ADVERTISEMENT

ಮಳವಳ್ಳಿ: ಮತ್ತಿತಾಳೇಶ್ವರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 5:27 IST
Last Updated 2 ಮಾರ್ಚ್ 2026, 5:27 IST
ಮತ್ತಿತಾಳೇಶ್ವರಸ್ವಾಮಿ ದೇವಸ್ಥಾನದ ಪ್ರವೇಶದ್ವಾರ
ಮತ್ತಿತಾಳೇಶ್ವರಸ್ವಾಮಿ ದೇವಸ್ಥಾನದ ಪ್ರವೇಶದ್ವಾರ   

ಮಳವಳ್ಳಿ: ತಾಲ್ಲೂಕಿನ ಕಂದೇಗಾಲ ಮತ್ತಿತಾಳೇಶ್ವರಸ್ವಾಮಿ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವವು ಮಾ.5ರಿಂದ 10ರವರೆಗೆ ನಡೆಯಲಿದೆ.

ತಾಲ್ಲೂಕಿನ ಕಂದೇಗಾಲ, ಕಲ್ಲುವೀರನಹಳ್ಳಿ, ಮೊಳೆದೊಡ್ಡಿ, ಅಮೃತೇಶ್ವರನಹಳ್ಳಿ ಗ್ರಾಮಗಳ ಮಧ್ಯಭಾಗದಲ್ಲಿ ಇರುವ ಮತ್ತಿತಾಳೇಶ್ವರಸ್ವಾಮಿ ದೇವಸ್ಥಾನವು ಚರ್ಮದ ರೋಗ ನಿವಾರಕಕ್ಕೆ ಆರಾಧ್ಯ ದೈವ ಎನಿಸಿಕೊಂಡಿದೆ. ನಾಡಿನ ಹಲವೆಡೆಯ ಸಾವಿರಾರು ಮಂದಿ ಭಕ್ತರು ಪ್ರತಿ ಗುರುವಾರ ಮತ್ತು ಭಾನುವಾರ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಮೈಮೇಲೆ ಚರ್ಮದ ಕಾಯಿಲೆ ಕಂಡು ಬಂದ ಕೂಡಲೇ ಮೊದಲು ಮತ್ತಿತಾಳೇಶ್ವರ ದೇವರಿಗೆ ಹೋಗು ಎನ್ನುವ ವಾಡಿಕೆ ಇದೆ. ದೇವಸ್ಥಾನದ ಆವರಣದಲ್ಲಿನ ಕೊಳದಲ್ಲಿ ಸ್ನಾನ ಮಾಡಿ ದೇವರಿಗೆ ಪೂಜೆ ಸಲ್ಲಿಸಿ ದೇವಸ್ಥಾನದಲ್ಲಿಯೇ ಸಿಗುವ ಹುತ್ತದ ಮಣ್ಣು ಹಾಗೂ ಮತ್ತಿ ಮರದ ಚಕ್ಕೆಯ ಪುಡಿಯನ್ನು ಚರ್ಮದ ಲೇಪನ ಮಾಡಿದರೇ ಎಂತಹ ಚರ್ಮದ ಸಮಸ್ಯೆಯೂ ಗುಣಮುಖವಾಗಲಿದೆ ಎಂಬ ನಂಬಿಕೆ ಭಕ್ತರಲ್ಲಿದೆ.

ADVERTISEMENT

ಪ್ರತಿ ವರ್ಷದಂತೆ ಈ ವರ್ಷವೂ ಮತ್ತಿತಾಳೇಶ್ವರಸ್ವಾಮಿ ಜಾತ್ರಾ ಮಹೋತ್ಸವವನ್ನು ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮಾ.5ರಿಂದ 10ರವರೆಗೆ 6 ದಿನಗಳ ಕಾಲ ನಡೆಯುವ ಜಾತ್ರೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮಾ.16ರಂದು ಹಸ್ತನಕ್ಷತ್ರ ಪೂರ್ವಕ ಮೃತ್ತಿಕಾ ಸಂಗ್ರಹಣ, ಅಂಕುರಾರ್ಪಣ ಧ್ವಜಾರೋಹಣದ ಮೂಲಕ ಜಾತ್ರೆಗೆ ಚಾಲನೆ ಸಿಗಲಿದೆ. ಮಾ.6ರಂದು ಚಿತ್ತ ನಕ್ಷತ್ರ ಪೂರ್ವಕ ಚಂದ್ರ ಮಂಡಲಾರೋಹಣ ಅನಂತ ಪೀಠಾರೋಹಣ ನಡೆಯಲಿದೆ.

