ADVERTISEMENT

ಕೃಷಿ ಮೇಳ: 350 ಮಳಿಗೆ ಸ್ಥಾಪನೆ

ಸುಮಾರು 400 ಬೆಳೆಗಳ ತಳಿ ಪರಿಚಯ: ಕೃಷಿ ಸಚಿವ ಚಲುವರಾಯಸ್ವಾಮಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 4:12 IST
Last Updated 26 ನವೆಂಬರ್ 2025, 4:12 IST
ಕೃಷಿ ಮೇಳದ ಲಾಂಛನ 
ಕೃಷಿ ಮೇಳದ ಲಾಂಛನ    

ಮಂಡ್ಯ: ಐದು ಜಿಲ್ಲೆಗಳ ರೈತರನ್ನೊಳಗೊಂಡಂತೆ, ಮೂರು ವಲಯಗಳಿಗೆ ಅನುಗುಣವಾಗಿ ಮಂಡ್ಯದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಮೊಟ್ಟ ಮೊದಲ ಬಾರಿಗೆ ಕೃಷಿ ಮೇಳ–2025 ಅನ್ನು ವಿ.ಸಿ.ಫಾರಂ ಆವರಣದಲ್ಲಿ ಡಿ.5 ರಿಂದ 7ರವರೆಗೆ ಮೂರು ದಿನ ಆಯೋಜಿಸಿರುವುದು ಈ ಬಾರಿಯ ವಿಶೇಷವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಸ್ವಾಮಿ ಹೇಳಿದರು. 

ಮೊದಲ ದಿನದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃಷಿ ಮೇಳ ಉದ್ಘಾಟಿಸುವರು. ಮೇಳದಲ್ಲಿ 350 ರಿಂದ 400 ವಿವಿಧ ಬೆಳೆಗಳ ತಳಿ ಪರಿಚಯಿಸಲಾಗುತ್ತಿದೆ. ವಸ್ತು ಪ್ರದರ್ಶನದಲ್ಲಿ ಒಟ್ಟು 350 ಮಳಿಗೆಗಳನ್ನು ತೆರೆಯಲಾಗಿದೆ. ರೈತರಿಗೆ ಎಲ್ಲ ರೀತಿಯ ಮಾಹಿತಿಗಳು ಸಿಗುತ್ತಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ನವೀನ ಕೃಷಿ ತಂತ್ರಜ್ಞಾನಗಳ ಪ್ರದರ್ಶನ, ವಸ್ತು ಪ್ರದರ್ಶನ, ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಪದ್ಧತಿ ಪ್ರಾತ್ಯಕ್ಷಿಕೆಗಳು, ಪಶು ಸಂಗೋಪನೆ ತಾಂತ್ರಿಕತೆಗಳು, ಮೀನು ಕೃಷಿ, ಸಸ್ಯ ಕ್ಷೇತ್ರ ನಿರ್ವಹಣೆಯಲ್ಲಿ ಪ್ರಮುಖವಾಗಿ ದೇಸಿ ಮತ್ತು ವಿದೇಶಿ ತಳಿಗಳ ಬಗ್ಗೆ ಮಾಹಿತಿ, ಮಾರಾಟ ಮತ್ತು ಪ್ರದರ್ಶನ, ರೇಷ್ಮೆ ಕೃಷಿ, ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿಯ ಪ್ರಾತ್ಯಕ್ಷಿಕೆ, ಬಹುಬೆಳೆ ಪದ್ಧತಿ, ಸಮುದಾಯ ಕೃಷಿ, ಗುತ್ತಿಗೆ ಆಧಾರದ ಕೃಷಿ, ಜೈವಿಕ ಕೃಷಿ, ನೀರಾವರಿ ಪದ್ಧತಿಗಳು, ಕಾಫಿ ಮತ್ತು ಸಾಂಬಾರ ಬೆಳೆಗಳ ತಂತ್ರಜ್ಞಾನಗಳು, ಕಬ್ಬು ಬೆಳೆಯಲ್ಲಿ ತರಗು ಮುಚ್ಚಿಗೆಯ ಪ್ರಾತ್ಯಕ್ಷಿಕೆ ಕೃಷಿ ಮೇಳದಲ್ಲಿ ಒಂದೇ ಸೂರಿನಡಿ ಮಾಹಿತಿ ಲಭ್ಯವಿದೆ ಎಂದರು.

