ADVERTISEMENT

ಮಂಡ್ಯ | 'ಏಡ್ಸ್‌ ನಿಯಂತ್ರಣ; ಮುನ್ನೆಚ್ಚರಿಕೆಯೇ ಮದ್ದು'

ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ‘ವಿಶ್ವ ಏಡ್ಸ್‌ ದಿನ’ ಆಚರಣೆ: ಬಂಧಿತರಿಗೆ ಅರಿವಿನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 5:06 IST
Last Updated 2 ಡಿಸೆಂಬರ್ 2025, 5:06 IST
ಮಂಡ್ಯ ನಗರದ ಜಿಲ್ಲಾ ಕಾರಾಗೃಹದ ಆವರಣದಲ್ಲಿ ನಡೆದ ವಿಚಾರಣಾ ಕೈದಿಗಳಿಗೆ ಏಡ್ಸ್ ಕುರಿತು ಅರಿವಿನ ಕಾರ್ಯಕ್ರಮವನ್ನು ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ (ಡಿ.ಎ.ಪಿ.ಸಿ.ಯು) ಡಾ.ಆಶಾಲತಾ ಉದ್ಘಾಟಿಸಿದರು. ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಕೆ. ಲೋಕೇಶ್ ಪಾಲ್ಗೊಂಡಿದ್ದರು 
ಮಂಡ್ಯ ನಗರದ ಜಿಲ್ಲಾ ಕಾರಾಗೃಹದ ಆವರಣದಲ್ಲಿ ನಡೆದ ವಿಚಾರಣಾ ಕೈದಿಗಳಿಗೆ ಏಡ್ಸ್ ಕುರಿತು ಅರಿವಿನ ಕಾರ್ಯಕ್ರಮವನ್ನು ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ (ಡಿ.ಎ.ಪಿ.ಸಿ.ಯು) ಡಾ.ಆಶಾಲತಾ ಉದ್ಘಾಟಿಸಿದರು. ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಕೆ. ಲೋಕೇಶ್ ಪಾಲ್ಗೊಂಡಿದ್ದರು    

ಮಂಡ್ಯ: ‘ಎಚ್ಐವಿ ವೈರಸ್ ಮನುಷ್ಯನ ದೇಹದ ರೋಗ ನಿರೋಧಕ ಶಕ್ತಿಯನ್ನು ಹಂತ- ಹಂತವಾಗಿ ನಾಶಗೊಳಿಸುತ್ತದೆ. ಜಾಗತಿಕವಾಗಿ ಮಾರಕವಾಗಿರುವ ಏಡ್ಸ್ ಕಾಯಿಲೆ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಹಾಗೂ ಜಾಗೃತಿ ಮೂಡಿಸುವುದೊಂದೇ ಮಾರ್ಗ’ ಎಂದು ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ (ಡಿ.ಎ.ಪಿ.ಸಿ.ಯು) ಡಾ.ಆಶಾಲತಾ ತಿಳಿಸಿದರು.

ನಗರದ ಜಿಲ್ಲಾ ಕಾರಾಗೃಹದ ಆವರಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ (ಬೆಂಗಳೂರು), ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣಾ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ (ಕ್ಯಾಂತುಂಗೆರೆ), ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಸಹಯೋಗದಲ್ಲಿ ‘ವಿಶ್ವ ಏಡ್ಸ್ ದಿನಾಚರಣೆ’ ಅಂಗವಾಗಿ ಸೋಮವಾರ ನಡೆದ ವಿಚಾರಣಾಧೀನ ಕೈದಿಗಳಿಗೆ ಏಡ್ಸ್ ಕುರಿತು ಅರಿವಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಈ ರೋಗವು ವ್ಯಕ್ತಿಯನ್ನು ದುರ್ಬಲಗೊಳಿಸುತ್ತದೆ. ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ, ಸೂಕ್ತ ಚಿಕಿತ್ಸೆಯು ರೋಗಿ ಬದುಕಿರುವವರೆಗೆ ಉತ್ತಮ ಜೀವನ ನಡೆಸಲು ಅನುವಾಗಲಿದೆ. ಎಚ್‌ಐವಿ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗೋಪ್ಯವಾಗಿ ಮತ್ತು ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ’ ಎಂದರು.

ADVERTISEMENT

ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಕೆ. ಲೋಕೇಶ್ ಮಾತನಾಡಿ, ‘ಏಡ್ಸ್‌ ರೋಗ ಬರುವ ಮುನ್ನ ಇದರ ಬಗ್ಗೆ ತಿಳಿದುಕೊಳ್ಳುವುದು ಬಹುಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ವೈದ್ಯಾಧಿಕಾರಿ ಡಾ.ಭವಾನಿ ಶಂಕರ್, ಜೈಲರ್ ಬಾರಕೇರ, ಪರಮಾನಂದ ಹರಳವಾಳ, ವಿನಾಯಕ್, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್‌ನ ವಿನಯ್‌ಕುಮಾರ್‌ ಭಾಗವಹಿಸಿದ್ದರು.

ಎಚ್‌ಐವಿ ಸೋಂಕಿತರಿಗೆ ಉಚಿತ ಚಿಕಿತ್ಸೆ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ದೂರವಿರಿ ಡಿ.1ರಂದು ವಿಶ್ವ ಏಡ್ಸ್ ದಿನ ಆಚರಣೆ 

‘ರೋಗಿಗಳನ್ನು ಕೀಳಾಗಿ ಕಾಣಬೇಡಿ’

ಮಿಮ್ಸ್‌ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಸುಭಾಷ್ ಮಾತನಾಡಿ ‘ಅಸುರಕ್ಷಿತ ಲೈಂಗಿಕ ಸಂಪರ್ಕ ಸೋಂಕಿತ ರಕ್ತದ ವರ್ಗಾವಣೆ ಅಥವಾ ಸೋಂಕಿತ ವ್ಯಕ್ತಿಗೆ ಬಳಸಿದ ಚುಚ್ಚುಮದ್ದಿನ ಹಂಚಿಕೆ ಮೂಲಕ ಎಚ್‌ಐವಿ ಸೋಂಕು ಹರಡುತ್ತದೆ. ಈ ರೋಗದ ಬಗ್ಗೆ ಇಂದಿಗೂ ಸಮಾಜದಲ್ಲಿ ಅನೇಕ ತಪ್ಪು ಕಲ್ಪನೆಗಳು ಇವೆ. ರೋಗಿಗಳನ್ನು ಕೀಳಾಗಿ ನೋಡುವ ಪ್ರವೃತ್ತಿ ಕಂಡುಬರುತ್ತಿದೆ’ ಎಂದು ವಿಷಾದಿಸಿದರು. ಈ ತಪ್ಪು ಕಲ್ಪನೆಗಳನ್ನು ನಿವಾರಿಸಲು ಮತ್ತು ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿ.1ರಂದು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಏಡ್ಸ್ ದಿನವು ಕೇವಲ ಒಂದು ಆಚರಣೆ ಅಲ್ಲ ಇದು ಜೀವ ಉಳಿಸುವ ಜಾಗೃತಿ ಅಭಿಯಾನ. ರೋಗದ ಬಗ್ಗೆ ಸರಿಯಾದ ಮಾಹಿತಿ ತಡೆಗಟ್ಟುವಿಕೆ ಮತ್ತು ರೋಗಿಗಳಿಗೆ ಮಾನವೀಯತೆ ತೋರಿಸುವುದೇ ಮುಖ್ಯ ಉದ್ದೇಶ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.