ಶ್ರೀರಂಗಪಟ್ಟಣ: ತಾಲ್ಲೂಕಿನ ಕರಿಘಟ್ಟ ಪ್ರಕೃತಿ ತಾಣದ ಶಿಖರದಲ್ಲಿ ನೀಲಾಚಲ ಗೆಳೆಯರ ಬಳಗದ ಸದಸ್ಯರು ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಒಂದು ದಿನ ಬಾಕಿ ಇರುವಾಗಲೇ ಕನ್ನಡ ಬಾವುಟವನ್ನು ಹಾರಿಸಿದ್ದಾರೆ.
ಸಮುದ್ರ ಮಟ್ಟದಿಂದ ಸುಮಾರು 4 ಸಾವಿರ ಅಡಿಗಳಷ್ಟು ಎತ್ತರದಲ್ಲಿರುವ ಕರಿಘಟ್ಟದ ಶಿಖರದ ತುತ್ತ ತುದಿಯಲ್ಲಿ ಕನ್ನಡ ಬಾವುಟವನ್ನು ಹಾರಿಸಲಾಗಿದೆ. ಶಿಖರದ ತುತ್ತ ತುದಿಯಲ್ಲಿ 30 ಅಡಿ ಎತ್ತರದ ಕಬ್ಬಿಣ ಕಂಬಿ ನೆಟ್ಟು ಅದರ ಮೇಲೆ ಬಾವುಟ ಹಾರಾಡು
ವಂತೆ ಮಾಡಿದ್ದಾರೆ. ಸುಮಾರು 5 ಗಜ ಅಗಲದ ಕನ್ನಡ ಬಾವುಟ ಹಾರಾಡುತ್ತಿದೆ. ಕರಿಘಟ್ಟದ ಆಸುಪಾಸಿನ ಹತ್ತಾರು ಹಳ್ಳಿಗಳಿಗೂ ಈ
ಬಾವುಟ ಕಾಣುತ್ತಿದೆ.
ಕರಿಘಟ್ಟದಲ್ಲಿ ಪ್ರತಿದಿನ ವಿಹಾರ ನಡೆಸುವ ನೀಲಾಚಲ ಗೆಳೆಯರ ಬಳಗ ಕನ್ನಡ ಬಾವುಟ ಹಾರಿಸುವ ಉದ್ದೇಶದಿಂದ ಮೂರು ದಿನಗಳ ಹಿಂದೆಯೇ ಶಿಖರದಲ್ಲಿ ಕಬ್ಬಿಣದ ಕಂಬಿ ನೆಟ್ಟಿತ್ತು. ಸಿಮೆಂಟ್,ಜಲ್ಲಿ, ಎಂ–ಸ್ಯಾಂಡ್ ಅನ್ನು ಮರದ ತುಂಡುಗಳ ಸಹಾಯದಿಂದ ಮೇಲಕ್ಕೆ ಹೊತ್ತೊಯ್ದು ಭದ್ರಪಡಿಸಿತ್ತು.
ನೀಲಾಚಲ ಗೆಳೆಯರ ಬಳಗದಅಧ್ಯಕ್ಷ ಲಕ್ಷ್ಮೀನಾರಾಯಣಅವರ ನೇತೃತ್ವದಲ್ಲಿ ಮೂರುತಾಸು ಕೆಲಸ ಮಾಡಿ ಧ್ವಜಸ್ತಂಭವನ್ನು ಸ್ಥಾಪಿಸಿದ್ದಾರೆ.
ತಾ.ಪಂ. ಮಾಜಿ ಅಧ್ಯಕ್ಷ ಬಿ.ಎಸ್.ಸಂದೇಶ್, ಪರಿಸರ ಪ್ರೇಮಿ ದೀಪು, ಜಯರಾಮು, ಶಿಕ್ಷಕ ಗುರುಸಿದ್ದಪ್ಪ, ವಿಜೇಂದ್ರು, ಶಿವು ಇತರರ ಇಚ್ಛೆಯ ಫಲವಾಗಿ ಕರಿಘಟ್ಟ ಶಿಖರದಲ್ಲಿ ಕನ್ನಡ ಬಾವುಟ ಹಾರಾಡುತ್ತಿದೆ. ನ.1ರ ಸೋಮವಾರ ಇಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸುವುದಾಗಿ ನೀಲಾಚಲ ಗೆಳೆಯರ ಬಳಗದ ಸದಸ್ಯರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.