ಯುವತಿಯನ್ನು ರಕ್ಷಿಸಿ ಕರೆದೊಯ್ಯುತ್ತಿರುವ ಪೊಲೀಸರು
ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ಆತ್ಮಹತ್ಯೆ ಮಾಡಿಕೊಳ್ಳಲು ಗುರುವಾರ ಸಂಜೆ ಕಾವೇರಿ ನದಿಗೆ ಹಾರಿ, ತಾಲ್ಲೂಕಿನ ಹಂಗರಹಳ್ಳಿ ಬಳಿ ನದಿಯ ಮಧ್ಯೆ ಮರಕ್ಕೆ ಸಿಕ್ಕಿ ಪವಾಡ ಸದೃಶವಾಗಿ ಬದುಕುಳಿದಿದ್ದ ಬೆಂಗಳೂರಿನ ಕಾನೂನು ವಿದ್ಯಾರ್ಥಿನಿಯನ್ನು ಶುಕ್ರವಾರ ಬೆಳಿಗ್ಗೆ ರಕ್ಷಿಸಲಾಗಿದೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಪವಿತ್ರಾ (19) ಎಂಬುವರನ್ನು ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ರಕ್ಷಿಸಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನದಿಗೆ ಹಾರಿದ್ದ ಪವಿತ್ರಾ ಸುಮಾರು ಐದು ಕಿ.ಮೀ. ದೂರ ಪ್ರವಾಹದಲ್ಲಿ ಕೊಚ್ಚಿ ಹೋಗಿ ನದಿಯ ಮಧ್ಯೆ ಮರವೊಂದಕ್ಕೆ ಸಿಕ್ಕಿಕೊಂಡಿದ್ದರು. ಇಡೀ ರಾತ್ರಿ ಮರದ ಮೇಲೆ ಕುಳಿತಿದ್ದರು.
ಶುಕ್ರವಾರ ಮುಂಜಾನೆ ಕಾಪಾಡಿ... ಎಂದು ಅವರು ಕೂಗಿಕೊಂಡಿದ್ದರಿಂದ ರೈತರಿಗೆ ನದಿಯ ಮಧ್ಯೆ ವ್ಯಕ್ತಿಯೊಬ್ಬರು ಸಿಕ್ಕಿಕೊಂಡಿರುವುದು ಗೊತ್ತಾಗಿದೆ.
ಅರಕೆರೆ ಠಾಣೆ ಸಬ್ ಇನ್ ಸ್ಪೆಕ್ಟರ್ ಎನ್. ವಿನೋದಕುಮಾರ್ ನೇತೃತ್ವದ ಪೊಲೀಸರ ತಂಡ ಮತ್ತು ಅಗ್ನಿಶಾಮಕ ಸಿಬ್ಬಂದಿ ಪವಿತ್ರಾ ಅವರನ್ನು ರಕ್ಷಿಸಿದ್ದು, ಪವಿತ್ರಾ ಅವರ ಪೋಷಕರಿಗೆ ವಿಷಯ ಮುಟ್ಟಿಸಿದ್ದಾರೆ.
ನದಿಯಲ್ಲಿ ನೀರಿನ ಸೆಳೆತ ಮತ್ತಷ್ಟು ಹೆಚ್ಚಾಗಿದ್ದರೆ ಅವರು ಕೊಚ್ಚಿ ಹೋಗುತ್ತಿದ್ದರು ಎಂದು ಪಿಎಸ್ಐ ವಿನೋದ್ ಕುಮಾರ್ ತಿಳಿಸಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಲು ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.