ADVERTISEMENT

ಅರ್ಹರ ಪಡಿತರ ಚೀಟಿ ರದ್ದುಗೊಳಿಸಬೇಡಿ: ಅಧಿಕಾರಿಗಳಿಗೆ ಸೂಚನೆ

ಕೆಡಿಪಿ ಸಭೆ: ಕಳಪೆ ಪಶು ಆಹಾರ ಮಾರಾಟದಿಂದ ಜಾನುವಾರುಗಳ ಸಾವು– ಆರೋಪ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 4:26 IST
Last Updated 19 ನವೆಂಬರ್ 2025, 4:26 IST
<div class="paragraphs"><p>ಮಂಡ್ಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಶಾಸಕ ಪಿ.ರವಿಕುಮಾರ್‌ ಅಧ್ಯಕ್ಷತೆಯಲ್ಲಿ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು&nbsp;</p></div>

ಮಂಡ್ಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಶಾಸಕ ಪಿ.ರವಿಕುಮಾರ್‌ ಅಧ್ಯಕ್ಷತೆಯಲ್ಲಿ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು 

   

–ಪ್ರಜಾವಾಣಿ ಚಿತ್ರ 

ಮಂಡ್ಯ: ‘ತಾಲ್ಲೂಕಿನಲ್ಲಿ ಬಡವರ ಬಿಪಿಎಲ್‌ ಕಾರ್ಡ್‌ಗಳು ರದ್ದಾಗುತ್ತಿವೆ ಎಂಬ ದೂರುಗಳು ಕೇಳಿಬಂದಿವೆ. ಯಾವುದೇ ಕಾರಣಕ್ಕೂ ಅರ್ಹರ ಪಡಿತರ ಚೀಟಿ ರದ್ದಾಗಬಾರದು. ಪಡಿತರ ಚೀಟಿಗಳನ್ನು ಅನರ್ಹಗೊಳಿಸುವ ಮುನ್ನ ನನ್ನೊಂದಿಗೆ ಕಡ್ಡಾಯವಾಗಿ ಚರ್ಚೆ ಮಾಡಿ’ ಎಂದು ಶಾಸಕ ಪಿ.ರವಿಕುಮಾರ್‌ ಅವರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ADVERTISEMENT

ನಗರದ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. 

‘ಮುಖ್ಯಮಂತ್ರಿ ಮತ್ತು ಆಯುಕ್ತರ ಸೂಚನೆಯಂತೆ, ವಾರ್ಷಿಕವಾಗಿ ₹1.20 ಲಕ್ಷ ಆದಾಯ ಹೊಂದಿರುವ ಮತ್ತು ಐಟಿ ಪಾವತಿಸಿರುವ ಕಾರಣದಿಂದ ಮಂಡ್ಯ ತಾಲ್ಲೂಕಿನಲ್ಲಿ 1667 ಪಡಿತರ ಚೀಟಿಗಳನ್ನು ಅನರ್ಹರೆಂದು ಗುರುತಿಸಿ, ಬಿಪಿಎಲ್‌ನಿಂದ ಎಪಿಎಲ್‌ಗೆ ಪರಿವರ್ತನೆ ಮಾಡಲಾಗಿದೆ’ ಎಂದು ಆಹಾರ ನಿರೀಕ್ಷಕ ರೇವಣ್ಣ ಮಾಹಿತಿ ನೀಡಿದರು. 

ನಿಗಮ, ಮಂಡಳಿಯಿಂದ ಸಹಾಯಧನ ಪಡೆದು ಕಾರು ಪಡೆದವರು ಮತ್ತು ಬಾಡಿಗೆ ಕಾರು ಖರೀದಿಸಿದವರು ಕಡ್ಡಾಯವಾಗಿ ‘ಐಟಿ ರಿಟರ್ನ್ಸ್‌’ ಸಲ್ಲಿಸಬೇಕಿರುತ್ತದೆ. ಆ ಕಾರಣಕ್ಕೆ ಬಡವರ ಬಿಪಿಎಲ್‌ ಕಾರ್ಡ್‌ ರದ್ದುಪಡಿಸಬಾರದು. ಮಾನದಂಡಗಳನ್ನು ವಿವೇಚನೆಯಿಂದ ಬಳಸಿ ಎಂದು ಶಾಸಕರು ಸಲಹೆ ನೀಡಿದರು. 

ಕಳಪೆ ಪಶು ಆಹಾರ ಮಾರಾಟ:

ತಾಲ್ಲೂಕಿನ ಕೆಲ ಅಂಗಡಿಯಲ್ಲಿ ಕಳಪೆ ಪಶು ಆಹಾರ ನೀಡಲಾಗುತ್ತಿದೆ. ಇದು ಜಾನುವಾರು ಸಾವುಗಳಿಗೆ ಕಾರಣವಾಗುತ್ತಿದೆ ಎಂದು ಕೆಡಿಪಿ ಸದಸ್ಯ ರಮೇಶ್ ವಿಚಾರ ಪ್ರಸ್ತಾಪಿಸಿದರು. ಶಾಸಕರು ಪ್ರತಿಕ್ರಿಯಿಸಿ, ‘ಆಹಾರ ಕಲುಷಿತವಾದರೆ ಪಶುಗಳ ಆರೋಗ್ಯಕ್ಕೆ ಕುತ್ತು ಬರುತ್ತದೆ. ಕೂಡಲೇ ಕ್ರಮವಹಿಸಿ’ ಎಂದರು. 

