ADVERTISEMENT

ಕನಕ ಜಯಂತಿ ಅರ್ಥಪೂರ್ಣ ಆಚರಣೆಗೆ ಸಹಕರಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 12:48 IST
Last Updated 13 ನವೆಂಬರ್ 2024, 12:48 IST
ಕನಕ ಜಯಂತಿ ಆಚರಣೆಯ ಅಂಗವಾಗಿ ಮಳವಳ್ಳಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪ್ರಭಾರ ತಹಶೀಲ್ದಾರ್ ಬಿ.ವಿ.ಕುಮಾರ್ ಮಾತನಾಡಿದರು. ಪದ್ಮಾ, ಬಂಕ್ ಮಹದೇವು, ಚಿಕ್ಕಲಿಂಗಯ್ಯ, ನಾಗರಾಜು, ಬಿ.ಪುಟ್ಟಬಸವಯ್ಯ, ಎಚ್.ವಿ.ನಿಂಗರಾಜು ಭಾಗವಹಿಸಿದ್ದರು
ಕನಕ ಜಯಂತಿ ಆಚರಣೆಯ ಅಂಗವಾಗಿ ಮಳವಳ್ಳಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪ್ರಭಾರ ತಹಶೀಲ್ದಾರ್ ಬಿ.ವಿ.ಕುಮಾರ್ ಮಾತನಾಡಿದರು. ಪದ್ಮಾ, ಬಂಕ್ ಮಹದೇವು, ಚಿಕ್ಕಲಿಂಗಯ್ಯ, ನಾಗರಾಜು, ಬಿ.ಪುಟ್ಟಬಸವಯ್ಯ, ಎಚ್.ವಿ.ನಿಂಗರಾಜು ಭಾಗವಹಿಸಿದ್ದರು   

ಮಳವಳ್ಳಿ: 'ಕನಕ ಜಯಂತಿಯನ್ನು ನ.18ರಂದು ವಿಜೃಂಭಣೆಯ ಜತೆಗೆ ಅರ್ಥಪೂರ್ಣವಾಗಿ ಆಚರಿಸಲಾಗುವುದು" ಎಂದು ಪ್ರಭಾರ ತಹಶೀಲ್ದಾರ್ ಬಿ.ವಿ.ಕುಮಾರ್ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯುವ ಜಯಂತಿಯ ಅಧ್ಯಕ್ಷತೆಯನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ವಹಿಸಲಿದ್ದಾರೆ. ಅಂದು ಬೆಳಿಗ್ಗೆ 9ಗಂಟೆಗೆ ತಾಲ್ಲೂಕು ಪಂಚಾಯಿತಿಯಿಂದ ಕನಕದಾಸರ ಬೃಹತ್ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆ ತರಲಾಗುವುದು’ ಎಂದು ತಿಳಿಸಿದರು.

ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ನಿರ್ದೇಶಕ ಬಿ.ಪುಟ್ಟಬಸವಯ್ಯ ಮಾತನಾಡಿ, ‘ಕನಕದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಮುಖಂಡರಿಂದ ಅಗತ್ಯ ಸಹಕಾರ ನೀಡಲಾಗುವುದು’ ಎಂದು ಹೇಳಿದರು.

ADVERTISEMENT

ಉಪನ್ಯಾಸಕ ಎಚ್.ವಿ.ನಿಂಗರಾಜು ಮಾತನಾಡಿ, ‘ಕನಕದಾಸರ ವಿಚಾರಧಾರೆಗಳನ್ನು ಯುವ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಉಪನ್ಯಾಸ ಕಾರ್ಯಕ್ರಮ ಆಯೋಜನೆ ಮಾಡುವಂತೆ’ ಸಲಹೆ ನೀಡಿದರು.

ಮುಖಂಡ ಬಸವನಪುರದ ಕರಿಯಪ್ಪ ಮಾತನಾಡಿ, ‘ಮಹನೀಯರ ಜಯಂತಿಗಳಿಗೆ ಸರ್ಕಾರ ರಜೆ ನೀಡುವುದು ಆಚರಣೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗಿಯಾಗಲೆಂದು, ಆದರೆ ಕೆಲವರು ನಿರ್ಲಕ್ಷ್ಯ ವಹಿಸುತ್ತಾರೆ. ಹೀಗಾಗಿ ಎಲ್ಲ ಇಲಾಖೆಗಳು ಪಾಲ್ಗೊಳ್ಳುವಂತೆ ಸೂಚನೆ ನೀಡುವಂತೆ’ ತಹಶೀಲ್ದಾರ್‌ಗೆ ಮನವಿ ಮಾಡಿದರು.

ಮುಖಂಡ ಮಂಚನಹಳ್ಳಿ ಮಹದೇವು ಮಾತನಾಡಿ, ಪೂರ್ವಭಾವಿ ಸಭೆಯನ್ನು 15 ದಿನಗಳ ಹಿಂದೆಯೇ ಕರೆದು ಚರ್ಚೆ ಮಾಡಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಚಿಕ್ಕಲಿಂಗಯ್ಯ ಮಾತನಾಡಿ, ‘ಕನಕದಾಸರನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸದೇ ಎಲ್ಲ ಸಮುದಾಯದವರ ಸಲಹೆ ಸಹಕಾರ ಪಡೆದು ಅದ್ದೂರಿ ಆಚರಣೆಗೆ ಮುಂದಾಗಬೇಕು’ ಎಂದು ಮನವಿ ಮಾಡಿದರು.

ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ, ತಾ.ಪಂ.ಯೋಜನಾಧಿಕಾರಿ ದೀಪು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಪದ್ಮಾ, ಕುರುಬರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜು, ಮುಖಂಡರಾದ ಬಂಕ್ ಮಹದೇವು, ಗಂಗಾಧರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.