ಮಂಡ್ಯ: ಮಳವಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ಜಾರಿಗೊಳ್ಳುತ್ತಿರುವ 24X7 ಕುಡಿಯುವ ನೀರಿನ ಕಾಮಗಾರಿ ಅವೈಜ್ಞಾನಿಕವಾಗಿ, ಕಳಪೆ ಗುಣಮಟ್ಟದಿಂದ ಕೂಡಿದ್ದು ತಾತ್ಕಾಲಿಕವಾಗಿ ಯೋಜನೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಮಳವಳ್ಳಿ ಪುರಸಭೆ ಸದಸ್ಯರು ಶುಕ್ರವಾರ ಮಂಡ್ಯ ಉಪವಿಭಾಗಾಧಿಕಾರಿ ಮತ್ತು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಎಂಜಿನಿಯರ್ಗೆ ಮನವಿ ಸಲ್ಲಿಸಿದರು.
ಪಟ್ಟಣದಲ್ಲಿ ಕಾಮಗಾರಿ ನಡೆಯುತ್ತಿದ್ದು, ಹಲವು ಕಡೆ ಪೈಪ್ಲೈನ್ ಅಳವಡಿಸದಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಕೆಲವು ಪೈಪ್ಲೈನ್ಗಳಲ್ಲಿ ನೀರು ಬರುತ್ತಿಲ್ಲ. ನೀರು ಬಂದರೂ 15 ನಿಮಿಷಕ್ಕೆ ನಿಂತುಹೋಗುತ್ತದೆ. ಕೆಲವೆಡೆ ಹೊಸ ನಲ್ಲಿಯಲ್ಲಿ ನೀರು ಬರದೆ ಹಳೇ ಪೈಪ್ಲೈನ್ನಲ್ಲಿ ಬರುವ ನೀರನ್ನೇ ಬಳಸಲಾಗುತ್ತಿದೆ. ಹೊಸ ಯೋಜನೆ ಉಪಯೋಗಕ್ಕೆ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದರ ಬಗ್ಗೆ ಹಲವಾರು ಬಾರಿ ಪುರಸಭೆ ಮುಖ್ಯಾಧಿಕಾರಿ, ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಶಾಸಕರು, ಉಸ್ತುವಾರಿ ಸಚಿವರು ಅಸಮಾಧಾನ ವ್ಯಕ್ತಪಡಿಸಿ ಸರಿಪಡಿಸುವಂತೆ ಸೂಚನೆ ನೀಡಿದ್ದರು. ಆದರೂ ಇಲ್ಲಿಯವರೆಗೂ ಸರಿಪಡಿಸಿಲ್ಲ. ಆದ್ದರಿಂದ ಯೋಜನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕು ಹಾಗೂ ವಾಸ್ತವಾಂಶ ಪರಿಶೀಲಿಸಲು ಪಟ್ಟಣದಲ್ಲಿ ಪಾದಯಾತ್ರೆ ಮಾಡಬೇಕು ಎಂದು ಒತ್ತಾಯಿಸಿದರು.
ಪರಸಭೆ ಸದಸ್ಯರಾದ ನೂರುಲ್ಲಾ, ಎಸ್.ಕವಿತಾ, ಟಿ.ನಂದಕುಮಾರ್, ಆರ್.ಎನ್.ಸಿದ್ದರಾಜು, ಮಣಿ, ಆಶಿಯಾ ಬೇಗಂ, ಪ್ರಮೀಳಾ, ಎಂ.ಆರ್.ರಾಜಶೇಖರ್, ರವಿ, ಎಂ.ಎನ್.ಕೃಷ್ಣ, ಭಾಗ್ಯಮ್ಮ, ಲಕ್ಷ್ಮಮ್ಮ, ಪುಟ್ಟಸ್ವಾಮಿ, ಎಂ.ಟಿ.ಪ್ರಶಾಂತ್, ಕುಮಾರ್, ರಾಧಾ, ಬಸವರಾಜು, ಶಿವಸ್ವಾಮಿ, ಮಹೇಶ್ವರಿ, ಆರ್.ಸವಿತಾ, ಇಂದ್ರಮ್ಮ, ನಾಗೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.