ADVERTISEMENT

ಸಿರಿಧಾನ್ಯಗಳ ಮೇಳ:

ಕೃಷಿ ಹವಾಮಾನ ನಿರ್ವಹಣೆ, ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಹೈಟೆಕ್ ತೋಟಗಾರಿಕೆ ಪ್ರಾತ್ಯಕ್ಷಿಕೆ, ಸುಧಾರಿತ ಮೇವಿನ ತಳಿಗಳು ಮತ್ತು ತಾಂತ್ರಿಕತೆಗಳು, ಸಿರಿಧಾನ್ಯಗಳ ಮೇಳ, ಜೈವಿಕ ಇಂಧನದ ತಂತ್ರಜ್ಞಾನಗಳು, ಮಾರುಕಟ್ಟೆಯ ತಂತ್ರಗಳು, ಕೃಷಿ ಅರಣ್ಯ, ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆಗಳು, ಸಿರಿಧಾನ್ಯಗಳ ಮೌಲ್ಯವರ್ಧನೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ವಿವರಿಸಿದರು.

ಎಐ, ಕೃಷಿ ಪ್ರವಾಸೋದ್ಯಮ:

ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಕೃಷಿ ಪ್ರವಾಸೋದ್ಯಮದ ಬಗ್ಗೆ ಮಾಹಿತಿ ನೀಡಲಾಗುವುದು. ಪ್ರಚಲಿತ ವಿಷಯಗಳ ಆಧಾರದ ಮೇಲೆ ರೈತ ವಿಜ್ಞಾನಿಗಳ ಸಂವಾದ ಕಾರ್ಯಕ್ರಮ, ಚರ್ಚಾಗೋಷ್ಠಿಗಳು, ತಜ್ಞರಿಂದ ಸಲಹಾ ಸೇವೆಗಳನ್ನು ನೀಡಲಾಗುವುದು. ಐದು ಜಿಲ್ಲೆಗಳಿಂದ ಒಟ್ಟು 10 ಜನ ಜಿಲ್ಲಾ ಮಟ್ಟದ ಪ್ರಗತಿಪರ ರೈತ, ರೈತ ಮಹಿಳೆ ಪ್ರಶಸ್ತಿ ಮತ್ತು 55 ಯುವ ರೈತ ಹಾಗೂ ಯುವ ರೈತ ಮಹಿಳೆಯರಿಗೆ ತಾಲ್ಲೂಕು ಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಈ ಬಾರಿ 60 ಎಕರೆ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬೆಳೆದು ರೈತರಿಗೆ ಸಮರ್ಪಕ ಮಾಹಿತಿ ನೀಡುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ ಎಂದು ತಿಳಿಸಿದರು.

ಬೆಂಗಳೂರಿನ ಕೃಷಿ ಮೇಳದಲ್ಲಿ ನಿರೀಕ್ಷೆಗೂ ಮೀರಿದಂತೆ 7.5 ಲಕ್ಷ ಜನರು ಭಾಗವಹಿಸಿ ಗಮನ ಸೆಳೆದಿದ್ದರೆ ನಮ್ಮ ಮಂಡ್ಯದಲ್ಲಿಯೂ ಸುಮಾರು ಆರು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ಅಂದಾಜಿದೆ ಎಂದರು. 

ಭತ್ತ, ರಾಗಿ, ಕಬ್ಬು ತಳಿ ಅಭಿವೃದ್ಧಿ: 

ಭತ್ತದಲ್ಲಿ 45 ತಳಿ, 3 ಹೈಬ್ರಿಡ್, 50 ತಾಂತ್ರಿಕತೆಗಳು, ರಾಗಿಯಲ್ಲಿ 37 ತಳಿಗಳು, ಕಬ್ಬಿನಲ್ಲಿ 17 ತಳಿಗಳು ಮತ್ತು 20 ತಂತ್ರಜ್ಞಾನಗಳು, ಮುಸುಕಿನ ಜೋಳದಲ್ಲಿ 4 ತಳಿಗಳು, ಮೇವಿನ ಬೆಳೆಗಳಲ್ಲಿ 4, ಸೂರ್ಯಕಾಂತಿ ಸಂಕಿರಣ ತಳಿ, ಕೆಬಿಎಸ್‌ಎಚ್-88, ಚಾಮರಾಜನಗರ ಕಪ್ಪು ಅರಿಶಿಣ, ಅರಿಶಿಣದ ತಳಿ- ಐಐಎಸ್‌ಆರ್‌ ಪ್ರತಿಭಾ ತಳಿಗಳು ಹಾಗೂ ತಾಂತ್ರಕತೆಗಳನ್ನು ಈ ಕೇಂದ್ರದಿಂದ ಅಭಿವೃದ್ಧಿಪಡಿಸಿ ರೈತರಿಗೆ ಒದಗಿಸಲಾಗಿದೆ. ವಿ.ಸಿ.ಫಾರಂ ಕೃಷಿ ಕೇಂದ್ರದಲ್ಲಿ ಅಭಿವೃದ್ಧಿಗೊಂಡ ತಳಿಗಳು ರಾಷ್ಟ್ರ ಮಟ್ಟದಲ್ಲಿ ಬಿಡುಗಡೆಗೊಳಿಸಿದೆ. ದೇಶದ ಪ್ರಥಮ ಭತ್ತದ ಹೈಬ್ರಿಡ್ ಕೆಆರ್‌ಎಚ್‌–2 ಇಂದಿಗೂ ಬೇಡಿಕೆಯಲ್ಲಿದೆ ಎಂದು ತಿಳಿಸಿದರು.

