ADVERTISEMENT

ಜಲ ಸಂರಕ್ಷಣೆ: ಮಂಡ್ಯಕ್ಕೆ ರಾಷ್ಟ್ರೀಯ ಪ್ರಶಸ್ತಿ

ರಾಜ್ಯದ 7 ಜಿಲ್ಲೆಗಳು ಆಯ್ಕೆ: ತಲಾ ₹25 ಲಕ್ಷ ನಗದು ಬಹುಮಾನ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 5:41 IST
Last Updated 5 ಅಕ್ಟೋಬರ್ 2025, 5:41 IST
ಮಂಡ್ಯ ತಾಲ್ಲೂಕು ಗೋಪಾಲಪುರ ಗ್ರಾಮ ಪಂಚಾಯಿತಿ ಕೆರೆ ಅಭಿವೃದ್ಧಿ ಕಾಮಗಾರಿ
ಮಂಡ್ಯ ತಾಲ್ಲೂಕು ಗೋಪಾಲಪುರ ಗ್ರಾಮ ಪಂಚಾಯಿತಿ ಕೆರೆ ಅಭಿವೃದ್ಧಿ ಕಾಮಗಾರಿ   

ಮಂಡ್ಯ: ಜಲ ಶಕ್ತಿ ಅಭಿಯಾನದ ಅಂಗವಾಗಿ ‘ಜಲ ಸಂಚಯ ಜನ ಭಾಗಿದಾರಿ (ಜೆ.ಎಸ್‌.ಜೆ.ಬಿ)’ ಅಭಿಯಾನದಡಿ ಮಂಡ್ಯ ಜಿಲ್ಲೆಯು ಜಲ ಸಂರಕ್ಷಣೆ ಕಾಮಗಾರಿಗಳನ್ನು ಉತ್ತಮವಾಗಿ ಅನುಷ್ಠಾನಗೊಳಿಸಿದ್ದಕ್ಕಾಗಿ ಮಂಡ್ಯ ಜಿಲ್ಲೆಗೆ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ.

ಜಲಮೂಲಗಳ ಸಂರಕ್ಷಣೆ, ಅಂತರ್ಜಲ ವೃದ್ಧಿ ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯ ಪ್ರಮಾಣದ ನೀರು ಒದಗಿಸುವ ಹಾಗೂ ನೀರಿನ ಸಮಸ್ಯೆ ನಿವಾರಿಸಲು ಕೈಗೊಂಡ ಜಲಶಕ್ತಿ ಅಭಿಯಾನದ ಚಟುವಟಿಕೆಗಳನ್ನು ಯಶಸ್ವಿಯಾಗಿ ಹಾಗೂ ಪರಿಣಾಮಕಾರಿ ಅನುಷ್ಠಾನಗೊಳಿಸಿದ್ದಕ್ಕಾಗಿ ಮಂಡ್ಯ ಜಿಲ್ಲೆಗೆ ಪ್ರಶಸ್ತಿಯ ಜೊತೆಗೆ ₹25 ಲಕ್ಷ ನಗದು ಬಹುಮಾನವನ್ನು ನೀಡಲಾಗುತ್ತಿದೆ.

ಮೈಸೂರು ವಿಭಾಗದಲ್ಲಿ ಪ್ರಥಮ ಸ್ಥಾನ: ಜಲ ಸಂಚಯ ಜನ ಭಾಗಿದಾರಿ ಅಭಿಯಾನದಡಿ ರಾಜ್ಯಗಳನ್ನು 5 ವಲಯಗಳಾಗಿ ವಿಂಗಡಿಸಲಾಗಿದ್ದು, 3ನೇ ವಲಯದಲ್ಲಿ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿವೆ. ಈ ಪೈಕಿ ಕರ್ನಾಟಕ ರಾಜ್ಯದ 7 ಜಿಲ್ಲೆಗಳಿಗೆ ರಾಷ್ಟ್ರೀಯ ಪ್ರಶಸ್ತಿ ಘೋಷಿಸಲಾಗಿದ್ದು, ಮೈಸೂರು ವಿಭಾಗದ ಜಿಲ್ಲೆಗಳ ಪೈಕಿ ಮಂಡ್ಯ ಜಿಲ್ಲೆಯು ಪ್ರಥಮ ಸ್ಥಾನ ಪಡೆದಿದೆ. ಉಳಿದ ಜಿಲ್ಲೆಗಳೆಂದರೆ, ಗದಗ, ಕೋಲಾರ, ಬೀದರ್‌, ತುಮಕೂರು, ವಿಜಯಪುರ ಮತ್ತು ಚಿತ್ರದುರ್ಗ. 

