ಮಂಡ್ಯ: ‘ಮೈಷುಗರ್ ಕಾರ್ಖಾನೆಯನ್ನು ಜೂನ್ ಮೊದಲ ವಾರದಲ್ಲೇ ಆರಂಭಿಸಬೇಕು. 10 ಲಕ್ಷ ಟನ್ ಕಬ್ಬು ಲಭ್ಯವಿದ್ದರೂ 4ರಿಂದ 5 ಲಕ್ಷ ಟನ್ ಕಬ್ಬು ಮಾತ್ರ ಅರೆಯುತ್ತೇವೆ ಎಂದು ಹೇಳುತ್ತಿರುವುದು ಸರಿಯಲ್ಲ. ಕಾರ್ಖಾನೆ ಆರಂಭಿಸುವ ಸೂಚನೆ ಇದುವರೆಗೂ ಕಂಡುಬಂದಿಲ್ಲ. ಹೀಗಾಗಿ ಈ ಕಾರ್ಖಾನೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಗಮನಹರಿಸಬೇಕು’ ಎಂದು ಮಂಡ್ಯ ಜಿಲ್ಲಾ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.
ನಗರಕ್ಕೆ ಗುರುವಾರ ಬಂದಿದ್ದ ಸಿಎಂ ಅವರನ್ನು ಭೇಟಿ ಮಾಡಿದ ರೈತ ಮುಖಂಡರು, ಸಕ್ಕರೆ ಕಾರ್ಖಾನೆಯನ್ನು ಸರ್ಕಾರದ ಸ್ವಾಮ್ಯದಲ್ಲಿಯೇ ಉಳಿಸಲು 3 ವರ್ಷ ನಿರಂತರ ಹೋರಾಟ ಮಾಡಿದ್ದೇವೆ. ಈಗ ಕಬ್ಬು ಕಡಿಯುವ ಕಾರ್ಮಿಕರ ನೇಮಕ, ಕಾರ್ಖಾನೆ ಯಂತ್ರಗಳ ಸಿದ್ಧತೆ ನಡೆದಿಲ್ಲ. ಖಾಸಗಿ ವ್ಯಕ್ತಿಗಳು ಕಾರ್ಖಾನೆ ಕಬಳಿಸುವ ಹುನ್ನಾರಗಳು ಇನ್ನೂ ನಿಂತಿಲ್ಲ. ಕಾರ್ಖಾನೆ ಆಸ್ತಿಯು 235 ಎಕರೆ ಇದ್ದು, ಇದರ ರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಕೆ.ಆರ್.ಎಸ್. ಅಣೆಕಟ್ಟೆಗೆ 100 ವರ್ಷಗಳಾಗುತ್ತಿದ್ದು, ಡ್ಯಾಂ ಸುರಕ್ಷತೆ ಕಾಯ್ದೆಯ ಅನ್ವಯ ಕಟ್ಟೆಯ ಜೀವಾವಧಿ ಮುಗಿಯುತ್ತಿದ್ದು, ಹಾಲಿ ಅಣೆಕಟ್ಟೆಗೆ ಹೊಂದಿಕೊಂಡಂತೆ ಜೋಡಣೆಯ ಸಮಾನಾಂತರ ಹೊಸ ಅಣೆಕಟ್ಟೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಕೆ.ಆರ್.ಎಸ್. ಅಣೆಕಟ್ಟೆ ವ್ಯಾಪ್ತಿಯ ರೈತರಿಗೆ ನಿರಂತರ ನೀರಿನ ತೊಂದರೆಯಾಗುತ್ತಿದ್ದು, ರೈತರ ನೀರಿನ ಹಕ್ಕಿಗೆ ಧಕ್ಕೆಯಾಗಿದೆ. ಅಣೆಕಟ್ಟೆಯಿಂದ ಬೆಂಗಳೂರಿಗೆ ಕುಡಿಯುವ ನೀರಿನ ಎಲ್ಲ ಹಂತದ ಯೋಜನೆಗಳನ್ನು ಸ್ಥಗಿತ ಮಾಡಬೇಕು. ಬೆಂಗಳೂರಿನ ಕುಡಿಯುವ ನೀರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ರೈತ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರಾದ ಸುನಂದಾ ಜಯರಾಂ, ಕೆ.ಬೋರಯ್ಯ, ಕನ್ನಡ ಸೇನೆ ಮುಖಂಡ ಮಂಜುನಾಥ್, ಸಿ.ಕುಮಾರಿ, ಟಿ.ಎಲ್.ಕೃಷ್ಣೇಗೌಡ, ಭರತ್ರಾಜ್, ಮುದ್ದೇಗೌಡ, ಇಂಡುವಾಳು ಚಂದ್ರಶೇಖರ್, ಬೋರಲಿಂಗೇಗೌಡ, ಸುಶೀಲಾ ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.