
ಶ್ರೀರಂಗಪಟ್ಟಣ: ‘ಕನಕದಾಸರ ಕೃತಿಗಳ ಪೈಕಿ ಸಾಮಾನ್ಯ ಜನರ ಶ್ರೇಷ್ಠತೆಯನ್ನು ತಿಳಿಸುವ ರಾಮಧಾನ್ಯ ಚರಿತೆ ಮಹತ್ವದ ಕೃತಿ’ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಬೋರೇಗೌಡ ಚಿಕ್ಕಮರಳಿ ಬಣ್ಣಿಸಿದರು.
ಪಟ್ಟಣದಲ್ಲಿ ಸಂಜಯ ಪ್ರಕಾಶನ ಶನಿವಾರ ಸಂಜೆ ಏರ್ಪಡಿಸಿದ್ದ ಕನಕ ಜಯಂತಿಯಲ್ಲಿ ಅವರು ಮಾತನಾಡಿದರು.
‘ರಾಗಿ ಮತ್ತು ಭತ್ತವನ್ನು ಸಂಕೇತವಾಗಿ ಬಳಸಿಕೊಂಡು ಬಡವರು ಮತ್ತು ಶ್ರೀಮಂತರ ಜೀವನ ವಿಧಾನವನ್ನು ಈ ಕೃತಿಯಲ್ಲಿ ತಿಳಿಸಿದ್ದಾರೆ. ಮೇಲು ಕೀಳೆಂಬ ಭೇದ ಬೇಡ ಎಂದು ಇದು ಧ್ವನಿಸುತ್ತದೆ. ಕುವೆಂಪು ಅವರ ಶ್ರೀಸಾಮಾನ್ಯನ ದೀಕ್ಷಾ ಗೀತೆ ಕೃತಿಯಂತೆ ರಾಮಧಾನ್ಯ ಚರಿತೆ ಕೂಡ ಜನ ಸಾಮಾನ್ಯರನ್ನು ಪ್ರತಿನಿಧಿಸುತ್ತದೆ. ಹಾಗಾಗಿ ಅವರ ಹರಿಭಕ್ತಸಾರ, ನಳಚರಿತ್ರೆ, ಮೋಹನ ತರಂಗಣಿ ಕೃತಿಗಳಿಗಿಂತ ವಸ್ತು ವಿಷಯದಲ್ಲಿ ರಾಮಧಾನ್ಯ ಚರಿತೆ ವಿಶೇಷತೆ ಸ್ಥಾನ ಪಡೆದಿದೆ’ ಎಂದು ಹೇಳಿದರು.
‘ಶೈವ ಕುಲದಲ್ಲಿ ಹುಟ್ಟಿದ ಕನಕದಾಸರು ವೈಷ್ಣವ ಪಂಥದಲ್ಲಿ ಶ್ರದ್ಧೆ ಬೆಳೆಸಿಕೊಂಡದ್ದು ಸೋಜಿಗದ ಸಂಗತಿ’ ಎಂದರು.
ಪ್ರೊ.ಸಿ. ಮಹದೇವ, ಡಾ.ಬಿ. ಸುಜಯಕುಮಾರ್ ಮಾತನಾಡಿದರು. ಸಂಜಯ ಪ್ರಕಾಶನದ ಎಸ್.ಎಂ. ಶಿವಕುಮಾರ್, ಕ್ಯಾತನಹಳ್ಳಿ ಚಂದ್ರಣ್ಣ, ವಕೀಲರಾದ ಎಸ್.ಆರ್.ಸಿದ್ದೇಶ್, ಸಿ.ಎಸ್.ವೆಂಕಟೇಶ್, ರೈತ ಸಂಘದ ತಾಲ್ಲೂಕು ಘಟಕದ ಸಂಚಾಲಕ ಪಾಂಡು, ವಿರೂಪಾಕ್ಷಗೌಡ, ಬೆಳಗೊಳ ಬಸವಯ್ಯ, ಶೀಲಾ ನಂಜುಂಡಯ್ಯ, ಅಬ್ದುಲ್ಲಾ ಬೇಗ್, ಗಂಜಾಂ ಕೃಷ್ಣ, ಧನಂಜಯ ಬ್ಯಾಡರಹಳ್ಳಿ, ಜಯಶಂಕರ್, ರಂಗನಾಥ್, ಸುರೇಶ್, ಮಂಜುನಾಥ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.