ADVERTISEMENT

ಹೇಮಾವತಿ ಬಡಾವಣೆ: ಇ-ಸ್ವತ್ತು ದಾಖಲೆ ವಿತರಣೆ

​ಪ್ರಜಾವಾಣಿ ವಾರ್ತೆ
Published 23 ಮೇ 2023, 14:09 IST
Last Updated 23 ಮೇ 2023, 14:09 IST
ಕೆ.ಆರ್.ಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷೆ ಮಹಾದೇವಿ ನಂಜುಂಡ ಅವರು ಹೇಮಾವತಿ ಬಡಾವಣೆಯ ನಿವಾಸಿಗಳಿಗೆ ಇ-ಸ್ವತ್ತು ದಾಖಲೆಗಳನ್ನು ಹಸ್ತಾಂತರಿಸಿದರು
ಕೆ.ಆರ್.ಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷೆ ಮಹಾದೇವಿ ನಂಜುಂಡ ಅವರು ಹೇಮಾವತಿ ಬಡಾವಣೆಯ ನಿವಾಸಿಗಳಿಗೆ ಇ-ಸ್ವತ್ತು ದಾಖಲೆಗಳನ್ನು ಹಸ್ತಾಂತರಿಸಿದರು   

ಕೆ.ಆರ್.ಪೇಟೆ: ಕಳೆದ 25 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಹೇಮಾವತಿ ಬಡಾವಣೆಯ ನಿವೇಶನಗಳು ಹಾಗೂ ಮನೆಯ ಖಾತಾ ವಿತರಣೆ ಆಂದೋಲನಕ್ಕೆ ಇಲ್ಲಿನ ಪುರಸಭಾ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು.

ಪುರಸಭಾ ಅಧ್ಯಕ್ಷೆ ಮಹಾದೇವಿ ನಂಜುಂಡ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಡಾವಣೆಯ ಹಲವು ನಿವಾಸಿಗಳಿಗೆ ಇ-ಸ್ವತ್ತು ದಾಖಲೆಗಳನ್ನು ಹಸ್ತಾಂತರಿಸಲಾಯಿತು.

ಪುರಸಭಾ ಅಧ್ಯಕ್ಷೆ ಮಹಾದೇವಿ ನಂಜುಂಡ ಮಾತನಾಡಿ, ‘ಪಟ್ಟಣದ ದೊಡ್ಡ ಬಡಾವಣೆಗಳಲ್ಲಿ ಒಂದಾದ ಹೇಮಾವತಿ ಬಡಾವಣೆಯ ನಿವೇಶನ ವಿತರಣೆ ಗೊಂದಲ ಲೋಕಾಯುಕ್ತ ತನಿಖೆಗೆ ಒಳಪಟ್ಟಿದ್ದರಿಂದ ಅಲ್ಲಿ ಮನೆ ಕಟ್ಟಿರುವವರಿಗೆ, ನಿವೇಶನ ಹೊಂದಿರುವವರಿಗೆ ಖಾತೆ ಮಾಡಿಕೊಟ್ಟಿರಲಿಲ್ಲ. ಹೀಗಾಗಿ ಇಲ್ಲಿನ ನಿವಾಸಿಗಳು ಕಳೆದ 25 ವರ್ಷಗಳಿಂದ ಸಂಕಷ್ಟದಲ್ಲಿದ್ದರು. ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಿತ್ತು’ ಎಂದರು.

ADVERTISEMENT

‘ಈ ಸಂಬಂಧ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ನಾರಾಯಣಗೌಡ ಅವರು ಸರ್ಕಾರದ ಗಮನಕ್ಕೆ ತಂದಿದ್ದರಿಂದ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಲು ಆದೇಶವಾಗಿತ್ತು. ಹೀಗಾಗಿ ಮೊದಲನೇ ಹಂತದಲ್ಲಿ 700ಕ್ಕೂ ಹೆಚ್ಚಿನ ಫಲಾನುಭವಿಗಳಿಗೆ ಖಾತೆ ಮಾಡಿ ಇ-ಸ್ವತ್ತು ದಾಖಲೆ ವಿತರಿಸಲು ಆದೇಶವಾಗಿತ್ತು. ಆದರೆ ದಾಖಲೆ ಕ್ರೋಡೀಕರಿಸಿ ವಿತರಣೆಗೆ ಚಾಲನೆ ನೀಡುವ ಹೊತ್ತಿಗೆ ವಿಧಾನಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಇದೀಗ ಇ- ಸ್ವತ್ತು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ’ ಎಂದು ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ಎಂ.ಬಸವರಾಜು, ಕಂದಾಯ ನಿರೀಕ್ಷಕ ರವಿಕುಮಾರ್, ವ್ಯವಸ್ಥಾಪಕ ಸೋಮಶೇಖರ್, ಪುರಸಭಾ ಸದಸ್ಯರಾದ ಡಿ. ಪ್ರೇಮಕುಮಾರ್, ಕೆ. ಆರ್.ರವೀಂದ್ರಬಾಬು, ಬಸ್ ಸಂತೋಷ್ ಕುಮಾರ್, ಪ್ರಮೋದ್, ಎಚ್.ಡಿ.ಅಶೋಕ್, ಸುಗುಣ ರಮೇಶ್, ಸೌಭಾಗ್ಯ ಉಮೇಶ್, ಮುಖಂಡರಾದ ಎಂ.ಟಿ. ಲೋಕೇಶ್, ಅಶ್ವತ್ಥ ಲಕ್ಷ್ಮೀ, ನಾರಾಯಣ್, ರಾಜೇಗೌಡ, ಬಡಾವಣೆಯ ನಿವಾಸಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.