ಮಳವಳ್ಳಿ: ಪಾಕಿಸ್ತಾನದ ವಿರುದ್ಧ ಭಾರತ ನಡೆಸುತ್ತಿರುವ ಯುದ್ಧದಲ್ಲಿ ಭಾರತೀಯ ಸೈನಿಕರು ಸುರಕ್ಷಿತರಾಗುವುದರ ಜೊತೆಗೆ ಯುದ್ದದಲ್ಲಿ ಗೆಲುವು ಸಿಗಲಿ ಎಂದು ಹಾರೈಸಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಪಟ್ಟಣದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಎರಡು ಪಕ್ಷಗಳ ಮುಖಂಡರು ಸೈನಿಕರ ಹೆಸರಿನಲ್ಲಿ ದೇವರಿಗೆ ಪೂಜೆ ಸಲ್ಲಿಸಿ ರಾಷ್ಟ್ರಧ್ವಜದೊಡನೆ ಸೈನಿಕರ ಪರ ಘೋಷಣೆ ಕೂಗಿದರು. ನಂತರ ಪಟ್ಟಣದ ಪೊಲೀಸ್ ಠಾಣೆಗೆ ತೆರಳಿ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಜಾವೀದ್ ಪಾಷ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ದೂರು ನೀಡಿದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ಕೃಷ್ಣ ಮಾತನಾಡಿ, ‘ಕಳೆದ ಮೂರ್ನಾಲ್ಕು ದಶಕಗಳಿಂದಲೂ ಭಾರತದ ವಿರುದ್ಧ ಭಯೋತ್ಪಾದಕ ದಾಳಿಯನ್ನು ನಡೆಸುತ್ತಾ ಅಮಾಯಕ ಜನರ ಮಾರಣ ಹೋಮ ನಡೆಸುತ್ತಿರುವ ಪಾಕ್ ಬೆಂಬಲಿತ ಭಯೋತ್ಪಾದಕರು ಇತ್ತೀಚಿಗೆ ಪೊಹಲ್ಗಾಂ ದಾಳಿ ಮಾಡಿ 26 ಮಂದಿ ಪ್ರವಾಸಿಗರನ್ನು ಹತ್ಯೆ ಗೈದಿರುವುದ್ದಾರೆ. ಪಾಕಿಸ್ತಾನದ ಈ ಕುತಂತ್ರ ತಕ್ಕ ಪಾಠ ಕಲಿಸಲು ಪ್ರಧಾನಿ ಮೋದಿ ಅವರು ಕೈಗೊಂಡಿರುವ ಸೈನಿಕ ಕಾರ್ಯಾಚರಣೆಯಲ್ಲಿ ನಮ್ಮ ಸೈನಿಕರಿಗೆ ಜಯವಾಗಲಿ’ ಎಂದು ಆಶಿಸಿದರು.
ಪುರಸಭೆ ಉಪಾಧ್ಯಕ್ಷ ಎನ್.ಬಸವರಾಜು, ಸದಸ್ಯರಾದ ಟಿ.ಎಂ. ಪ್ರಶಾಂತ್, ಸಿದ್ದರಾಜು, ನಂದಕುಮಾರ್, ರವಿ, ಮುಖಂಡರಾದ ವೇಣು, ರಾಜೀವ್, ಮುದ್ದಮಲ್ಲು, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಮೋಹನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.