ಪ್ರಾತಿನಿಧಿಕ ಚಿತ್ರ
ಮಂಡ್ಯ: ಮಗಳ ಹೆಸರಿಗೆ ಆಸ್ತಿ ಬರೆದುಕೊಟ್ಟ ಕಾರಣಕ್ಕೆ ತಂದೆಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಮಗನೇ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಸುಂಡಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಗ್ರಾಮದ ನಂಜಪ್ಪ (70) ಕೊಲೆಯಾಗಿದ ವ್ಯಕ್ತಿ, ಆರೋಪಿ ಮಹದೇವ್ ತಂದೆಯನ್ನು ಕೊಂದು ಪರಾರಿಯಾಗಿದ್ದಾನೆ. ಅಪ್ಪ ಮಗನ ನಡುವೆ ನಡೆಯುತ್ತಿದ್ದ ಜಗಳ ಬಿಡಿಸಲು ಬಂದ ತಾಯಿ ಮೇಲೂ ಮಹದೇವ್ ಹಲ್ಲೆ ಮಾಡಿದ್ದಾನೆ.
ನಂಜಪ್ಪ ರಾಮನಗರದ ಜಿಲ್ಲೆ, ಅರ್ಚಕರಹಳ್ಳಿ ಗ್ರಾಮದವರು. ತನ್ನ ಮಗಳನ್ನು ಸುಂಡಹಳ್ಳಿ ಗ್ರಾಮದ ಯುವಕನಿಗೆ ವಿವಾಹ ಮಾಡಿಕೊಟ್ಟಿದ್ದರು. ನಂತರ ಮಗಳು ಅಳಿಯ ಇದ್ದ ಸುಂಡಹಳ್ಳಿ ಗ್ರಾಮಕ್ಕೇ ಬಂದು ನೆಲೆಸಿದ್ದರು. ಸ್ವಂತ ಮನೆ, ಜಮೀನು ಮಾಡಿಕೊಂಡು ಪತ್ನಿಯೊಂದಿಗೆ ಜೀವನ ನಿರ್ವಹಣೆ ಮಾಡುತ್ತಿದ್ದರು.
ನಂಜಪ್ಪ ತನ್ನ ಆಸ್ತಿಯನ್ನು ಮಗಳಿಗೆ ಬರೆದು ಕೊಟ್ಟಿದ್ದರು. ಇದರಿಂದ ಕುಪಿತನಾಗಿದ್ದ ಮಹದೇವ್ ತಂದೆಯೊಂದಿಗೆ ಜಗಳವಾಡುತ್ತಿದ್ದ. ಮಂಗಳವಾರ ನಸುಕಿನಲ್ಲಿ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿತ್ತು. ತಂದೆಯನ್ನು ಬೀದಿಯಲ್ಲಿ ಅಟ್ಟಿಸಿಕೊಂಡು ಹೋಗಿದ್ದಾನೆ, ನಂಜಪ್ಪ ಓಡಲಾಗದೇ ಕೆಳಕ್ಕೆ ಬಿದ್ದಿದ್ದಾರೆ, ಆಗ ಅವರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ತೀವ್ರ ರಕ್ತಸ್ರಾವದಿಂದ ನಂಜಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.