ಕಿಕ್ಕೇರಿ: ‘ಶುಂಠಿ ಮಾರುಕಟ್ಟೆ ಬೆಲೆಯು ಪಾತಾಳಕ್ಕೆ ಕುಸಿದಿದ್ದು, ರೈತ ಕಂಗಲಾಗಿದ್ದಾನೆ. ಸರ್ಕಾರ ಮಧ್ಯ ಪ್ರವೇಶಿಸಿ ಪ್ರತಿ ಕ್ವಿಂಟಾಲ್ಗೆ ಕನಿಷ್ಠ ₹7 ಸಾವಿರ ಬೆಂಬಲ ಬೆಲೆ ನೀಡಬೇಕು’ ಎಂದು ರೈತಮುಖಂಡ ಗೋವಿಂದನಹಳ್ಳಿ ನ್ಯಾಯಬೆಲೆ ಸೋಮಣ್ಣ ಆಗ್ರಹಿಸಿದರು.
ಜಿಲ್ಲಾಧಿಕಾರಿ ಡಾ. ಕುಮಾರ ಅವರ ಕಚೇರಿಗೆ ಬುಧವಾರ ರೈತರ ನಿಯೋಗದೊಂದಿಗೆ ತೆರಳಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.
‘ಕಳೆದ ಎರಡು ವರ್ಷಗಳಲ್ಲಿ ಕ್ವಿಂಟಾಲ್ಗೆ ₹10ರಿಂದ ₹13ಸಾವಿರವಿದ್ದ ಶುಂಠಿ ಬೆಲೆ ಪ್ರಸ್ತುತ ಕ್ವಿಂಟಾಲ್ಗೆ ₹1,300 ರಿಂದ ₹1,500ಕ್ಕೆ ಕುಸಿದಿದೆ. ಸಾಲ ಮಾಡಿಕೊಂಡು ಬೇಸಾಯ ಮಾಡುತ್ತಿರುವ ರೈತರ ಸಂಕಷ್ಟ ಕೇಳುವವರೇ ಇಲ್ಲದಂತಾಗಿದೆ. ಎಕರೆಗೆ ₹4 ರಿಂದ ₹5 ಲಕ್ಷ ಖರ್ಚು ಮಾಡಿ ಕೇವಲ ₹1ರಿಂದ ₹2 ಲಕ್ಷ ಪಡೆಯಬೇಕಿದೆ. ಎಕರೆಗೆ ಕನಿಷ್ಟ ₹3ಲಕ್ಷ ನಷ್ಟವಾಗುತ್ತಿದೆ’ ಎಂದರು.
‘ರೈತ ಸಂಕಷ್ಟದಲ್ಲಿದಾಗ ರಕ್ಷಿಸಲು ವಿವಿಧ ಯೋಜನೆಗಳಿವೆ. 2012-13ರಲ್ಲಿ ಅರಿಶಿಣ ಬೆಲೆ ಕುಸಿದಾಗ ಎಂಐಸಿ ಯೋಜನೆ ಜಾರಿ ಮಾಡಲಾಗಿದೆ. 2016-17ರಲ್ಲಿ ಅರುಣಾಚಲ ಪ್ರದೇಶದಲ್ಲಿ ಶುಂಠಿ ಬೆಲೆ ಕುಸಿತವಾದಾಗ ಅಲ್ಲಿನ ಸರ್ಕಾರ ಎಂಐಎಸ್ ಯೋಜನೆಯಡಿಯಲ್ಲಿ ಶುಂಠಿ ಖರೀದಿಸಿದೆ. ಮಿಜೋರಾಂನಲ್ಲಿ 2024ರಲ್ಲಿ ಶುಂಠಿಗೆ ಕ್ವಿಂಟಾಲ್ಗೆ ₹5 ಸಾವಿರ ಬೆಂಬಲ ಬೆಲೆ ನೀಡಿದೆ. ರಾಜ್ಯದಲ್ಲೂ ಇದೇ ವ್ಯವಸ್ಥೆ ಜಾರಿ ಮಾಡಬೇಕು’ ಎಂದು ಒತ್ತಾಯಿಸಿದರು.
‘ರಾಜ್ಯದ ರೈತರು ಇಂತಹ ಸಂದಿಗ್ಧ ಸ್ಥಿತಿಯಲ್ಲಿರುವಾಗ ರಾಜ್ಯಸರ್ಕಾರ ಮಧ್ಯಪ್ರವೇಶಿಸಿ ಶುಂಠಿ ಖರೀದಿಸಿ ಕನಿಷ್ಟ ಕ್ವಿಂಟಾಲ್ಗೆ ₹7 ಸಾವಿರ ಬೆಂಬಲ ಬೆಲೆ ನೀಡಬೇಕು. ಈ ಬಗ್ಗೆ ಜಿಲ್ಲಾಡಳಿತ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು’ ಎಂದರು.
ಮುಖಂಡರಾದ ಶ್ಯಾಮಣ್ಣ, ಮಾರ್ಗೋನಹಳ್ಳಿ ಸಿ. ದಯಾನಂದ, ಗೋವಿಂದ, ಆನೆಗೊಳ ಶಂಭುಗೌಡ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.