ADVERTISEMENT

ಸಿದ್ದರಾಮಯ್ಯ ಶುದ್ಧಹಸ್ತರೆಂದು ಸಾಬೀತುಪಡಿಸಲಿ: ಬಿಜೆಪಿ ಸವಾಲು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2024, 16:48 IST
Last Updated 4 ಆಗಸ್ಟ್ 2024, 16:48 IST
ಶ್ರೀರಂಗಪಟ್ಟಣದಲ್ಲಿ ಭಾನುವಾರ ನಡೆದ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಸ್‌. ಸಿದ್ದರಾಮಯ್ಯ ಮಾತನಾಡಿದರು. ಮುಖಂಡರಾದ ಕೆ.ಎಸ್‌. ನಂಜುಂಡೇಗೌಡ, ಪೀಹಳ್ಳಿ ಎಸ್‌. ರಮೇಶ್‌, ಇಂಡುವಾಳು ಸಚ್ಛಿದಾನಂದ, ಬಿ.ಸಿ. ಸಂತೋಷಕುಮಾರ್‌ ಇದ್ದಾರೆ
ಶ್ರೀರಂಗಪಟ್ಟಣದಲ್ಲಿ ಭಾನುವಾರ ನಡೆದ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಸ್‌. ಸಿದ್ದರಾಮಯ್ಯ ಮಾತನಾಡಿದರು. ಮುಖಂಡರಾದ ಕೆ.ಎಸ್‌. ನಂಜುಂಡೇಗೌಡ, ಪೀಹಳ್ಳಿ ಎಸ್‌. ರಮೇಶ್‌, ಇಂಡುವಾಳು ಸಚ್ಛಿದಾನಂದ, ಬಿ.ಸಿ. ಸಂತೋಷಕುಮಾರ್‌ ಇದ್ದಾರೆ   

ಶ್ರೀರಂಗಪಟ್ಟಣ: ‘ಮೈಸೂರು ಮುಡಾ ನಿವೇಶನ ಹಂಚಿಕೆ ವಿಷಯದಲ್ಲಿ ಅಕ್ರಮದ ಆರೋಪ ಎದುರಿಸುತ್ತಿರುವ, ವಾಲ್ಮೀಕಿ ನಿಗಮದ ಹಗರಣ ಕಪ್ಪು ಮಸಿ ಮೆತ್ತಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿ ತಾವು ಶುದ್ಧ ಹಸ್ತರೆಂದು ಸಾಬೀತುಪಡಿಸಲಿ’ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಸ್‌. ಸಿದ್ದರಾಮಯ್ಯ ಸವಾಲು ಹಾಕಿದರು.

ಪಟ್ಟಣದಲ್ಲಿ ಭಾನುವಾರ ನಡೆದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಮೈಸೂರಿನ ಕೆಸರೆಯಲ್ಲಿ 1998ರಲ್ಲೇ ಡಿನೋಟಿಫೈ ಆಗಿರುವ 3.16 ಎಕರೆ ಜಮೀನನ್ನು 2004ರಲ್ಲಿ ಖರೀದಿಸಿರುವುದು, ಸದರಿ ಜಮೀನು 6/1 ಆದ ನಂತರ ಅದಕ್ಕೆ ಪ್ರತಿಯಾಗಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ 14 ನಿವೇಶನಗಳನ್ನು ಪಡೆದಿರುವುದು, ಅದಕ್ಕೆ ₹60 ಕೋಟಿ ಪರಿಹಾರ ಕೇಳುತ್ತಿರುವುದು. ಇದೆಲ್ಲ ಅಯೋಮಯವಾಗಿದೆ. ಈ ವಿಷಯದಲ್ಲಿ ಮುಖ್ಯಮಂತ್ರಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ₹97 ಕೋಟಿ ಅಕ್ರಮ ನಡೆದಿದೆ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಇಷ್ಟಾದ ಮೇಲೆ ಅಧಿಕಾರದಲ್ಲಿ ಮುಂದುವರೆಯಲು ಅವರಿಗೆ ನೈತಿಕತೆ ಇದೆಯೇ’ ಎಂದು ಅವರು ಪ್ರಶ್ನಿಸಿದರು.

ADVERTISEMENT

ಮುಖಂಡ ಇಂಡುವಾಳು ಸಚ್ಚಿದಾನಂದ ಮಾತನಾಡಿ, ‘ಗಂಭೀರ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಮತ್ತು ಜೆಡಿಎಸ್‌ ಬೆಂಗಳೂರಿನಿಂದ ಮೈಸೂರಿಗೆ ಹಮ್ಮಿಕೊಂಡಿರುವ ಪಾದಯಾತ್ರೆಯು ಆ.7ರಂದು ಕ್ಷೇತ್ರದ ಕಿರಗಂದೂರು ಗೇಟ್‌ಗೆ ಬರಲಿದೆ. ಎರಡೂ ಪಕ್ಷಗಳ ಮುಖಂಡರು ಅಂದು ತೂಬಿನಕೆರೆ ಕೈಗಾರಿಕಾ ಪ್ರದೇಶದಲ್ಲಿ ತಂಗಲಿದ್ದಾರೆ. ಆ.8ರಂದು ತೂಬಿಕೆರೆಯಿಂದ ಶ್ರೀರಂಗಪಟ್ಟಣದ ವರೆಗೆ ಪಾದಯಾತ್ರೆ ನಡೆಯಲಿದ್ದು, ಪಟ್ಟಣದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಆ.9ರಂದು ಪಟ್ಟಣದಿಂದ ಮೈಸೂರು ಜಿಲ್ಲೆ ಗಡಿಯವರೆಗೆ ಕ್ಷೇತ್ರದ ಸಾವಿರಾರು ಜನರು ಹೆಜ್ಜೆ ಹಾಕಲಿದ್ದಾರೆ. ಆ.10ರಂದು ಮೈಸೂರಿನಲ್ಲಿ ನಡೆಯುವ ಬೃಹತ್‌ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ಪಕ್ಷದ ರೈತ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಎಸ್‌. ನಂಜುಂಡೇಗೌಡ ಮಾತನಾಡಿದರು. ಪಕ್ಷದ ಮಂಡಲದ ಅಧ್ಯಕ್ಷ ಪೀಹಳ್ಳಿ ಎಸ್‌. ರಮೇಶ್‌, ಪ್ರಧಾನ ಕಾರ್ಯದರ್ಶಿ ಬಿ.ಸಿ. ಸಂತೋಷಕುಮಾರ್‌, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಟಿ. ಶ್ರೀಧರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.