ADVERTISEMENT

ಪೊಲೀಸ್‌ ವರ್ಗಾವಣೆಯಲ್ಲಿ ಭ್ರಷ್ಟಾಚಾರ ಆರೋಪ: ಪಾರದರ್ಶಕ ವರ್ಗಾವಣೆಗೆ DGPಗೆ ಪತ್ರ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 15:54 IST
Last Updated 2 ಮಾರ್ಚ್ 2026, 15:54 IST
<div class="paragraphs"><p>ವರ್ಗಾವಣೆ</p></div>

ವರ್ಗಾವಣೆ

   

ಮಂಡ್ಯ: ಪೊಲೀಸ್‌ ಇಲಾಖೆಯ ವರ್ಗಾವಣೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಮತ್ತು ರಾಜಕೀಯ ಹಸ್ತಕ್ಷೇಪ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿರುವ ಮೇರೆಗೆ, ಡಿಜಿಟಲ್‌ ಕೌನ್ಸೆಲಿಂಗ್‌ ವಿಧಾನದಲ್ಲಿ ಪಾರದರ್ಶಕವಾಗಿ ವರ್ಗಾವಣೆ ಮಾಡಬೇಕು ಎಂದು ಮಂಡ್ಯ ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಬ್ಯಾಟರಾಯಗೌಡ ಅವರು ಪೊಲೀಸ್‌ ಮಹಾನಿರ್ದೇಶಕರಿಗೆ (ಡಿಜಿಪಿ) ಪತ್ರ ಬರೆದಿದ್ದಾರೆ. 

‘ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್‌ ಬೋರ್ಡ್’ (ಪಿಇಬಿ) ರಚಿಸಿ ವರ್ಗಾವಣೆ ಮಾಡಲಾಗುತ್ತಿರುವುದು ಸರಿಯಷ್ಟೆ. ಡಿವೈಎಸ್ಪಿ, ಪಿಐ, ಪಿಎಸ್‌ಐ ದರ್ಜೆಯ ಪೊಲೀಸ್‌ ಅಧಿಕಾರಿಗಳು ಆಯಕಟ್ಟಿನ ಸ್ಥಳಗಳಿಗೆ ವರ್ಗಾವಣೆ ಹೊಂದಲು ಲಕ್ಷಾಂತರ, ಕೋಟ್ಯಂತರ ರೂಪಾಯಿ ಲಂಚವಾಗಿ ನೀಡಿ, ಪೋಸ್ಟಿಂಗ್‌ ಮಾಡಿಸಿಕೊಳ್ಳುತ್ತಿದ್ದಾರೆ. ಖರ್ಚು ಮಾಡಿದ ಹಣ ಸಂಪಾದನೆ ಮಾಡುವ ಸಲುವಾಗಿ ಅಕ್ರಮ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಸಾರ್ವಜನಿಕರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ’ ಎಂದು ರಾಜಕೀಯ ಪ್ರತಿನಿಧಿಗಳು ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ನೇರವಾಗಿ ಆರೋಪ ಮಾಡಿದ್ದಾರೆ. 

ADVERTISEMENT

ಒಂದು ಪೊಲೀಸ್‌ ಠಾಣೆ, ವೃತ್ತ, ಉಪವಿಭಾಗಕ್ಕೆ ಒಂದಕ್ಕಿಂತ ಹೆಚ್ಚು ವರ್ಗಾವಣೆ ಕೋರಿಕೆ ಅರ್ಜಿಗಳು ಸಲ್ಲಿಕೆಯಾದರೆ, ಸೇವಾ ಹಿರಿತನ ಪರಿಗಣಿಸಿ, ಆ ಸ್ಥಳಕ್ಕೆ ವರ್ಗಾವಣೆ ಮಾಡಬೇಕು. ಯಾವುದೇ ಕರ್ತವ್ಯ ಲೋಪದ ಮೇಲೆ, ಕ್ರಿಮಿನಲ್‌ ಪ್ರಕರಣಗಳ ಸಂಬಂಧ ಅಮಾನತುಗೊಂಡರೆ ಆರೋಪಗಳ ವಿಚಾರಣೆ ಮುಗಿಯುವವರೆಗೆ ಕಡ್ಡಾಯವಾಗಿ ಕಾರ್ಯನಿರ್ವಾಹಕೇತರ (ನಾನ್‌ ಎಕ್ಸಿಕ್ಯೂಟಿವ್‌) ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುವಂತೆ ನಿಯಮ ತರಬೇಕು ಎಂದು ಮನವಿ ಮಾಡಿದ್ದಾರೆ. 

ಒಂದು ಕಾರ್ಯನಿರ್ವಾಹಕ ಮತ್ತು ಕಾರ್ಯನಿರ್ವಾಹಕೇತರ ಹುದ್ದೆಯ ಗರಿಷ್ಠ ಅವಧಿಯನ್ನು 2 ವರ್ಷಕ್ಕೆ ಸೀಮಿತಗೊಳಿಸಬೇಕು. ಒಬ್ಬ ಅಧಿಕಾರಿ ತನ್ನ ಸೇವಾವಧಿಯಲ್ಲಿ ಮೂರನೇ ಒಂದು ಭಾಗ ಕಡ್ಡಾಯವಾಗಿ ಕಾರ್ಯನಿರ್ವಾಹಕೇತರ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಬೇಕು. ಬೆಂಗಳೂರು ನಗರ ಮತ್ತು ಇತರೆ ಕಮಿಷನರೇಟ್‌ ಪೊಲೀಸ್‌ ಠಾಣೆಗಳಲ್ಲಿ ಗರಿಷ್ಠ 6 ವರ್ಷದವರೆಗೆ ಕರ್ತವ್ಯ ನಿರ್ವಹಿಸುವಂತೆ ನಿಯಮ ರೂಪಿಸಬೇಕು ಎಂದು ಪತ್ರದಲ್ಲಿ ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.