ADVERTISEMENT

ಶ್ರೀರಂಗಪಟ್ಟಣ | ಎಚ್‌ಐವಿ, ಏಡ್ಸ್‌ ತಡೆಗೆ ಸಂಯಮ ಮುಖ್ಯ: ಡಾ.ಸವಿತಾ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 6:50 IST
Last Updated 11 ಸೆಪ್ಟೆಂಬರ್ 2025, 6:50 IST
ಶ್ರೀರಂಗಪಟ್ಟಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ನಿಯಂತ್ರಣ ಹಾಗೂ ಪ್ರತಿಬಂಧಕ ಘಟಕ ಬುಧವಾರ ಏರ್ಪಡಿಸಿದ್ದ ಎಚ್‌ಐವಿ–ಏಡ್ಸ್‌ ತಡೆಯಲು ಬೀದಿ ನಾಟಕದ ಮೂಲಕ ಜನ ಜಾಗೃತಿ ಆಂದೋಲನಕ್ಕೆ ಸ್ತ್ರೀ ರೋಗ ತಜ್ಞೆ ಡಾ.ಸವಿತಾ ಚಾಲನೆ ನೀಡಿದರು
ಶ್ರೀರಂಗಪಟ್ಟಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ನಿಯಂತ್ರಣ ಹಾಗೂ ಪ್ರತಿಬಂಧಕ ಘಟಕ ಬುಧವಾರ ಏರ್ಪಡಿಸಿದ್ದ ಎಚ್‌ಐವಿ–ಏಡ್ಸ್‌ ತಡೆಯಲು ಬೀದಿ ನಾಟಕದ ಮೂಲಕ ಜನ ಜಾಗೃತಿ ಆಂದೋಲನಕ್ಕೆ ಸ್ತ್ರೀ ರೋಗ ತಜ್ಞೆ ಡಾ.ಸವಿತಾ ಚಾಲನೆ ನೀಡಿದರು   

ಶ್ರೀರಂಗಪಟ್ಟಣ: ‘ಪುರುಷರು ಹಾಗೂ ಮಹಿಳೆಯರು ಲೈಂಗಿಕ ತೃಷೆಯ ವಿಷಯದಲ್ಲಿ ಸಂಯಮ ಅನುಸರಿಸಿದರೆ ಎಚ್ಐವಿ–ಏಡ್ಸ್‌ ಕಾಯಿಲೆ ತಡೆಯಬಹುದು’ ಎಂದು ಸ್ತ್ರೀ ರೋಗ ತಜ್ಞೆ ಡಾ.ಸವಿತಾ ಹೇಳಿದರು.

ಪಟ್ಟಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ನಿಯಂತ್ರಣ ಹಾಗೂ ಪ್ರತಿಬಂಧಕ ಘಟಕ ಬುಧವಾರ ಏರ್ಪಡಿಸಿದ್ದ ಎಚ್‌ಐವಿ–ಏಡ್ಸ್‌ ತಡೆಗೆ ಬೀದಿ ನಾಟಕಗಳ ಮೂಲಕ ಜನ ಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘ಎಚ್‌ಐವಿ– ಏಡ್ಸ್‌ ಕಾಯಿಲೆಗೆ ಇದುವರೆಗೆ ನಿರ್ದಿಷ್ಟ ಔಷಧ ಕಂಡು ಹಿಡಿಯಲು ಆಗಿಲ್ಲ. ಈ ಕಾಯಿಲೆ ಬಂದರೆ ಸಾವು ಖಚಿತ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಮೂಲಕ ಸಾವನ್ನು ಕೆಲವು ದಿನ ಮುಂದೂಡಬಹುದು ಅಷ್ಟೆ. ಅಸುರಕ್ಷಿತ ಲೈಂಗಿಕತೆ, ಪರೀಕ್ಷಿಸದೇ ಮಾಡುವ ರಕ್ತದಾನ ಮತ್ತು ಚುಚ್ಚು ಮದ್ದು ಪಡೆದರೆ ಈ ಕಾಯಿಲೆ ಬರುವ ಸಾಧ್ಯತೆ ಹೆಚ್ಚು. ಹಾಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು’ ಎಂದು ಅವರು ಸಲಹೆ ನೀಡಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್‌.ಡಿ. ಬೆನ್ನೂರ ಮಾತನಾಡಿ, ‘ಎಚ್ಐವಿ–ಏಡ್ಸ್‌ ಮುಕ್ತ ಮಂಡ್ಯ ಜಿಲ್ಲೆ ಮಾಡುವ ಉದ್ದೇಶದಿಂದ ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಬೀದಿ ನಾಟಕ ಇತರ ಮಾಧ್ಯಮಗಳ ಮೂಲಕ ಜನ ಜಾಗೃತಿ ಮೂಡಿಸಲಾಗುತ್ತಿದೆ. ಏಡ್ಸ್‌ ರೋಗಿಗಳ ಬಗ್ಗೆ ಅಪಹಾಸ್ಯ ಮಾಡುವ ಬದಲು ಸಾರ್ವಜನಿಕರು ಮತ್ತು ಸಂಘ, ಸಂಸ್ಥೆಗಳು ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕು’ ಎಂದು ಹೇಳಿದರು.

ADVERTISEMENT

ಸಂತೆ ಕಸಲಗೆರೆಯ ಶಿವಗಂಗಾ ಸಾಂಸ್ಕೃತಿಕ ಯುವಕ ಕಲಾ ತಂಡದ ಸದಸ್ಯರು ಏಡ್ಸ್‌ ತಡೆ ಜಾಗೃತಿಗಾಗಿ ಬೀದಿ ನಾಟಕ ಪ್ರದರ್ಶಿಸಿದರು. ಡಾ.ಶಿವರಾಮಶಾಸ್ತ್ರಿ, ಐಸಿಟಿಸಿ ಆಪ್ತ ಸಮಾಲೋಚಕಿ ಎ.ಜಿ. ಮಿಲನಾ, ಸಾಂಕ್ರಾಮಿಕ ರೋಗ ಶಾಸ್ತ್ರಜ್ಞೆ ಮೇಘನಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಬಿ. ಹೇಮಣ್ಣ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಬಿ. ಮಂಗಳಾ, ಆರೋಗ್ಯ ನಿರೀಕ್ಷಣಾಧಿಕಾರಿ ಕೃಷ್ಣೇಗೌಡ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.