
ಕಿಕ್ಕೇರಿ: ‘ಯಾವುದೇ ಸಹಾಯವಿಲ್ಲದೆ ಸ್ವಯಂಪ್ರೇರಣೆಯಿಂದ ಮನೆಯ ಹಬ್ಬದಂತೆ ಕನ್ನಡ ಹಬ್ಬವನ್ನು ಆಚರಿಸುವ ಆಟೊ ಚಾಲಕರ ಪ್ರೇಮ ಮರೆಯಲಾಗದು’ ಎಂದು ಕೆಪಿಸಿಸಿ ಸದಸ್ಯ ಸುರೇಶ್ ಹೇಳಿದರು.
ಪಟ್ಟಣದ ಅಂಗಡಿಬೀದಿಯ ಆಟೊ ಮಾಲೀಕ, ಚಾಲಕರ ಸಂಘದವರು ಸೋಮವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ಕಷ್ಟವಿದ್ದರೂ ಸ್ವಾವಲಂಬಿ ಬದುಕಿಗೆ ಚಾಲಕರಾಗಿದ್ದಾರೆ. ನವೆಂಬರ್ ತಿಂಗಳಲ್ಲಿ ಸಡಗರದಿಂದ ಮಾತೃಭಾಷೆ, ನಾಡು–ನುಡಿಯನ್ನು ಸ್ಮರಿಸುವ ಇವರ ಸತ್ಕಾರ್ಯವನ್ನು ಬುದ್ಧಿಜೀವಿಗಳು ಅನುಸರಿಸಬೇಕು’ ಎಂದರು.
‘ಅತೀ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ ಮಂಡ್ಯ ಆಗಿದ್ದು, ಇಲ್ಲಿನ ಹೃದಯ ಸಿರಿವಂತಿಕೆ ಮೆಚ್ಚಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಭಾಷೆ ಹೆಚ್ಚು ಬಳಕೆಯಲ್ಲಿದೆ. ಸ್ವಂತ ಹಣದಲ್ಲಿ ಮನೆಯ ಹಬ್ಬದಂತೆ ಆಚರಿಸುವ ಚಾಲಕರ ಮಾತೃಭಾಷೆ ಪ್ರೇಮ ಮರೆಯಲಾಗದು’ ಎಂದು ಸ್ಮರಿಸಿದರು.
ಕನ್ನಡಾಂಭೆ ಧ್ವಜ ಹಾರಿಸಿ, ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಲಾಯಿತು. ಚಾಲಕರು ಪಟ್ಟಣದ ಪ್ರಮುಖ ಬೀದಿಯಲ್ಲಿ ಆಟೊಗಳಿಗೆ ಕನ್ನಡ ಬಾವುಟ, ಹಳದಿ, ಕೆಂಪು ಹೂವುಗಳಿಂದ ಅಲಂಕರಿಸಿ ಕನ್ನಡಾಂಬೆಗೆ ಜೈಕಾರ ಹಾಕುತ್ತ ಮೆರವಣಿಗೆಯಲ್ಲಿ ಸಾಗಿದರು. ಸಿಹಿ ತಿನಿಸು, ಅನ್ನ ದಾಸೋಹ ಏರ್ಪಡಿಸಲಾಗಿತ್ತು.
ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ನಾಗೇಂದ್ರ, ಸುರೇಶ್, ರಮೇಶ್, ಶಿವರಾಂ, ಜಯರಾಂ, ರಾಣಾಸಿಂಗ್, ಜೇಟು ಮತ್ತಿತರರನ್ನು ಗೌರವಿಸಲಾಯಿತು. ಸಂಘದ ಚಾಲಕರು, ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.