
ಶ್ರೀರಂಗಪಟ್ಟಣ: ‘ಪವಿತ್ರಾತ್ಮನಾದ ಶಿವನ ಸ್ಮರಣೆಯಿಂದ ಮನಸ್ಸಿನ ವಿಕಾರಗಳು ದೂರಾಗಿ ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ’ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಹಲಗೂರು ಶಾಖೆಯ ಮುಖ್ಯಸ್ಥೆ ಬಿ.ಕೆ. ಮಂಜುಳಾ ಹೇಳಿದರು.
ಪಟ್ಟಣದ ಜ್ಞಾನ ಗಂಗಾ ಭವನದ ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ಥಳೀಯ ಶಾಖೆಯಲ್ಲಿ ಭಾನುವಾರ ಏರ್ಪಡಿಸಿದ್ದ ಮಹಾ ಶಿವರಾತ್ರಿ ಹಾಗೂ 90ನೇ ಶಿವ ಜಯಂತಿಯಲ್ಲಿ ಅವರು ಮಾತನಾಡಿದರು.
‘ಶಿವ ಎಂದರೆ ಶುಭ ಎಂದರ್ಥ. ಪರಮಾತ್ಮ ಎಂದರೆ ಸರ್ವಶ್ರೇಷ್ಠ ಆತ್ಮ ಎಂದು ಕರೆಯಲಾಗುತ್ತದೆ. ಶಿವ ಮತ್ತು ಪಾರ್ವತಿಯರ ವಿವಾಹ ನಡೆದ ದಿನವೇ ಮಹಾ ಶಿವರಾತ್ರಿ. ಅದು ಆತ್ಮ ಮತ್ತು ಪರಮಾತ್ಮನ ಸಮ್ಮಿಲನದ ದಿನವೂ ಹೌದು. ಶಿವರಾತ್ರಿಯಂದು ಜಾಗರಣೆ ಮಾಡುವುದು ಜಾಗೃತಾವಸ್ಥೆಯ ಸಂಕೇತ. ಸದಾ ಎಚ್ಚರದಿಂದ ಇದ್ದು, ಶಿವನ ಧ್ಯಾನ ಮಾಡುವುದರಿಂದ ಮಾನಸಿಕ ಒತ್ತಡಗಳು ನಿವಾರಣೆಯಾಗಿ ಏಕಾಗ್ರತೆ ಮತ್ತು ಆತ್ಮಶಕ್ತಿಗಳು ಸಿದ್ಧಿಸುತ್ತವೆ. ಒಂದು ಹೊತ್ತು ಉಪವಾಸ ಇರುವುದರಿಂದ ದೇಹ ಶುದ್ಧಿಯಾಗಿ ಆವಯವಗಳು ಚಲನಶೀಲವಾಗುತ್ತವೆ’ ಎಂದು ತಿಳಿಸಿದರು.
ಪಟ್ಟಣದ ರಂಗನಾಥನಗರ ಬಡಾವಣೆಯ ನಮ್ಮ ಕ್ಲಿನಿಕ್ ವೈದ್ಯ ಡಾ.ಸೂರ್ಯ ಮಾತನಾಡಿ, ‘ಆಸ್ಪತ್ರೆಗಳು ದೈಹಿಕ ಸಮಸ್ಯೆಗಳನ್ನು ಪರಿಹರಿಸಿದರೆ ಆಧ್ಯಾತ್ಮಿಕ ಕೇಂದ್ರಗಳು ಮಾನಸಿಕ ಮತ್ತು ಭಾವನಾತ್ಮಕ ಸಮಸ್ಯೆಗಳನ್ನು ನಿವಾರಿಸುತ್ತವೆ. ಹಾಗಾಗಿ ದಿನದಲ್ಲಿ ಒಂದು ತಾಸು ಧ್ಯಾನ, ಯೋಗ ಮಾಡುವುದು ಒಳಿತು’ ಎಂದರು.
ಜ್ಞಾನ ಗಂಗಾ ಭವನದ ಮುಂದೆ ಶಿವ ಧ್ವಜಾರೋಹಣ ನಡೆಯಿತು. ಒಂದು ತಾಸಿಗೂ ಹೆಚ್ಚು ಕಾಲ ಸಾಮೂಹಿಕ ಶಿವ ಧ್ಯಾನ ಮತ್ತು ಮುರಳಿ ವಾಚನ ನಡೆಯಿತು. ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ಥಳೀಯ ಶಾಖೆಯ ಮುಖ್ಯಸ್ಥೆ ಬಿ.ಕೆ. ಶ್ರುತಿ, ಕೆಪಿಸಿಸಿ ಮಾಜಿ ಸದಸ್ಯ ಎನ್. ಗಂಗಾಧರ್, ಬಿ.ಟಿ. ಕೊಪ್ಪಲು ಸೋಮೇಗೌಡ, ಮುನಿ ವೆಂಕಟಪ್ಪ, ಕುಮಾರಣ್ಣ, ಮೋಹನ್, ಗಿರಿಜಾ, ರೇವತಿ, ಪ್ರಕಾಶ್, ಶರತ್ ಪಾಲ್ಗೊಂಡಿದ್ದರು. ಪ್ರಸಾದ ವಿತರಣೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.