ADVERTISEMENT

ಮಳವಳ್ಳಿ: ಪ್ರಸಾದ ಸೇವಿಸಿ 20ಕ್ಕೂ ಹೆಚ್ಚು ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 10:09 IST
Last Updated 28 ಜುಲೈ 2021, 10:09 IST
ಮಳವಳ್ಳಿ ತಾಲ್ಲೂಕಿನ ಟಿ.ಕಾಗೇಪುರ ಗ್ರಾಮದಲ್ಲಿ ಪ್ರಸಾದ ಸೇವಿಸಿ ಅಸ್ವಸ್ಥಗೊಂಡಿದ್ದವರ ಮನೆಗಳಿಗೆ ತಾಲ್ಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ ನೇತೃತ್ವದ ವೈದ್ಯರ ತಂಡ ಭೇಟಿ ಆರೋಗ್ಯ ತಪಾಸಣೆ ನಡೆಸಿತು. ಡಾ.ಸಂಜಯ್, ಡಾ.ಅನಿಲ್, ಡಾ.ಸಚಿನ್, ಡಾ.ಶಿವಶಂಕರ್ ಇದ್ದರು
ಮಳವಳ್ಳಿ ತಾಲ್ಲೂಕಿನ ಟಿ.ಕಾಗೇಪುರ ಗ್ರಾಮದಲ್ಲಿ ಪ್ರಸಾದ ಸೇವಿಸಿ ಅಸ್ವಸ್ಥಗೊಂಡಿದ್ದವರ ಮನೆಗಳಿಗೆ ತಾಲ್ಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ ನೇತೃತ್ವದ ವೈದ್ಯರ ತಂಡ ಭೇಟಿ ಆರೋಗ್ಯ ತಪಾಸಣೆ ನಡೆಸಿತು. ಡಾ.ಸಂಜಯ್, ಡಾ.ಅನಿಲ್, ಡಾ.ಸಚಿನ್, ಡಾ.ಶಿವಶಂಕರ್ ಇದ್ದರು   

ಮಳವಳ್ಳಿ: ಪ್ರಸಾದ ಸೇವಿಸಿದ್ದ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ತಾಲ್ಲೂಕಿನ ಕಾಗೇಪುರ ಮತ್ತು ಕೊರೇಗಾಲ ಗ್ರಾಮಗಳಲ್ಲಿ ಮಂಗಳವಾರ ನಡೆದಿದೆ.

ಆಷಾಢ ಸೋಮವಾರ ಆಗಿದ್ದರಿಂದ ಟಿ.ಕಾಗೇಪುರ ಗ್ರಾಮದ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಗ್ರಾಮದ ಮುಖಂಡರೊಬ್ಬರು ಪೂಜಾ ಕಾರ್ಯಕ್ರಮ ಆಯೋಜಿಸಿದ್ದರು. ಆರ್ಚಕ ಶಿವಬಸಪ್ಪ ಅವರು ಬಾಳೆಹಣ್ಣು, ಬೆಲ್ಲ, ಅವಲಕ್ಕಿ, ಸಕ್ಕರೆ, ಏಲಕ್ಕಿಯಿಂದ ತಯಾರಿಸಿದ ಪಂಚಾಮೃತ ಪ್ರಸಾದ ತಯಾರಿಸಿ ದೇವರ ದರ್ಶನಕ್ಕೆ ಬಂದಿದ್ದ ಕೊರೇಗಾಲ ಗ್ರಾಮದ 6 ಮಂದಿ ಸೇರಿದಂತೆ ಸುಮಾರು 25 ಮಂದಿಗೆ ನೀಡಿದ್ದರು.

ಪ್ರಸಾದ ಸೇವಿಸಿದ ಕೆಲವರಿಗೆ ಸೋಮವಾರ ರಾತ್ರಿ ವಾಂತಿ–ಭೇದಿ ಕಾಣಿಸಿಕೊಂಡಿದೆ. ಮಂಗಳವಾರ ಸಂಜೆ ವೇಳೆಗೆ ಬಹುತೇಕ ಮಂದಿಗೆ ಅಸ್ವಸ್ಥಗೊಂಡಿದ್ದು, ಮಾಹಿತಿ ತಿಳಿದ ತಾಲ್ಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಸಂಜಯ್, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಅನಿಲ್, ಸ್ಥಳೀಯ ವೈದ್ಯಾಧಿಕಾರಿ ಡಾ.ಸಚಿನ್, ಡಾ.ಶಿವಶಂಕರ್ ಅಸ್ವಸ್ಥಗೊಂಡಿದ್ದವರ ಮನೆಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿದರು. ಸ್ಥಳದಲ್ಲೇ ಆರೋಗ್ಯ ಇಲಾಖೆ ಸಿಬ್ಬಂದಿ ಮೊಕ್ಕಾಂ ಹೂಡಿದ್ದಾರೆ.

ADVERTISEMENT

ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿಲ್ಲ.

ಪ್ರಸಾದ ತಯಾರಿಸಿದ ಆರ್ಚಕರ ಬಳಿ ಮಾಹಿತಿ ಪಡೆದಿದ್ದು, ಪ್ರಸಾದವನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರೂ ಆರೋಗ್ಯವಾಗಿದ್ದು, ಅಸ್ವಸ್ಥಗೊಂಡಿರುವವರ ಆರೋಗ್ಯದ ಮೇಲೆ ವೈದ್ಯರು ಹಾಗೂ ಸಿಬ್ಬಂದಿ ನಿಗಾವಹಿಸಿದ್ದಾರೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.