ಮಾ.7ರಂದು ಪುಷ್ಪ ಮಂಟಪರೋಹಣ, ವೃಷಭಾರೋಹಣ, ವಸಂತೋತ್ಸವ ಹಾಗೂ ಮಾ.8ರಂದು ವಿಶಾಖ ನಕ್ಷತ್ರ ಪೂರ್ವಕ ಗಜಾರೋಹಣ ಹಾಗೂ ಮಾ.10ರಂದು ನಕ್ಷತ್ರ ಆಶ್ವಾರೋಹಣ ಮತ್ತ ಅವಭ್ಯತ ತೀರ್ಥಸ್ನಾನ (ತೆಪ್ಪೋತ್ಸವ) ನಡೆಯಲಿದೆ.

9ರಂದು ಬ್ರಹ್ಮ ರಥೋತ್ಸವ

ಮತ್ತಿತಾಳೇಶ್ವರಸ್ವಾಮಿಯ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿರುವ ಮತ್ತಿತಾಳೇಶ್ವರಸ್ವಾಮಿ ಬ್ರಹ್ಮ ರಥೋತ್ಸವವು ಮಾ.9ರಂದು ಮಧ್ಯಾಹ್ನ 1ಗಂಟೆಯಿಂದ 1.30ರೊಳಗೆ ಸಲ್ಲುವ ಶುಭ ಮಿಥುನ ಲಗ್ನದಲ್ಲಿ ಮಠದ ಹೊನ್ನಾಯಕನಹಳ್ಳಿ ಧರೆಗೆ ದೊಡ್ಡವರು ಮಂಟೇಸ್ವಾಮಿ ಮಠದ ಬಸವಪ್ಪ ಹಾಗೂ ಕಂಡಾಯ ಮೆರವಣಿಗೆಯೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಲಿದೆ. ಜಾತ್ರೆಗೆ ಆಗಮಿಸುವ ಸಾವಿರಾರು ಭಕ್ತರಿಗೆ ಹರಕೆಹೊತ್ತ ಭಕ್ತರಿಂದ ಅನ್ನಸಂತರ್ಪಣೆ ನಡೆಯಲಿದೆ. ತಾಲ್ಲೂಕು ಆಡಳಿತ ಮತ್ತು ದೇವಸ್ಥಾನದ ಆಡಳಿತ ಮಂಡಳಿ ಜನರಿಗೆ ಮೂಲ ಸೌಲಭ್ಯವನ್ನು ಕಲ್ಪಿಸಲು ಅಗತ್ಯ ಕ್ರಮ ಕೈಗೊಂಡಿದೆ.

ನಾಟಕ ಪ್ರದರ್ಶನ

ಜಾತ್ರೆ ಹಿನ್ನೆಲೆಯಲ್ಲಿ ಮಾ.2ರಂದು ದನಗಳ ಜಾತ್ರೆಗೆ ಚಾಲನೆ ಸಿಗಲಿದೆ. ಮಾ.5ರವರೆಗೆ ಭಾರಿ ದನಗಳ ಜಾತ್ರೆ ನಡೆಯಲಿದೆ. ಸುತ್ತಮುತ್ತಲಿನ ಹಲವು ಜಿಲ್ಲೆಗಳ ನೂರಾರು ರೈತರು ತಮ್ಮ ರಾಸುಗಳನ್ನು ಈ ಜಾತ್ರೆಯಲ್ಲಿ ಕಟ್ಟುತ್ತಾರೆ. ಉತ್ತಮ ರಾಸುಗಳಿಗೆ ಬೆಳ್ಳಿ ಹಾಗೂ ಪರಿತೋಶಕ ನೀಡಲಾಗುತ್ತದೆ. ಮಾ.9ರಂದು ರಾತ್ರಿ ಅಮೃತೇಶ್ವರನಹಳ್ಳಿಯ ಮತ್ತಿತಾಳೇಶ್ವರ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಸತಿ ಸಂಸಾರದ ಜ್ಯೋತಿ ಎಂಬ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.