಲವನ್ನೂ ಸರಿಯಾಗಿ ನಿಭಾಯಿಸುತ್ತದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.
ಕಾಂಗ್ರೆಸ್ನಲ್ಲಿ ಸಚಿವ ಸ್ಥಾನ ಬೇಕು ಎಂದರೆ ಹೈಕಮಾಂಡ್ಗೆ ಹಣ ಕೊಡಬೇಕೆನ್ನುವ ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಮತ್ತು ನಾರಾಯಣಸ್ವಾಮಿಗೆ ರಾಜಕೀಯ ವಿವೇಕವೇ ಇಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡಕ್ಕೂ ಹೈಕಮಾಂಡ್ ಇದ್ದು, ಕಾಂಗ್ರೆಸ್ ಆಡಳಿತ ಮಾಡುವಾಗ ಜನರು ಭ್ರಷ್ಟಾಚಾರದ ಬಗ್ಗೆ ಮಾತನಾಡಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಾಗ ಭ್ರಷ್ಟಾಚಾರದ ಮಾತು ಬರುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.