ಮಾದೇಗೌಡ
ಮಂಡ್ಯ: ಗಡಿ ಭದ್ರತಾ ಪಡೆ (ಬಿ.ಎಸ್.ಎಫ್.) ಯೋಧನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಗರದ ತಾವರೆಗೆರೆ ಬಡಾವಣೆ ನಿವಾಸಿ ಎಂ.ಬಿ. ಮಾದೇಗೌಡ (44) ಅವರು ಕರ್ತವ್ಯದ ಸಮಯದಲ್ಲಿ ಹೃದಯಾಘಾತದಿಂದ ಮಂಗಳವಾರ ಮೃತಪಟ್ಟಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಚಾಕೋರು ಜಿಲ್ಲೆಯ ಲಾತೂರ್ ನಲ್ಲಿರುವ ಬಿಎಸ್ಎಫ್ ತರಬೇತಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. 2000ನೇ ಇಸವಿಯಲ್ಲಿ ಮೈಸೂರಿನಲ್ಲಿ ನಡೆದ ಬಿ.ಎಸ್.ಎಫ್ ಸೇನಾ ನೇಮಕಾತಿ ರ್ಯಾಲಿಯಲ್ಲಿ ಆಯ್ಕೆಯಾಗಿ ಬಿ.ಎಸ್.ಎಫ್. ಸೇರಿದ್ದರು. ಕಳೆದ 25 ವರ್ಷಗಳಲ್ಲಿ ದೇಶದ ಹಲವೆಡೆ ಸೇವೆ ಸಲ್ಲಿಸಿದ್ದಾರೆ. ಮೃತರಿಗೆ ಪತ್ನಿ ಎಸ್.ಶಿಲ್ಪಾ, ಪುತ್ರ ಮತ್ತು ಪುತ್ರಿ ಇದ್ದಾರೆ.
ಮೃತ ಮಾದೇಗೌಡ ಅವರ ತಾಯಿ ಕಳೆದ ವರ್ಷ ಹಾಗೂ ನಿವೃತ್ತ ಸಬ್ ಇನ್ಸ್ಪೆಕ್ಟರ್ ಆಗಿದ್ದ ತಂದೆ ಬಿ.ನಂದಬೋರಯ್ಯ ಅವರು 2022ರಲ್ಲಿ ಮೃತಪಟ್ಟಿದ್ದರು. ಮಾದೇಗೌಡರ ಪಾರ್ಥಿವ ಶರೀರವನ್ನು ಬುಧವಾರ ಮುಂಜಾನೆ ಮಂಡ್ಯ ನಗರಕ್ಕೆ ತಂದು, ಬೆ.10.30ಕ್ಕೆ ಯತ್ತಗದಹಳ್ಳಿ ಸ್ಮಶಾನದಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.
‘ಯೋಧ ಮಾದೇಗೌಡ ಅವರ ಸಾವಿನ ಬಗ್ಗೆ ಬಿಎಸ್ಎಫ್ ನಿಂದ ಜಿಲ್ಲಾಡಳಿತಕ್ಕೆ ಅಧಿಕೃತ ಪತ್ರ ಬಂದಿದೆ. ಕಂದಾಯ ಇಲಾಖೆ ಅಧಿಕಾರಿಗಳನ್ನು ಮಾದೇಗೌಡರ ನಿವಾಸಕ್ಕೆ ಕಳುಹಿಸಿ ಮಾಹಿತಿ ಸಂಗ್ರಹಿಸಲಾಗಿದೆ. ಬುಧವಾರ ಬೆಳಿಗ್ಗೆ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ’ ಎಂದು ಜಿಲ್ಲಾಧಿಕಾರಿ ಕುಮಾರ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.