ಮದ್ದೂರು:ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಐಎಎಸ್ ಪ್ರೊಬೆಷನರಿ ಅಧಿಕಾರಿದಿಗ್ವಿಜಯ್ ಗೋಡ್ಕೆ ಅವರಿಗೆ ಕನ್ನಡ ಬಾರದ ಕಾರಣ ಸಮಸ್ಯೆ ಹೇಳಿಕೊಳ್ಳಲು ಬಂದ ಗ್ರಾಮೀಣ ಪ್ರದೇಶದ ಜನರಿಗೆ ತಲೆನೋವಾಗಿ ಪರಿಣಮಿಸಿದೆ.
ತಾಲ್ಲೂಕಿನಲ್ಲಿ ಹಳ್ಳಿಗಾಡಿನ ಜನರು ನಿತ್ಯ ತಾಲ್ಲೂಕು ಕಚೇರಿಗೆ ಬರುತ್ತಾರೆ. ಬಹುತೇಕ ಮಂದಿ ಅನಕ್ಷರಸ್ಥರೇ ಆಗಿದ್ದಾರೆ. ಕಚೇರಿಯಲ್ಲಿ ಅಧಿಕಾರಿಗಳ ಕಾರುಬಾರು ನಡೆದಿದ್ದು ಸರಿಯಾದ ಸಮಯಕ್ಕೆ ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ. ಇದರ ಬಗ್ಗೆ ತಹಶೀಲ್ದಾರ್ ಬಳಿ ತೆರಳಿ ಮಾತನಾಡಲು ಅವರಿಗೆ ಕನ್ನಡವೇ ಬರುತ್ತಿಲ್ಲ. ಹೀಗಾಗಿ ಜನರು ಸಮಸ್ಯೆ ಹೇಳಲಾಗದೇ ನುಂಗಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಹಾರಾಷ್ಟ್ರದವರಾದ ದಿಗ್ವಿಜಯ್ ಗೋಡ್ಕೆ 15 ದಿನಗಳ ಹಿಂದಷ್ಟೇ ಮದ್ದೂರು ಕಚೇರಿಗೆ ಬಂದಿದ್ದಾರೆ. ಅವರು ಕೂಡ ಸಾರ್ವಜನಿಕರೊಂದಿಗೆ ಸಂಪರ್ಕ ಇಟ್ಟುಕೊಳ್ಳದ ಪರಿಸ್ಥಿತಿ ಇದೆ. ಇದು ಸಾರ್ವಜನಿಕರಿಗೆ ಮಾತ್ರ ಸಮಸ್ಯೆಯಾಗಿಲ್ಲ, ಕಚೇರಿಯಲ್ಲಿ ಕೆಲಸ ಮಾಡುವ ಇತರ ಸಿಬ್ಬಂದಿಗೂ ಇಂಗ್ಲಿಷ್ನಲ್ಲಿ ವ್ಯವಹರಿಸಲು ಸಾಧ್ಯವಾಗುತ್ತಿಲ್ಲ. ಸಿಬ್ಬಂದಿ ಹೇಳುವ ಕೆಲಸ ಕಾರ್ಯಗಳ ಸ್ಥಿತಿಗತಿ ತಹಶೀಲ್ದಾರ್ ಗಮನಕ್ಕೆ ಬರುತ್ತಿಲ್ಲ.
ಕನ್ನಡ ಬರುವ ಅಧಿಕಾರಿಯನ್ನು ತಹಶೀಲ್ದಾರ್ ಆಗಿ ನೇಮಿಸಿದರೆ ಜನ ಸಾಮಾನ್ಯರ ಕೆಲಸ ಕಾರ್ಯಗಳು ಆಗುತ್ತವೆ. ಬ್ಯಾಂಕ್ಗಳಲ್ಲಿ ಮಾತ್ರ ಕನ್ನಡ ಬಾರದವರ ಜೊತೆವ್ಯವಹಾರ ಮಾಡಬೇಕಾಗಿತ್ತು. ಆದರೆ ಈಗ ತಾಲ್ಲೂಕು ಕಚೇರಿಯಲ್ಲೂ ಈ ಸಮಸ್ಯೆ ಬಂದಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.