ಮಳವಳ್ಳಿ: ಮಕ್ಕಳಿಲ್ಲದ ಮಹಿಳೆಯೊಬ್ಬರು ಪತಿಯೊಂದಿಗೆ ಸೇರಿಕೊಂಡು, ತಮ್ಮ ಮಗು ಕಾಣೆಯಾಗಿದೆ ಎಂದು ಸಂಬಂಧಿಕರ ಮಗುವಿನ ಭಾವಚಿತ್ರದೊಂದಿಗೆ ಪೊಲೀಸರಿಗೆ ಸುಳ್ಳು ದೂರು ಕೊಟ್ಟ ಘಟನೆ ಪಟ್ಟಣದಲ್ಲಿ ನಡೆದಿದೆ.
ತಿ.ನರಸೀಪುರ ತಾಲ್ಲೂಕಿನ ವಡ್ಡರಕೊಪ್ಪಲು ಗ್ರಾಮದ ಶಿವಕುಮಾರ್ ಎಂಬವರ ಪತ್ನಿ ಸವಿತಾ ದೂರು ಕೊಟ್ಟವರು. ಈ ದಂಪತಿ ಹಲವು ವರ್ಷಗಳ ಹಿಂದೆಯೇ ಗ್ರಾಮ ತೊರೆದಿದ್ದರು. ಮರಳಿ ಗ್ರಾಮಕ್ಕೆ ಭೇಟಿ ನೀಡಬೇಕಾದಾಗ, ತಮಗೆ ಮಗುವಿದೆ ಎಂದು ಸಂಬಂಧಿಗಳಿಗೆ ತಿಳಿಸಲು ನಿರ್ಧರಿಸಿದ್ದರು. ಸೋಮವಾರ ಸಂಜೆ ಚನ್ನಪಟ್ಟಣದಿಂದ ಮಳವಳ್ಳಿಗೆ ಬಂದಾಗ ಸಾರಿಗೆ ಬಸ್ನಲ್ಲಿ ಮಗು ಅಪಹರಣವಾಗಿದೆ ಎಂದು ಸುಳ್ಳು ಹೇಳಿ, ಕಣ್ಣೀರು ಹಾಕುತ್ತಾ ಪಟ್ಟಣದ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದರು.
ತನಿಖೆ ಆರಂಭಿಸಿದ ಪೊಲೀಸರಿಗೆ, ಮಹಿಳೆಯು ತನ್ನ ತವರು ಚನ್ನಪಟ್ಟಣ ಮೂಲದ ಗ್ರಾಮವೊಂದರ ಮಗುವಿನ ಭಾವಚಿತ್ರವನ್ನು ನೀಡಿದ್ದಾರೆಂಬ ವಿಷಯ ಬೆಳಕಿಗೆ ಬಂತು.
‘ಮಕ್ಕಳಿಲ್ಲವೆಂಬ ಸಂಗತಿ ತಿಳಿಯಬಾರದೆಂದು ಮಹಿಳೆ ಹೀಗೆ ವರ್ತಿಸಿದ್ದಾರೆ. ಮೂರ್ಚೆ ರೋಗ ಬಂದಂತೆ ವರ್ತಿಸಿದ್ದರಿಂದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.