ರೈತ ಸಂಪರ್ಕ ಕೇಂದ್ರದಲ್ಲೇ ಅರ್ಜಿ ಸ್ವೀಕರಿಸಿ:

ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಯೋಜನೆಗೆ ಅರ್ಜಿ ಸಲ್ಲಿಸಲು ಜಿಲ್ಲಾ ಕೇಂದ್ರಕ್ಕೆ ಬರಬೇಕು. ವಾರಕ್ಕೆ ಒಂದು ದಿನ ರೈತ ಸಂಪರ್ಕ ಕೇಂದ್ರದಲ್ಲಿಯೇ ಅರ್ಜಿ ಸ್ವೀಕರಿಸಲು ಕ್ರಮ ವಹಿಸಿ ಎಂದು ಶಾಸಕರು ಸೂಚಿಸಿದರು. 

ಗಿಡ ನೆಡುವ ವಿಚಾರಕ್ಕೆ ಸಂಬಂಧಿಸಿದಂತೆ ಈವರೆಗೆ ಎಲ್ಲೆಲ್ಲಿ ಸಸಿ ನೆಟ್ಟು ಫೋಷಣೆ ಮಾಡಿದ್ದಾರೆನ್ನುವ ಮಾಹಿತಿಯೇ ನನಗೆ ಗೊತ್ತಿಲ್ಲ. ಆದ್ದರಿಂದ ಈವರೆಗೂ ಆಗಿರುವ ಕಾರ್ಯಕ್ರಮದ ಫೋಟೋಗಳನ್ನು ತಂದು ತೋರಿಸಬೇಕೆಂದು ಶಾಸಕರು ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗೆ ತಿಳಿಸಿದರು.

ಫಲಿತಾಂಶ ವೃದ್ಧಿಗೆ ಶ್ರಮಿಸಿ:

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಅಧಿಕಾರಿಗಳು ಈಗಿನಿಂದಲೇ ಕ್ರಮ ವಹಿಸಬೇಕು. ಮಂಡ್ಯ ಜಿಲ್ಲೆಯು ಕಳೆದ ಬಾರಿ 12ನೇ ಸ್ಥಾನ ಪಡೆದಿದೆ. ಈ ಬಗ್ಗೆ ಟಾಪ್ 5 ಸ್ಥಾನ ಗಳಿಸಬೇಕು. ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದರು. 

ಕೆಎಚ್‌ಬಿ ಕಾಲೊನಿಯಲ್ಲಿ ಮಳೆ ಬಂದಾಗ ಆಗುವ ಅವಾಂತರ ತಪ್ಪಿಸಲು, ಸುಮಾರು ₹40 ಕೋಟಿ ವೆಚ್ಚದಲ್ಲಿ ತಡೆಗೋಡೆ ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ರವಿಕುಮಾರ್‌ ತಿಳಿಸಿದರು. 

ಸಭೆಯಲ್ಲಿ ತಾಪಂ ಇಒ ಲೋಕೇಶ್, ತಹಶೀಲ್ದಾರ್ ವಿಶ್ವನಾಥ್, ತಾ.ಪಂ. ಆಡಳಿತಾಧಿಕಾರಿ ಡಾ.ಶಿವಲಿಂಗಯ್ಯ, ಡಿವೈಎಸ್ಪಿ ಲಕ್ಷ್ಮೀನಾರಾಯಣ ಪ್ರಸಾದ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರುದ್ರಪ್ಪ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. 

ಕಲಬೆರಕೆ ಬೆಲ್ಲ: ತಪಾಸಣೆಗೆ ಸೂಚನೆ

ಮಂಡ್ಯ ತಾಲ್ಲೂಕಿನ ಕೆಲ ಆಲೆಮನೆಗಳಲ್ಲಿ ಕಲಬೆರಕೆ ಬೆಲ್ಲ ತಯಾರಿಕೆ ಬಗ್ಗೆ ದೂರುಗಳು ಬಂದಿವೆ. ಇದರಿಂದ ಬ್ರ್ಯಾಂಡ್‌ ರೂಪಿಸಲು ತೊಂದರೆಯಾಗುತ್ತಿದೆ ಹಾಗೂ ಜಿಲ್ಲೆಗೂ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ಆಹಾರ ಸುರಕ್ಷತಾ ಅಧಿಕಾರಿಗಳು ಆಹಾರ ಆಯೋಗದ ಅಧ್ಯಕ್ಷರೊಂದಿಗೆ ತಪಾಸಣೆ ಮಾಡಬೇಕು ಎಂದು ಶಾಸಕ ರವಿಕುಮಾರ್‌ ಸೂಚಿಸಿದರು. 

‘ಅಕ್ರಮ ಮದ್ಯ ಮಾರಾಟ ತಡೆಗಟ್ಟಿ’

‘ಹೆದ್ದಾರಿ ಪಕ್ಕದ ಡಾಬಾ ರೆಸ್ಟೋರೆಂಟ್‌ಗಳಲ್ಲಿ ಮಧ್ಯರಾತ್ರಿವರೆಗೂ ಮದ್ಯ ಮಾರಾಟ ನಡೆಯುತ್ತಿದೆ. ಹಳ್ಳಿಗಳಲ್ಲಿ ಅಕ್ರಮ ಸಾರಾಯಿ ಮಾರಾಟದ ಬಗ್ಗೆ ದೂರುಗಳು ಕೇಳಿ ಬಂದಿವೆ. ಅಬಕಾರಿ ಅಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮವಹಿಸಬೇಕು. ಹಳ್ಳಿಗಳಲ್ಲಿ ಬೆಟ್ಟಿಂಗ್‌ ರೌಡಿಸಂ ಚಟುವಟಿಕೆಗಳು ತಲೆ ಎತ್ತಿದ್ದು ಪೊಲೀಸ್‌ ಅಧಿಕಾರಿಗಳು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು’ ಎಂದು ಶಾಸಕ ರವಿಕುಮಾರ್‌ ತಾಕೀತು ಮಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.