ಮಂಡ್ಯ: ಶನಿವಾರ ರಾತ್ರಿ, ಭಾನುವಾರ ಬೆಳಿಗ್ಗೆ ಸುರಿದ ಗುಡುಗು, ಸಿಡಿಲು ಸಹಿತ ಮಳೆಗೆ ಶ್ರೀರಂಗಪಟ್ಟಣ ತಾಲ್ಲೂಕಿನ ವಿವಿಧೆಡೆ ಮರ, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.
ಭಾನುವಾರ ಬೆಳಿಗ್ಗೆ ಕೆಆರ್ಎಸ್ನಿಂದ ಮೈಸೂರಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಮೇಲೆ ವಿದ್ಯುತ್ ಕಂಬ ಉರುಳಿದ ಪರಿಣಾಮ ಪ್ರಯಾಣಿಕರು ಬಸ್ನಿಂದ ಇಳಿದು ಓಡಿ ಹೋಗಿದ್ದಾರೆ. ಬಸ್ಗೆ ವೈರ್ ತಾಗದ ಪರಿಣಾಮ ಪ್ರಯಾಣಿಕರೆಲ್ಲರೂ ಪಾರಾಗಿದ್ದಾರೆ. ವಿದ್ಯುತ್ ಪ್ರವಹಿಸಿದ್ದರೆ ದೊಡ್ಡ ಅನಾಹುತವೇ ನಡೆಯುತ್ತಿತ್ತು ಎಂದು ಬಸ್ ಚಾಲಕ ತಿಳಿಸಿದ್ದಾರೆ.
ಪಾಲಹಳ್ಳಿ ಗ್ರಾಮದಲ್ಲಿ ಜಬೀನಾ ಎಂಬವರ ಮನೆಯ ಮೇಲೆ ಶನಿವಾರ ರಾತ್ರಿ ತೆಂಗಿನ ಮರ ಬಿದ್ದು, ಮನೆಯ ಚಾವಣಿಗೆ ಹಾನಿಯಾಗಿದೆ. ಮರ ಬಿದ್ದ ರಭಸಕ್ಕೆ ತೆಂಗಿನ ಕಾಯಿಗಳು ಮನೆಯ ಒಳಗೂ ಚೆಲ್ಲಾಡಿವೆ. ಮನೆಯ ಒಳಗಿದ್ದ ಪಾತ್ರೆ, ಬಟ್ಟೆ ಇತರ ವಸ್ತುಗಳು ಹಾಳಾಗಿವೆ. ಮಹದೇವಪುರ ತೋಟದ ಸರ್ಕಲ್ ಬಳಿ ಬೃಹತ್ ಅರಳಿ ಮರವೊಂದು ಶನಿವಾರ ರಾತ್ರಿ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಇದರಿಂದ ಭಾನುವಾರ ಶ್ರೀರಂಗಪಟ್ಟಣ– ಬನ್ನೂರು ಮಾರ್ಗದ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಭಾನುವಾರ ಸಂಜೆ ಕೆ.ಆರ್.ಪೇಟೆಯಲ್ಲಿ 1 ಗಂಟೆಗೂ ಹೆಚ್ಚು ಕಾಲ ಆಲಿಕಲ್ಲು ಮಳೆ ಸುರಿಯಿತು. ತಗ್ಗು ಪ್ರದೇಶದ ಅಂಗಡಿಗಳಿಗೆ ನೀರು ನುಗ್ಗಿದ ಕಾರಣ ವ್ಯಾಪಾರಿಗಳು ಪರದಾಡಿದರು. ಮಳವಳ್ಳಿ, ಹಲಗೂರು, ಕೊಪ್ಪ ಭಾಗದಲ್ಲೂ ಗುಡುಗು ಸಹಿತ ಮಳೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.