ADVERTISEMENT

ಕೆಆರ್‌ಎಸ್‌ ಜಲಾಶಯದ ಸುರಕ್ಷತೆಗಾಗಿ 50 ಸಾವಿರ ಕ್ಯುಸೆಕ್‌ ನೀರು ಹೊರಕ್ಕೆ

ಹೇಮಾವತಿಯಿಂದಲೂ ಬರುತ್ತಿರುವ ಜಲರಾಶಿ, ಜಲಾಶಯದ ಸುರಕ್ಷತೆಗಾಗಿ ನೀರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2019, 12:31 IST
Last Updated 10 ಆಗಸ್ಟ್ 2019, 12:31 IST
ಕೆಆರ್‌ಎಸ್‌ ಜಲಾಶಯದಿಂದ ಹೊರಕ್ಕೆ ನೀರು ಹರಿಸುತ್ತಿರುವುದು
ಕೆಆರ್‌ಎಸ್‌ ಜಲಾಶಯದಿಂದ ಹೊರಕ್ಕೆ ನೀರು ಹರಿಸುತ್ತಿರುವುದು   

ಮಂಡ್ಯ: ಕೊಡಗಿನ ಕುಂಭದ್ರೋಣ ಮಳೆ ಮಂಡ್ಯ ಜಿಲ್ಲೆಯಲ್ಲೂ ಪ್ರವಾಹ ಪರಿಸ್ಥಿತಿ ಸೃಷ್ಟಿಸಿದೆ. ಕೆಆರ್‌ಎಸ್‌ ಜಲಾಶಯಕ್ಕೆ 1.30 ಲಕ್ಷ ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು ಜಲಾಶಯದ ಸುರಕ್ಷತೆಗಾಗಿ ಶನಿವಾರ ಮಧ್ಯಾಹ್ನದಿಂದ ನದಿಗೆ 50 ಸಾವಿರ ಕ್ಯುಸೆಕ್‌ ನೀರು ಹರಿಬಿಡಲಾಗುತ್ತಿದೆ.

ಗುರುವಾರವಷ್ಟೇ ತಮಿಳುನಾಡಿಗೆ ಹರಿಯುತ್ತಿದ್ದ ನೀರು ಸ್ಥಗಿತಗೊಳಿಸಲಾಗಿತ್ತು. ಜು.19ರಿಂದ ಇಲ್ಲಿಯವರೆಗೆ ತಮಿಳುನಾಡಿಗೆ 15 ಟಿಎಂಸಿ ಅಡಿ ನೀರಿ ಹರಿದು ಹೋಗಿದೆ. ಪ್ರವಾಹದ ಕಾರಣದಿಂದಾಗಿ ಈಗ ಮತ್ತೆ ನದಿಗೆ ನೀರು ಹರಿಸಲಾಗುತ್ತಿದೆ. ಹೇಮಾವತಿ ಜಲಾಶಯದಿಂದಲೂ ನೀರು ಬರುತ್ತಿರುವ ಕಾರಣ ಕೆಆರ್‌ಎಸ್‌ಗೆ ಒತ್ತಡ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಲಾಶಯ ಸಂಪೂರ್ಣ ಭರ್ತಿ (ಗರಿಷ್ಠ 124.80 ಅಡಿ) ಯಾಗುವ ಮೊದಲೇ ನೀರು ಹರಿಸಲಾಗುತ್ತಿದೆ.

ಶನಿವಾರ ಮಧ್ಯಾಹ್ನದ ವೇಳೆಗೆ ಜಲಾಶಯದ ನೀರಿನ ಮಟ್ಟ 112 ಅಡಿಯ ಗಡಿ ತಲುಪಿತ್ತು. ಪ್ಲಸ್‌ 103ರ ಮಟ್ಟದ 30 ಗೇಟ್‌ಗಳನ್ನು ತೆರೆದು ನದಿಗೆ ನೀರು ಬಿಡಲಾಗುತ್ತಿದೆ. ರಾತ್ರಿಯ ವೇಳೆಗೆ ಹೊರಹರಿವು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ ಮುಳುಗಡೆ ಭೀತಿ ಎದುರಿಸುತ್ತಿರುವ ಶ್ರೀರಂಗಪಟ್ಟಣ ತಾಲ್ಲೂಕಿನ 19 ಗ್ರಾಮಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು ಸೂಕ್ತ ಎಚ್ಚರಿಕಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ತಹಶೀಲ್ದಾರ್‌ಗೆ ಸೂಚನೆ ನೀಡಿದ್ದಾರೆ.

ADVERTISEMENT

ಜಿಲ್ಲಾಧಿಕಾರಿ ಕಚೇರಿ ಸೇರಿ ಕಾವೇರಿ ನದಿ ಹರಿಯುವ ಎಲ್ಲಾ ತಾಲ್ಲೂಕುಗಳಲ್ಲಿ ನೋಡೆಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು ಪರಿಸ್ಥಿತಿ ನಿಭಾಯಿಸುವಂತೆ ಸೂಚನೆ ನೀಡಲಾಗಿದೆ. ಮುಂಜಾಗೃತಾ ಕ್ರಮವಾಗಿ ಶ್ರೀರಂಗಪಟ್ಟಣ ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ ಸ್ಥಗಿತಗೊಳಿಸಲಾಗಿದೆ.

‘ಶನಿವಾರ ಸಂಜೆಯ ವೇಳೆಗೆ ಒಂದು ಲಕ್ಷ ಕ್ಯುಸೆಕ್‌ ನೀರು ಹೊರಕ್ಕೆ ಹರಿಸಲಾಗುವುದು. 1.5 ಲಕ್ಷ ಕ್ಯುಸೆಕ್‌ವರೆಗೆ ನೀರು ಹರಿಸಿದರೂ ನದಿ ತಟದ ಹಳ್ಳಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ನದಿ ಪಾತ್ರದ ಹೊಲ, ಗದ್ದೆಗಳು ಮಾತ್ರ ಮುಳುಗುತ್ತವೆ. ಜನವಸತಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೂ ಜನರಿಗೆ ಎಚ್ಚರಿಕೆ ನೀಡಲಾಗಿದೆ’ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದರು.

ಮೈದುಂಬಿಕೊಂಡ ಗಗನಚುಕ್ಕಿ: ಕಬಿನಿ ಜಲಾಶಯದಿಂದಲೂ ಹೊರಕ್ಕೆ ನೀರು ಬಿಡುತ್ತಿರುವ ಕಾರಣ ಮಳವಳ್ಳಿ ತಾಲ್ಲೂಕು, ಶಿವನಸಮುದ್ರ (ಬ್ಲಫ್‌) ಸಮೀಪದ ಗಗನಚುಕ್ಕಿ ಜಲಪಾತದಲ್ಲಿ ನೀರು ಧುಮ್ಮಿಕ್ಕುತ್ತಿದೆ. ನಯನ ಮನೋಹರ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

ಜಲಪಾತದ ಸಮೀಪ ರಕ್ಷಣಾ ವ್ಯವಸ್ಥೆ ಇಲ್ಲ, ವೀಕ್ಷಣಾ ಗೋಪುರ ಹಳೆಯದಾಗಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿದೆ ಎಂದು ಪ್ರವಾಸಿಗರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.