
ಮಂಡ್ಯ: ಡ್ರಗ್ಸ್ ಎಂಬ ಮಾದಕವಸ್ತು ವಿಶ್ವದ ಪ್ರತಿಯೊಂದು ದೇಶದ ಯುವಜನರ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಇದರಿಂದ ಯುವಜನತೆ ದೂರ ಇರಬೇಕು ಎಂದು ಜಿಲ್ಲಾಧಿಕಾರಿ ಕುಮಾರ ಸಲಹೆ ನೀಡಿದರು.
ನಗರದ ಸರ್ಎಂ.ವಿ. ಕ್ರೀಡಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಜಾಗೃತಿಗಾಗಿ, ಶಕ್ತಿಗಾಗಿ, ನಶೆ ಮುಕ್ತ ಮಂಡ್ಯಕ್ಕಾಗಿ ಭಾನುವಾರ ನಡೆದ ‘ಪೋಲೀಸ್ ಓಟ -2026’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವ್ಯಸನದಿಂದ ಮುಕ್ತವಾದರೆ ಮಾತ್ರ ವ್ಯಸನ ಮುಕ್ತ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು. ಯುವಜನತೆಯು ಮಾದಕ ವಸ್ತುಗಳಿಗೆ ಬಲಿಯಾಗಬಾರದು. ವ್ಯಸನಿಗಳ ಮನಸು ಮತ್ತು ದೇಹದ ಜೀವಕೋಶಗಳ ಮೇಲೆ ಪರಿಣಾಮ ಬೀರುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ತಿಳಿಸಿದರು.
ಕ್ಷಣಿಕ ಸುಖಕ್ಕೆ ತಮ್ಮ ಸುಖಜೀವನ ಕಳೆದುಕೊಳ್ಳಬೇಡಿ, ಯುವ ಜನತೆಯು ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮುಂದಿನ ಪೀಳಿಗೆಗೆ ಅರಿವು ಮೂಡಿಸುವುದು ಪ್ರಸ್ತುತದಲ್ಲಿ ಅವಶ್ಯಕ. ಕೆಟ್ಟಚಟಗಳಿಗೆ ಬಲಿಯಾಗದೇ ಇದ್ದರೆ ದೈಹಿಕವಾಗಿ ಸದೃಢವಾಗಿದ್ದರೆ ಮಾನಸಿಕವಾಗಿ ಸದೃಢವಾಗಲು ಸಾಧ್ಯವಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ.ಶೋಭಾರಾಣಿ ಮಾತನಾಡಿ, ಈ ಪೊಲೀಸ್ ಓಟವನ್ನು ನಶೆ ಮುಕ್ತ ಕರ್ನಾಟಕ ಮಾಡುವ ನಿಟ್ಟಿನಲ್ಲಿ ಹಾಗೂ ಜಾಗೃತಿಗಾಗಿ ಮಂಡ್ಯಕ್ಕಾಗಿ ಮ್ಯಾರಥಾನ್ ಎಂಬ ಶೀರ್ಷಿಕೆಯಡಿ ಆಯೋಜಿಸಿದ್ದು, ಪೊಲೀಸರು, ಸತ್ಯ ಸಾಯಿ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಕಡೆಯಿಂದಲೂ ಭಾಗವಹಿಸಿರುವುದು ಸಂತಸ ತಂದಿದೆ ಎಂದು ಶ್ಲಾಘಿಸಿದರು.
ಹಾಸ್ಯ ನಟ ನಟರಾಜ್ (ಗಿಲ್ಲಿ) ಮಾತನಾಡಿ, ಯುವ ಸಮೂಹವು ಸಮಾಜಕ್ಕೆ ಒಳಿತು ಮಾಡುವ ಚಿಂತನೆ ಮಾಡಬೇಕು. ವ್ಯಸನ ಮುಕ್ತ ಸಮಾಜ ನಿರ್ಮಾಣವಾಗುವುದರಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದೆ. ವಿದ್ಯಾರ್ಥಿಗಳು ಸೇರಿದಂತೆ ಯುವಸಮೂಹವು ದುಶ್ಚಟಗಳಿಂದ ದೂರವಿರಬೇಕು. ಪೊಲೀಸ್ ಇಲಾಖೆಯು ಓಟದ ಮೂಲಕ ಜಾಗೃತಿ ಮೂಡಿಸುತ್ತಿರುವುದು ಮೆಚ್ಚುವ ಕೆಲಸ ಎಂದರು.
ಓಟದಲ್ಲಿ ಭಾಗವಹಿಸಿ ಗೆಲವು ಪಡೆದ ಸ್ಪರ್ಧಿಗಳಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ತಿಮ್ಮಯ್ಯ, ಗಂಗಾಧರ ಸ್ವಾಮಿ, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ವಿನಯ್ಕುಮಾರ್, ಮುಖಂಡರಾದ ಬಿ.ಎಸ್.ಅನುಪಮಾ, ಶೇಖರ್, ಅಶೋಕ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.