ADVERTISEMENT

ಬದುಕು ನೀಡಿದ ಮುತ್ತುಗದ ಎಲೆ ಕಸುಬು

ಕಿಕ್ಕೇರಿ ಗೋವಿಂದರಾಜು
Published 10 ಮೇ 2021, 3:56 IST
Last Updated 10 ಮೇ 2021, 3:56 IST
ಕಿಕ್ಕೇರಿಯಲ್ಲಿ ಮುತ್ತುಗದ ಎಲೆಯನ್ನು ಒಣಗಿಸುತ್ತಿರುವುದು
ಕಿಕ್ಕೇರಿಯಲ್ಲಿ ಮುತ್ತುಗದ ಎಲೆಯನ್ನು ಒಣಗಿಸುತ್ತಿರುವುದು   

ಕಿಕ್ಕೇರಿ: ಹೋಬಳಿಯ ಹತ್ತಾರು ಹಳ್ಳಿಯ ಕುಟುಂಬಗಳಿಗೆ ಮುತ್ತುಗದ ಎಲೆ ಕಟ್ಟುವ ಕಸುಬು ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿದೆ.

ಕೊರೊನಾ ಸೋಂಕು ಹಳ್ಳಿಗಳಿಗೂ ವ್ಯಾಪಿಸುತ್ತಿರುವ ಕಾರಣ ಕೂಲಿ ಕೆಲಸವಿಲ್ಲದೆ ಗ್ರಾಮೀಣರೂ ಪರದಾಡು ತ್ತಿದ್ದಾರೆ. ಈ ಕಾಯಕದಲ್ಲಿ ಪುರುಷರೂ ಕೈ ಜೋಡಿಸುತ್ತಿದ್ದಾರೆ.

ಪಟ್ಟಣದ ಬೀದಿಗಳಲ್ಲಿ ಹಸಿಯಾದ ಮುತ್ತುಗದ ಎಲೆಯ ಸರವನ್ನು ಒಣಗಿಸಿ ಜೋಡಿಸಲಾಗುತ್ತಿದೆ. ಮತ್ತಿಘಟ್ಟ, ಅತ್ತಿ ಚೌಡೇನಹಳ್ಳಿ, ಕತ್ತರಘಟ್ಟ, ಅಯ್ಯನ ಕೊಪ್ಪಲು ಮೊದಲಾದ ಊರುಗಳಿಂದ ಎಲೆ ಸರಗಳನ್ನು ಟ್ರಾಕ್ಟರ್‌ನಲ್ಲಿ ತರಿಸಲಾಗುತ್ತಿದೆ. ಪ್ರತಿ ಸರ ₹ 40ರಿಂದ 50ಕ್ಕೆ ಮಾರಾಟವಾಗುತ್ತಿದೆ.

ADVERTISEMENT

ಎಲೆ ಕಟ್ಟುವ ಕೆಲಸವನ್ನು ಮನೆಯೊಳಗೇ ಕುಳಿತು ಸುರಕ್ಷಿತವಾಗಿ ಮಾಡಬಹುದಾಗಿದೆ. ನಿತ್ಯವೂ ಎಲೆ ತುಂಬಿದ 20ಕ್ಕೂ ಹೆಚ್ಚು ಟ್ರಾಕ್ಟರ್‌ಗಳಲ್ಲಿ ಎಲೆಯ ಪಿಂಡಿ ಬರುತ್ತಿದೆ. ವ್ಯಾಪಾರ ಬಿರುಸಾಗಿ ನಡೆಯುತ್ತಿದೆ. ಕೆಲಸವಿಲ್ಲದೆ ಆತಂಕಕ್ಕೆ ಒಳಗಾಗಿದ್ದ ಹಲವರಿಗೆ ಈಗ ಕೆಲಸ ಸಿಕ್ಕಿದೆ.

ಈಗ ಬಹಳ ವರ್ಷಗಳವರೆಗೆ ಕಟ್ಟಿದ ಊಟದ ಎಲೆಯನ್ನು ಕೆಡದಂತೆ ಇಡಬಹುದಾಗಿದ್ದು, ಈ ವೃತ್ತಿಯನ್ನು ಕಲಿಯಲು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದ ಮಹಿಳೆಯರು ಎಲೆ ಕಟ್ಟಲು ಮುಂದಾಗಿದ್ದು, ಅತಿ ಕಡಿಮೆ ಬಂಡವಾಳ ಹೂಡಿಕೆಯಿಂದ ಸುರಕ್ಷಿತವಾಗಿ ಬದುಕು ಕಟ್ಟಿಕೊಳ್ಳಬಹುದು. ಹೊಟ್ಟೆಬಟ್ಟೆಗೆ ಮೋಸವಿಲ್ಲದೆ ಬದುಕಲು ತೊಂದರೆ ಇಲ್ಲ ಎನ್ನುತ್ತಾರೆ ತ್ರಿವೇಣಿ.

ಎಲೆ ಕಟ್ಟಿ ಇಸ್ತ್ರಿಯಂತೆ ಚೆಕ್ ಹಾಕಿ ಸುರಕ್ಷಿತ ಸ್ಥಳದಲ್ಲಿ ಇಟ್ಟರೆ ಊಟದ ಎಲೆ ಬಹಳ ವರ್ಷ ಹಾಳಾಗದ ಕಾರಣ ಈ ಕಸುಬು ಮಹಿಳೆಯರಿಗೆ ಗುಡಿಕೈಗಾರಿಕೆಯಂತಿದೆ. ಊಟಕ್ಕೆ ಬಳಸುವ ಪ್ಲಾಸ್ಟಿಕ್ ತಟ್ಟೆ, ದೊನ್ನೆ ಬದಲು ಈ ಎಲೆಯ ತಟ್ಟೆ, ದೊನ್ನೆ ಬಳಸಿದರೆ ಪರಿಸರ ಸ್ನೇಹಿಯಾಗಿಯೂ ಆಗಲಿದೆ. ಈ ಎಲೆಯಿಂದ ಊಟ ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಮಾಂಸದೂಟ ಪ್ರಿಯರಿಗೆ ಈ ಎಲೆಯೂಟ ಅಚ್ಚುಮೆಚ್ಚು ಎನ್ನುವುದು ಎಲೆ ಮಾರಾಟ ಮಾಡುವ ರಾಜಣ್ಣ ಹೇಳುತ್ತಾರೆ.

ಗದ್ದೆಯ ಬದುವಿನಲ್ಲಿ ರೈತ ಈ ಮತ್ತುಗದ ಮರ ಹಾಕಿಕೊಂಡರೆ ಒಳ್ಳೆಯ ಗೊಬ್ಬರ, ನೈಸರ್ಗಿಕ ಬೇಸಾಯಕ್ಕೆ ಅನುಕೂಲ. ಪಕ್ಷಿಗಳಿಗೆ ಇದರ ಹಣ್ಣು ಆಹಾರವಾಗಿ ಸಿಗಲಿದೆ. ಮರಗಳ ಸಂವರ್ಧನೆಯಿಂದ ಸಕಾಲಕ್ಕೆ ಮಳೆ, ಶುದ್ಧ ಗಾಳಿ ಸಿಗಲಿದೆ ಎನ್ನುತ್ತಾರೆ ಕರವೇ ಜಿಲ್ಲಾಧ್ಯಕ್ಷ ಗುರುಮೂರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.