ಮದ್ದೂರು ಪಟ್ಟಣದಲ್ಲಿ ಸೋಮವಾರ ಸಂಜೆ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಲ್ಲಿಕಾರ್ಜುನ ಬಾಲದಂಡಿ, ವಿಷ್ಣುವರ್ಧನ, ಕವಿತಾ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಪಥ ಸಂಚಲನ ನಡೆಸಿದರು
ಮದ್ದೂರು: ‘ನಮ್ಮ ಏರಿಯಾ ಮಿನಿ ಪಾಕಿಸ್ತಾನದಂತೆ ಆಗಿದೆ. ಮಸೀದಿ ಮುಂಭಾಗ ನಮ್ಮನ್ನು ಓಡಾಡಲು ಬಿಡುವುದಿಲ್ಲ. ಮಚ್ಚು ಲಾಂಗು ಹಿಡಿದು ರಾತ್ರಿ ವೇಳೆ ಯುವಕರು ಓಡಾಡುತ್ತಾರೆ. ನಾವು ಭಯದ ವಾತಾವರಣದಲ್ಲಿ ಬದುಕುತ್ತಿದ್ದೇವೆ. ನಮ್ಮವರು ಸತ್ತರೂ ಶವದ ಮುಂದೆ ತಮಟೆ ಬಾರಿಸಲು ಬಿಡುವುದಿಲ್ಲ’ ಎಂದು ಚನ್ನೇಗೌಡ ಬಡಾವಣೆಯ ಹಿಂದೂ ಮಹಿಳೆಯರು ಪೊಲೀಸರ ಎದುರು ಅಳಲು ತೋಡಿಕೊಂಡರು.
ಪಟ್ಟಣದಲ್ಲಿ ಭಾನುವಾರ ರಾತ್ರಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಮತ್ತು ಸೋಮವಾರ ನಡೆದ ಪ್ರತಿಭಟನಾ ಮೆರವಣಿಗೆ, ಲಾಠಿ ಪ್ರಹಾರ ಈ ಎಲ್ಲ ಬೆಳವಣಿಗೆಗಳಿಂದ ಮದ್ದೂರು ಪಟ್ಟಣದಲ್ಲಿ ಎರಡು ದಿನಗಳಿಂದ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಸೋಮವಾರ ಸಂಜೆ ವಾತಾವರಣ ತಿಳಿಗೊಂಡಂತೆ ಮೇಲ್ನೋಟಕ್ಕೆ ಕಂಡರೂ, ಸದ್ಯದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ತಪ್ಪಿತಸ್ಥರನ್ನು ಸದೆ ಬಡಿಯುತ್ತೇವೆ: ಉದಯ
‘ಮದ್ದೂರು ಪಟ್ಟಣದಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಅಹಿತಕರ ಘಟನೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಈ ಘಟನೆಯನ್ನು ನಾನು ಖಂಡಿಸುತ್ತೇನೆ. ಘಟನೆ ಹಿಂದೆ ಯಾರೇ ಇದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದು ಮದ್ದೂರು ಶಾಸಕ ಕೆ.ಎಂ.ಉದಯ ತಿಳಿಸಿದ್ದಾರೆ.
‘ಯಾರೂ ಆತಂಕಕ್ಕೆ ಮತ್ತು ಉದ್ವೇಗಕ್ಕೆ ಒಳಗಾಗಬೇಡಿ. ನಮ್ಮ ತಾಲ್ಲೂಕಿನ ಜನತೆ ಶಾಂತಿ ಪ್ರಿಯರು. ಆಗಿರುವ ಘಟನೆಯನ್ನು ಸರಿಪಡಿಸಿಕೊಳ್ಳೋಣ. ತಪ್ಪಿತಸ್ಥರನ್ನು ಸದೆಬಡಿದು ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ. ನಿಮ್ಮ ಜೊತೆ ನಾವು ಯಾವಾಗಲೂ ಇರುತ್ತೇವೆ. ಎಲ್ಲರೂ ಶಾಂತಿ ಕಾಪಾಡುವಂತೆ ಕೈ ಮುಗಿದು ಮನವಿ ಮಾಡುತ್ತೇನೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.