ADVERTISEMENT

‘ಸುಪ್ರೀಂ’ ತೀರ್ಪು ಸಂವಿಧಾನದ ಆಶಯಕ್ಕೆ ಪೂರಕವಿಲ್ಲ

ಸಂವಿಧಾನ ದಿನಾಚರಣೆಯಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಮೂರ್ತಿ ಗೋಪಾಲಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 10:40 IST
Last Updated 29 ನವೆಂಬರ್ 2019, 10:40 IST
ಮದ್ದೂರು ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಪಾಲಗೌಡ ಅವರನ್ನು ಸನ್ಮಾನಿಸಲಾಯಿತು
ಮದ್ದೂರು ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಪಾಲಗೌಡ ಅವರನ್ನು ಸನ್ಮಾನಿಸಲಾಯಿತು   

ಮದ್ದೂರು: ಸುಪ್ರೀಂಕೋರ್ಟ್ ನೀಡಿದ ಇತ್ತೀಚಿನ ತೀರ್ಪುಗಳು ಸಂವಿಧಾನದ ಆಶಯಗಳಿಗೆ ಪೂರಕವಾಗಿಲ್ಲ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಹೇಳಿದರು.

ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ವಕೀಲರ ಸಂಘ ಹಾಗೂ ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ವ್ಯಕ್ತಿ ಸ್ವಾತಂತ್ರ್ಯ, ಜಾತ್ಯತೀತ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯುವುದು ಸುಪ್ರೀಂ ಕೋರ್ಟ್‌ನ ಕರ್ತವ್ಯ. ಈ ಕೆಲಸದಲ್ಲಿ ಉದಾಸೀನ ಸಲ್ಲದು. ಕಾನೂನಿಗೆ ಧಕ್ಕೆ ತರುವ ಅಂಶಗಳಿಗೆ ಸುಪ್ರೀಂಕೋರ್ಟ್‌ ಮಾನ್ಯತೆ ನೀಡಿದರೆ, ಪ್ರಜಾಪ್ರಭುತ್ವದ ನಾಶಕ್ಕೆ ಮುನ್ನುಡಿ ಬರೆದಂತೆ ಆಗುತ್ತದೆ ಎಂದು ತಿಳಿಸಿದರು.

ADVERTISEMENT

ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗ ವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ಬೆಳವಣಿಗೆಗಳು ನಡೆಯುತ್ತಿವೆ. ಪ್ರಜಾಪ್ರಭುತ್ವ ಉಳಿಯಲು ನ್ಯಾಯಾಂಗ ವ್ಯವಸ್ಥೆಗೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು. ಇದರಲ್ಲಿ ವಕೀಲರ ಪಾತ್ರವೂ ಮಹತ್ವದ್ದಾಗಿದೆ. ಸಂವಿಧಾನದ ಪಾವಿತ್ರ್ಯವನ್ನು ಎತ್ತಿ ಹಿಡಿಯಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಜಿ.ಎನ್.ಸತ್ಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಕೀಲರಾದ ಬಿ.ಅಪ್ಪಾಜಿಗೌಡ, ಬಿ.ರಾಮಕೃಷ್ಣೇಗೌಡ, ಬಾಲರಾಜು, ಎಚ್.ಮಾದೇಗೌಡ, ಬಿ.ವಿ.ಶಿವರಾಂ, ಶೇಖರ್, ಜಗದೀಶ್ ಇದ್ದರು.

‘ಅಸ್ಪೃಶ್ಯತೆ ಇನ್ನೂ ಜೀವಂತ’

ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ, ಹಿಂಸೆ ಮುಂದುವರಿದಿದೆ. ಎಲ್ಲರಿಗೂ ಸಂವಿಧಾನ ಖಾತರಿ ಪಡಿಸಿದ ಸಾಮಾಜಿಕ, ಆರ್ಥಿಕ ನ್ಯಾಯ ಸಿಕ್ಕಿಲ್ಲ. ಸಂವಿಧಾನ ರಕ್ಷಣೆಯಿಂದ ಮಾತ್ರ ಎಲ್ಲರಿಗೂ ನ್ಯಾಯ ಖಾತರಿ ಪಡಿಸಲು ಸಾಧ್ಯ. ಅಸಮಾನತೆ, ಕೋಮುವಾದ, ಅನ್ಯಾಯಗಳನ್ನು ತೊಲಗಿಸಲು ನಾಗರಿಕರು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.