ADVERTISEMENT

ಈ ಅಭಿಯಾನದಡಿ ಜಲ ಸಂರಕ್ಷಣೆ ಹಾಗೂ ಮಳೆ ನೀರಿನ ಸಂಗ್ರಹಣೆಯಂತಹ ಚಟುವಟಿಕೆಗಳಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಬಲಪಡಿಸುವುದಾಗಿದ್ದು, ಜನರಿಗೆ ನೀರಿನ ಮಹತ್ವ, ನೀರಿನ ಸಂರಕ್ಷಣೆ ವಿಧಾನಗಳ ಬಗ್ಗೆ ಅರಿವು ಮೂಡಿಸುವಲ್ಲಿ ಮಂಡ್ಯ ಜಿಲ್ಲೆ ಉತ್ತಮ ಸಾಧನೆ ಮಾಡಿದೆ. 

ಮಳವಳ್ಳಿ ತಾಲ್ಲೂಕಿನ ಬಂಡೂರು ಗ್ರಾಮ ಪಂಚಾಯತಿಯ ಬುಂಡೆಕಟ್ಟೆ ನೋಟ 
ಕೆ.ಆರ್‌.ನಂದಿನಿ ಸಿಇಒ 

ಜಲ ಸಂಚಯ ಎಂದರೇನು?

‘ನೀರಿಗಾಗಿ ಒಂದಾಗಿ ಪ್ರತಿ ಹನಿ ನೀರನ್ನು ಸಂರಕ್ಷಿಸಿ’ ಎಂಬ ಧ್ಯೇಯದೊಂದಿಗೆ ಜಲಸಂಚಯ ಜನ ಭಾಗಿದಾರಿ 1.0 ಅಭಿಯಾನವು ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು ಮಳೆ ನೀರನ್ನು ಸಂಗ್ರಹಿಸುವುದು ಜಲ ಸಂರಕ್ಷಣೆಯ ಸಂಸ್ಕೃತಿಯನ್ನು ಬೆಳೆಸುವುದು ಹವಾಮಾನ ಸ್ಥಿತಿಗತಿಯನ್ನು ಉತ್ತೇಜಿಸುವುದು ಮತ್ತು ನೀರಿನ ಗುಣಮಟ್ಟವನ್ನು ಸುಧಾರಿಸುವ ಗುರಿ ಹೊಂದಿದೆ. ನೀರಿನ ಕೊರತೆ ನಿವಾರಿಸುವುದು ಮಳೆ ನೀರನ್ನು ಹರಿಯುವಂತೆ ಮಾಡುವುದು ಹರಿಯುವ ನೀರನ್ನು ತಡೆಯುವುದು ತಡೆದ ನೀರನ್ನು ಇಂಗಿಸುವುದು ಜಲ ಸಂಪನ್ಮೂಲಗಳ ಸಂರಕ್ಷಣೆ ಮರುಸ್ಥಾಪನೆ ಮರುಬಳಕೆಗೆ ಉತ್ತೇಜಿಸುವುದು ಅಮೃತ ಸರೋವರಗಳ ರಚನೆ ಮತ್ತು ನವೀಕರಣದ ಮೂಲಕ ನೀರಿನ ಸಂಗ್ರಹಣೆ ಹೆಚ್ಚಿಸುವುದು ಜಲಶಕ್ತಿ ಅಭಿಯಾನದ ಉದ್ದೇಶವಾಗಿದೆ.

‘7192 ಜಲಸಂರಕ್ಷಣೆ ಕಾಮಗಾರಿ’

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ಇತರೆ ಯೋಜನೆಗಳಡಿ ಜಿಲ್ಲೆಯು 2024ರ ಏಪ್ರಿಲ್ 1ರಿಂದ 2025ರ ಮಾರ್ಚ್ 31ರವರೆಗೆ 7192 ಜಲಸಂರಕ್ಷಣೆ ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಜಲಸಂಚಯ ಫೋರ್ಟಲ್‌ನಲ್ಲಿ ದಾಖಲಿಸಿದ್ದು ಇವುಗಳಲ್ಲಿ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳಾದ ಬದು ನಿರ್ಮಾಣ ಬೋರ್‌ವೆಲ್ ರೀಚಾರ್ಜ್‌ ಪಿಟ್ ಸೋಕ್ ಪಿಟ್ ಸಮಗ್ರ ಕೆರೆ ಅಭಿವೃದ್ಧಿ ಕಟ್ಟೆಗಳ ಅಭಿವೃಧ್ಧಿ ಕಲ್ಯಾಣಿಗಳ ಜಿರ್ಣೋದ್ಧಾರ ಮಳೆ ನೀರು ಕೊಯ್ಲು ತೆರೆದ ಬಾವಿ ನಾಲಾ ಹೊಳೆತ್ತುವುದು ಚೆಕ್ ಡ್ಯಾಂ ಕಾಮಗಾರಿಗಳು ಅನುಷ್ಠಾನಗೊಂಡಿದ್ದವು. ಸದರಿ ಕಾಮಗಾರಿಗಳನ್ನು ಕೇಂದ್ರ ನೋಡಲ್ ಅಧಿಕಾರಿಗಳ ತಂಡವು ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು ಎಂದು ಜಿ.ಪಂ. ಸಿಇಒ ನಂದಿನಿ ಕೆ.ಆರ್. ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.