ಶಿವನಸಮುದ್ರ (ಮಂಡ್ಯ ಜಿಲ್ಲೆ): ಸಂಜೆ 6.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಗನಚುಕ್ಕಿ ಜಲಪಾತದ ಬಳಿ ‘ಲೇಸರ್ ಷೋ’ಗೆ ಚಾಲನೆ ನೀಡಬೇಕಿತ್ತು. ಆದರೆ, ಅವರು ನೇರವಾಗಿ ವೇದಿಕೆ ಕಾರ್ಯಕ್ರಮಕ್ಕೆ ಬಂದ ಕಾರಣ, ಲೇಸರ್ ಷೋಗೆ ಚಾಲನೆ ನೀಡುವುದು ಬರೋಬ್ಬರಿ 2 ಗಂಟೆ ತಡವಾಯಿತು.
ವಿದ್ಯುದ್ದೀಪಗಳಲ್ಲಿ ಮಿನುಗುವ ಜಲಪಾತವನ್ನು, ಬೆಳಕಿನ ಚಿತ್ತಾರವನ್ನು ಕಣ್ತುಂಬಿಕೊಳ್ಳಲು ಸಂಜೆ 5 ರಿಂದಲೇ ಗಗನಚುಕ್ಕಿ ಜಲಪಾತದ ಬಳಿ ಪ್ರವಾಸಿಗರು ಮತ್ತು ಸಾರ್ವಜನಿಕರು ನೆರೆದಿದ್ದರು. ಆದರೆ, ಸಿಎಂ ಉದ್ಘಾಟನೆ ಮಾಡುವವರೆಗೆ ಜಲಪಾತದ ಬಳಿಯಿರುವ ಆಸನಗಳ ಕಡೆ ಹೋಗದಂತೆ ಪೊಲೀಸರು ನಿರ್ಬಂಧ ಹಾಕಿದ್ದರಿಂದ ಪ್ರವಾಸಿಗರಿಗೆ ತೀವ್ರ ನಿರಾಸೆ ಉಂಟಾಯಿತು.
‘ಲೇಸರ್ ಷೋಗೆ ಸಿಎಂ ಚಾಲನೆ ಕೊಟ್ಟು ವೇದಿಕೆ ಕಾರ್ಯಕ್ರಮಕ್ಕೆ ಹೋಗಿದ್ದರೆ ದೂರದ ಜಿಲ್ಲೆಗಳಿಂದ ಬಂದ ಪ್ರವಾಸಿಗರು ಜಲಪಾತ ನೋಡಿ ಖುಷಿ ಪಡುತ್ತಿದ್ದರು. ಗಂಟೆಗಟ್ಟಲೆ ಕಾದು ಅನೇಕ ಪ್ರವಾಸಿಗರು ಬೇಸರಪಟ್ಟುಕೊಂಡು ವೇದಿಕೆಯತ್ತ ವಾಪಸ್ ಹೋದರು’ ಎಂದು ಬೆಂಗಳೂರಿನಿಂದ ಬಂದಿದ್ದ ರಾಕೇಶ್, ಸುಹಾಸ್ ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.