
ಮಂಡ್ಯ: ಕುವೆಂಪು ಅವರು ಕನ್ನಡಿಗರಲ್ಲಿ ಸ್ವಾಭಿಮಾನ ಮತ್ತು ಕನ್ನಡ ಪ್ರಜ್ಞೆಯನ್ನು ಬೆಳೆಸಲು ನಿರಂತರವಾಗಿ ತಮ್ಮ ಬರಹದ ಮೂಲಕ ಪ್ರಯತ್ನಿಸಿದರು. ಅವರು ಬರೆದಂತೆ ಬದುಕಿದರು. ಕುವೆಂಪು ಕನ್ನಡದ ಸಾಕ್ಷಿ ಪ್ರಜ್ಞೆಯಾಗಿದ್ದಾರೆ ಎಂದು ಸಾಹಿತಿ ರಾಮೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಸ್ನಾತಕೋತ್ತರ ಕೇಂದ್ರದಲ್ಲಿ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹೊರಾವರಣ ಕೇಂದ್ರದ ವತಿಯಿಂದ ಬುಧವಾರ ನಡೆದ ಪ್ರಚಾರೋಪನ್ಯಾಸದಲ್ಲಿ ‘ಕನ್ನಡ ಕುರಿತು ಕುವೆಂಪು ಕವಿತೆಗಳು’ ಕುರಿತು ಉಪನ್ಯಾಸ ನೀಡಿದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಮಾತನಾಡಿ, ಕನ್ನಡ ಪ್ರಜ್ಞೆಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳುವ ಮೂಲಕ ಕನ್ನಡ ನಾಡು ನುಡಿಯ ಬೆಳವಣಿಗೆಯಲ್ಲಿ ಯುವ ಸಮುದಾಯದ ಪಾತ್ರ ಮುಖ್ಯವಾಗಿದ್ದು, ಅದನ್ನು ಕನ್ನಡ ಭಾಷೆ ಉಳಿವಿಗೆ ಬಳಸಿಕೊಳ್ಳುವ ಮೂಲಕ ಸಾಹಿತ್ಯಾಭಿರುಚಿಯನ್ನು ಅವರಲ್ಲಿ ಮೂಡುವಂತೆ ಮಾಡಬೇಕು ಎಂದು ಅಭಿಪ್ರಾಯ ಪಟ್ಟರು.
ಕೇಂದ್ರದ ವಿಶೇಷ ಅಧಿಕಾರಿ ಪ್ರೊ.ವಿಷ್ಣು ಶಿಂಧೆ ಮಾತನಾಡಿ, ಕುವೆಂಪು ಅವರು ರಚಿಸಿದ ಕವನಗಳು ಬದುಕಿನ ಮೌಲ್ಯವನ್ನು ಸಾರುತ್ತವೆ. ಹೊಸ ಪೀಳಿಗೆಯ ಓದುಗರು ಕುವೆಂಪು ಸಾಹಿತ್ಯ ಓದುವುದರಿಂದ ನಾಡು ನುಡಿಯ ಅಭಿಮಾನ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಪ್ರಸಾರಂಗದ ನಿರ್ದೇಶಕ ನಂಜಯ್ಯ ಹೊಂಗನೂರು ಅವರು, ಮೈಸೂರು ವಿಶ್ವವಿದ್ಯಾಲಯದ ಹಾಕಿಕೊಂಡಿರುವ ಪ್ರಚಾರೋಪನ್ಯಾಸ ಯೋಜನೆಯ ಬಗ್ಗೆ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.