ಮಂಡ್ಯ ಕೃಷಿ ವಿವಿ ವಿಶೇಷಾಧಿಕಾರಿ ಹರಿಣಿಕುಮಾರ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಲಹಳ್ಳಿ ಅಶೋಕ್, ಮುಖಂಡರಾದ ಅಂಜನಾ ಶ್ರೀಕಾಂತ್ ಇದ್ದರು.

ಎನ್‌. ಚಲುವರಾಯಸ್ವಾಮಿ ಸಚಿವ 

ಪಿಲಿಫೈನ್ಸ್‌ ಭತ್ತದ ತಳಿಗೆ

ಒಪ್ಪಂದ ಅಂತರರಾಷ್ಟ್ರೀಯ ಭತ್ತದ ಸಂಶೋಧನಾ ಕೇಂದ್ರವು ಪಿಲಿಫೈನ್ಸ್‌ ಜೊತೆ ಒಪ್ಪಂದವನ್ನು ಮಾಡಿಕೊಂಡಿದ್ದು ಪಿಲಿಫೈನ್ಸ್‌ ದೇಶದಲ್ಲಿ ಅಭಿವೃದ್ಧಿಪಡಿಸಿದ ಉತ್ತಮ ತಳಿಗಳನ್ನು ಮಂಡ್ಯದ ಕೃಷಿ ವಿಶ್ವವಿದ್ಯಾನಿಲಯಕ್ಕೆ ತಂದು ಪ್ರಾತ್ಯಕ್ಷಿಕೆ ಕೈಗೊಂಡು ಆ ಮೂಲಕ ರೈತರಿಗೆ ಉತ್ತಮ ತಳಿಗಳನ್ನು ರೈತರಿಗೆ ತಲುಪಿಸುವ ಕಾರ್ಯಕ್ರಮ ಮಾಡುವ ಉದ್ದೇಶ ಹೊಂದಿದ್ದೇವೆ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ತಿಳಿಸಿದರು. 

- ಮೂಲಸೌಕರ್ಯ ಕಲ್ಪಿಸಲು ₹ 100 ಕೋಟಿ

ಮಂಡ್ಯ ಕೃಷಿ ವಿಶ್ವವಿದ್ಯಾನಿಲಯ ಸ್ಥಾಪನೆಯಾದ ಮೊದಲ ವರ್ಷದಲ್ಲೇ ಮೂಲಸೌಕರ್ಯ ಕಲ್ಪಿಸಲು ಸುಮಾರು ₹100 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. ಈಗಾಗಲೇ ಕ್ಯಾಬಿನೆಟ್‌ನಲ್ಲಿ ಮಾಡಿ ಚರ್ಚಿಸಿ ₹23 ಕೋಟಿ ಮಂಜೂರು ಮಾಡಲಾಗಿದೆ. ಶೀಘ್ರವೇ ಕಾಮಗಾರಿ ಪ್ರಾರಂಭವಾಗುತ್ತದೆ. ಕೃಷಿ ವಿಶ್ವವಿದ್ಯಾನಿಲಯ ಸ್ಥಾಪನೆಯಾದ ಮೊದಲನೇ ವರ್ಷದಲ್ಲೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಿರುವ ಉದಾಹರಣೆ ಎಲ್ಲೂ ಕಂಡಿಲ್ಲ. ವಿಪಕ್ಷ ನಾಯಕರು ಲಘುವಾಗಿ ಮಾತನಾಡುವುದನ್ನು ಬಿಡಬೇಕು ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.