ADVERTISEMENT

‘ಬಾಡೂಟ ಯಾಕಿಲ್ಲ ಸ್ವಾಮಿ?’: ಪರಿಷತ್ತಿನ ನಿಯಮದ ಕುರಿತು ಪರ–ವಿರೋಧ ಚರ್ಚೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2024, 22:30 IST
Last Updated 7 ಡಿಸೆಂಬರ್ 2024, 22:30 IST
ಸಾಮಾಜಿಕ ಜಾಲತಾಣದಲ್ಲಿ ‘ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಇರಲಿ’ ಪೋಸ್ಟರ್‌ ಹರಿದಾಡುತ್ತಿದೆ 
ಸಾಮಾಜಿಕ ಜಾಲತಾಣದಲ್ಲಿ ‘ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಇರಲಿ’ ಪೋಸ್ಟರ್‌ ಹರಿದಾಡುತ್ತಿದೆ    

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮತ್ತು ವಾಣಿಜ್ಯ ಮಳಿಗೆಗಳನ್ನು ಕಾಯ್ದಿರಿಸಿದವರಿಗೆ ‘ಮಾಂಸಾಹಾರ, ಮದ್ಯ ಮತ್ತು ತಂಬಾಕು ಮಾರಾಟವನ್ನು ನಿಷೇಧಿಸಲಾಗಿದೆ’ ಎಂದು ಪರಿಷತ್ತಿನ ನಿಯಮದಲ್ಲಿ ಹೇಳಲಾಗಿದೆ. ಇದರ ಬೆನ್ನಲ್ಲೇ, ಸಮ್ಮೇಳನದಲ್ಲಿ ಸಸ್ಯಾಹಾರದ ಜೊತೆ ‘ಬಾಡೂಟ’ವನ್ನೂ ಹಾಕಿಸಬೇಕು ಎಂಬ ಆಗ್ರಹವು ಸಾಮಾಜಿಕ ಮಾಧ್ಯಮಗಳಲ್ಲಿ ಜೋರಾಗಿ ಕೇಳಿಬಂದಿದೆ. ಈ ಕುರಿತು ಪರ–ವಿರೋಧ ಚರ್ಚೆಗಳು ನಡೆದಿದ್ದು, ಪರಿಷತ್ತಿನ ಅಧ್ಯಕ್ಷ ಮಹೇಶ್‌ ಜೋಶಿ ಅವರ ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸಮ್ಮೇಳನ ಸಸ್ಯಾಹಾರಿಗಳಿಗೆ ಮಾತ್ರವೇ, ಬಾಡೂಟ ಯಾಕಿಲ್ಲ ಸ್ವಾಮಿ?’ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಇದು ‘ಮಡಿ ಸಾಹಿತ್ಯ ಸಮ್ಮೇಳನ’ ಎಂದು ಕೆಲವರು ಕುಟುಕಿದ್ದಾರೆ. ‘ಸಸ್ಯಾಹಾರ–ಮಾಂಸಾಹಾರ ನಡುವಿನ ಮೇಲು–ಕೀಳು ತಾರತಮ್ಯ ಮನೋಭಾವವನ್ನು ವಿನಾಶಗೊಳಿಸಬೇಕು’ ಎಂದು ಪೋಸ್ಟರ್‌ ಹಿಡಿದು ಒತ್ತಾಯಿಸಿದ್ದಾರೆ. 

‘ಬಾಡೇ ನಮಗೆ ಗಾಡು ಕಣಣ್ಣ’ ಎಂದು ಕೆಲವರು ಧ್ವನಿ ಎತ್ತಿರುವುದಕ್ಕೆ, ‘ಇದುವರೆಗೆ ನಡೆದ 86 ಸಾಹಿತ್ಯ ಸಮ್ಮೇಳನಗಳಲ್ಲಿ ಮಾಂಸಾಹಾರ ಹಾಕಿದ್ದಾರಾ? ಲಕ್ಷಾಂತರ ಜನರಿಗೆ ಬಾಡೂಟ ಹಾಕಲು ಸಾಧ್ಯವೇ’ ಎಂದು ಕೆಲವು ನೆಟ್ಟಿಗರು ಬಾಡೂಟಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಪರ–ವಿರೋಧ ಚರ್ಚೆಗಳು ಜೋರಾಗಿ ನಡೆಯುತ್ತಿವೆ. 

ADVERTISEMENT

‘ಸಮ್ಮೇಳನದಲ್ಲಿ ಮಾಂಸಾಹಾರ ನೀಡುವ ಮೂಲಕ ಮಂಡ್ಯ ಜನರ ಆಹಾರ ಸಂಸ್ಕೃತಿಯನ್ನು ಗೌರವಿಸಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು (ಶಿವರಾಮೇಗೌಡ ಬಣ) ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.