
ಮಳವಳ್ಳಿ: ತಾಲ್ಲೂಕಿನ ಮಲ್ಲಿಕ್ಯಾತನಹಳ್ಳಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು, ಬೀದಿ ದೀಪ ಅಳವಡಿಕೆ, ರಾಷ್ಟ್ರೀಯ ಹೆದ್ದಾರಿ-938ರ ಸಲಾಂ ಬೋರೆ ಬಳಿ ಹಂಪ್ಸ್ ಹಾಕಲು ಒತ್ತಾಯಿಸಿ ಗ್ರಾಮಸ್ಥರು ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲ್ಲೂಕು ಕಚೇರಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಎಲ್.ಭರತ್ ರಾಜ್ ಮಾತನಾಡಿ, ‘ರಾಜಕೀಯ ಪಕ್ಷಗಳು ತಮ್ಮ ಆಡಳಿತಕ್ಕಾಗಿ ಸುಳ್ಳು ಘೋಷಣೆಗಳನ್ನು ನೀಡುತ್ತಿದ್ದಾರೆ. ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುತ್ತಿಲ್ಲ, ಇದರ ಜೊತೆಗೆ ಗ್ರಾಮಕ್ಕೆ ಪೂರೈಕೆಯಾಗುತ್ತಿರುವ ನೀರು ಶುದ್ದೀಕರಣಗೊಳ್ಳದ ಹಿನ್ನೆಲೆಯಲ್ಲಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಜನರಿಗೆ ಶುದ್ದೀಕರಿಸಿದ ನೀರು ನೀಡಬೇಕು. ಗೇಟ್ ಬಳಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಬೇಕು’ ಎಂದು ಆಗ್ರಹಿಸಿದರು.
ಅಗ್ರಿಗೋಲ್ಡ್ ಕಂಪನಿಯಿಂದ ಮೋಸ ಹೋದವರಿಗೆ ಕಂಪನಿಯ ಆಸ್ತಿಯನ್ನು ಗೋಟ್ಟುಗೋಲು ಹಾಕಿ ಹಣ ಕೊಡಿಸಬೇಕು. ರಾಷ್ಟ್ರೀಯ ಹೆದ್ದಾರಿ-938ರ ಸಲಾಂ ಬೋರೆ ಬಳಿ ಎಲ್ಲ ಸಾರಿಗೆ ಬಸ್ ಗಳ ನಿಲುಗಡೆ ಮಾಡಬೇಕು. ರೊಟ್ಟಿಕಟ್ಟೆವರೆಗೆ ರಸ್ತೆ ಬದಿ ಬೀದಿ ದೀಪ ಅಳವಡಿಸಿ ರಸ್ತೆಗೆ ಹಂಪ್ಸ್ ಹಾಕಬೇಕು. ಕಾಡುಪ್ರಾಣಿಗಳು ಹಾಗೂ ಕಳ್ಳರ ಹಾವಳಿ ತಪ್ಪಿಸಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ್ ಎಸ್.ವಿ.ಲೋಕೇಶ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.ಗ್ರಾಮಸ್ಥರು ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.