ಮಂಡ್ಯ: ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ದೇಶಿ ತಳಿ ಬೆಳೆಯುವ ರೈತರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೃಷಿ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ದೇಶಿ ತಳಿ ಬೆಳೆಯುವ ಸಂದರ್ಭದಲ್ಲಿ ನೈಸರ್ಗಿಕ ಗೊಬ್ಬರ ಬಳಸುವುದರಿಂದ ಹೆಚ್ಚು ಇಳುವರಿ ಸಿಗುತ್ತದೆ. ಇದಕ್ಕಾಗಿ ರೈತರಿಗೆ ಹಳ್ಳಿಕಾರ್ ಹಸುಗಳನ್ನು ಸಾಕಲು ಪ್ರೇರೇಪಿಸಬೇಕಿದೆ. ಪಶುಸಂಗೋಪನ ಇಲಾಖೆಯಿಂದ ಅಮೃತ್ ಮಹಲ್ ಯೋಜನೆಯಡಿ ಹಳ್ಳಿಕಾರ್ ಹಸುಗಳನ್ನು ನೈಸರ್ಗಿಕ ಕೃಷಿ ಅನುಸರಿಸುತ್ತಿರುವ ರೈತರನ್ನು ಆಯ್ಕೆ ಮಾಡಿ ಒದಗಿಸಿಕೊಡಿ ಎಂದು ತಿಳಿಸಿದರು.
ನೈಸರ್ಗಿಕ ಕೃಷಿ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳಲು ರಾಸಾಯನಿಕ ಗೊಬ್ಬರ ದೊರೆಯುವ ದರದಲ್ಲೇ ಅಥವಾ ಅದಕ್ಕಿಂತ ಕಡಿಮೆ ದರದಲ್ಲಿ ನೈಸರ್ಗಿಕ ಗೊಬ್ಬರ ದೊರಕಬೇಕು. ರಾಸಾಯನಿಕ ಗೊಬ್ಬರ ಬಳಸಿ ಶೇ.10 ರಿಂದ 20 ಇಳುವರಿ ಹೆಚ್ಚು ದೊರೆತರು, ಸಾವಯವ ಪದ್ಧತಿಯಲ್ಲಿ ಬೆಳೆದ ಆಹಾರ ಪದಾರ್ಥಗಳ ಬೇಡಿಕೆ ಹೆಚ್ಚಿದ್ದು, ಉತ್ತಮ ಬೆಲೆ ಸಿಗುತ್ತದೆ ಎನ್ನುವ ಸತ್ಯವನ್ನು ರೈತರಿಗೆ ತಿಳಿಸಬೇಕು ಎಂದು ಸೂಚಿಸಿದರು.
ಸಾಂಪ್ರದಾಯಿಕ ಎಣ್ಣೆ ಗಾಣಗಳನ್ನು ಸ್ವಸಹಾಯ ಸಂಘಗಳು ಪ್ರಾರಂಭಿಸಲು ಎಣ್ಣೆಕಾಳುಗಳ ಅವಶ್ಯಕತೆ ಇದೆ. ರೈತರು ತಮ್ಮ ಜಮೀನಿನ ಸುತ್ತ ಹಾಗೂ ಬೆಳೆಗಳ ಮಧ್ಯದಲ್ಲಿ ಎಣ್ಣೆ ಕಾಳು ಬೀಜ ಬಿತ್ತನೆ ಮಾಡಿ ಬೆಳೆಯಬಹುದು, ಬೆಳೆದ ಎಣ್ಣೆಕಾಳುಗಳನ್ನು ಜಿಲ್ಲೆಯಲ್ಲಿ ಸಾಂಪ್ರದಾಯಿಕ ಎಣ್ಣೆ ಗಾಣಗಳನ್ನು ಬಳಸುವ ಮಹಿಳಾ ಸಂಘಗಳಿಗೆ ಮಾರಾಟ ಮಾಡುವಂತೆ ಸಮನ್ವಯ ಮಾಡಿಕೊಡಲು ಅಧಿಕಾರಿಗಳು ಸಹಕರಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಅಶೋಕ್, ಜಿ.ಪಂ. ಉಪ ಕಾರ್ಯದರ್ಶಿ ಲಕ್ಷ್ಮಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.