ಶ್ರೀರಂಗಪಟ್ಟಣ (ಮಂಡ್ಯ): ತಾಲ್ಲೂಕಿನ ಪಾಲಹಳ್ಳಿಯ ವಿನೋದ್ ಎಂಬುವವರ ಹಳ್ಳಿಕಾರ್ ತಳಿಯ ಒಂಟಿ ಎತ್ತು ₹7.68 ಲಕ್ಷಕ್ಕೆ ಮಾರಾಟವಾಗಿದೆ. ಚಿಕ್ಕಮಗಳೂರಿನ ತೇಗೂರು ಮಂಜುನಾಥ್ ಈ ಎತ್ತನ್ನು ಭಾನುವಾರ ಖರೀದಿಸಿದರು.
ಒಂದು ವರ್ಷದ ಹಿಂದೆ ವಿನೋದ್ ಈ ಎತ್ತನ್ನು ₹4.5 ಲಕ್ಷಕ್ಕೆ ಖರೀದಿಸಿದ್ದರು. ಅದಕ್ಕೆ ‘ಕಿಂಗ್ ಗಗನ್’ ಎಂದು ಹೆಸರಿಟ್ಟಿದ್ದರು. ಹಳ್ಳಿಕಾರ್ ತಳಿಯ ಒಂಟಿ ಎತ್ತು ಇಷ್ಟು ಬೆಲೆಗೆ ಮಾರಾಟವಾಗಿರುವುದು ಈ ಭಾಗದಲ್ಲಿ ಇದೇ ಮೊದಲು ಎಂದು ಗ್ರಾಮಸ್ಥರು ಹೇಳಿದ್ದಾರೆ.
ಈ ಎತ್ತು ಇದುವರೆಗೆ 80ಕ್ಕೂ ಹೆಚ್ಚು ಎತ್ತಿನಗಾಡಿ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಿದೆ. ಇದು ಮತ್ತೊಂದು ಎತ್ತಿನ ಜತೆಗೂಡಿ ಸುಮಾರು 70 ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನ ಗಳಿಸಿದೆ. ಎತ್ತನ್ನು ಖರೀದಿದಾರರಿಗೆ ಹಸ್ತಾಂತರಿಸುವ ಮುನ್ನ ವಿನೋದ್ ಮತ್ತು ಅವರ ಕುಟುಂಬ ಸದಸ್ಯರು ಅದಕ್ಕೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು.
‘ನನ್ನ ಬಳಿ ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಸಾಧನೆ ಮಾಡಿರುವ ‘ಅಪ್ಪಣ್ಣ’ ಹೆಸರಿನ ಮತ್ತೊಂದು ಹಳ್ಳಿಕಾರ್ ತಳಿಯ ಎತ್ತು ಇದ್ದು, ಅದೂ ₹ 7 ಲಕ್ಷ ಬೆಲೆ ಬಾಳುತ್ತದೆ’ ಎಂದು ವಿನೋದ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.