ADVERTISEMENT

ಮಂಡ್ಯದಲ್ಲಿ ಸಿರಿಧಾನ್ಯ ಮೇಳ: 'ಮಂಡ್ಯ ಬೆಲ್ಲ’ ಬ್ರ್ಯಾಂಡ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2023, 8:16 IST
Last Updated 29 ಆಗಸ್ಟ್ 2023, 8:16 IST
ಮಂಡ್ಯದ ಡಾ.ರಾಜ್‌ಕುಮಾರ್‌ ಬಡಾವಣೆ ಮೈದಾನದಲ್ಲಿ ಸೋಮವಾರ ನಡೆದ ಸಿರಿಧಾನ್ಯ ಮೇಳ– ಬೆಲ್ಲದ ಪರಿಷೆಯಲ್ಲಿ ಮಂಡ್ಯ ಬೆಲ್ಲವನ್ನು ಕಲಾತ್ಮಕವಾಗಿ ಜೋಡಿಸಿ ಇಡಲಾಗಿತ್ತು
ಮಂಡ್ಯದ ಡಾ.ರಾಜ್‌ಕುಮಾರ್‌ ಬಡಾವಣೆ ಮೈದಾನದಲ್ಲಿ ಸೋಮವಾರ ನಡೆದ ಸಿರಿಧಾನ್ಯ ಮೇಳ– ಬೆಲ್ಲದ ಪರಿಷೆಯಲ್ಲಿ ಮಂಡ್ಯ ಬೆಲ್ಲವನ್ನು ಕಲಾತ್ಮಕವಾಗಿ ಜೋಡಿಸಿ ಇಡಲಾಗಿತ್ತು   

ಮಂಡ್ಯ: ಕೇಂದ್ರ ಆಹಾರ ಸಂಸ್ಕರಣಾ ಮಂತ್ರಾಲಯ, ರಾಜ್ಯ ಕೃಷಿ ಇಲಾಖೆ ವತಿಯಿಂದ ಸೋಮವಾರ ನಗರದಲ್ಲಿ ನಡೆದ ಸಿರಿಧಾನ್ಯ ಮೇಳ, ಬೆಲ್ಲದ ಪರಿಷೆಯಲ್ಲಿ ‘ಮಂಡ್ಯ ಬೆಲ್ಲ’ ಬ್ರ್ಯಾಂಡ್‌ ಅನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಬಿಡುಗಡೆ ಮಾಡಿದರು.

‘ಮಂಡ್ಯ ಬೆಲ್ಲ ರೈತ ಉತ್ಪಾದಕರ ಕಂಪನಿ ಲಿಮಿಟೆಡ್‌’ಗೆ ಸಾವಿರಕ್ಕೂ ಹೆಚ್ಚು ಬೆಲ್ಲ ಉತ್ಪಾದಕರು ಹಾಗೂ ಕಬ್ಬು ಬೆಳೆಗಾರರು ಹೆಸರು ನೋಂದಾಯಿಸಿದ್ದಾರೆ. ಅವರು ಉತ್ಪಾದಿಸುವ ಬೆಲ್ಲ ‘ಮಂಡ್ಯ ಬೆಲ್ಲ’ ಬ್ರ್ಯಾಂಡ್‌ ಅಡಿಯಲ್ಲಿ ಮಾರುಕಟ್ಟೆಗೆ ಬರಲಿದೆ. ‘ಆತ್ಮನಿರ್ಭರ ಭಾರತ’ ಯೋಜನೆಯ ಅಡಿ ಕೇಂದ್ರ ಸರ್ಕಾರದಿಂದ ಧನಸಹಾಯ ಪಡೆದಿರುವ ಉತ್ಪಾದಕರು ರಾಸಾಯನಿಕ ಮುಕ್ತ ಬೆಲ್ಲ ಉತ್ಪಾದಿಸಲಿದ್ದಾರೆ.

‘ಪ್ರಧಾನಮಂತ್ರಿ ಕಿರು ಉದ್ಯಮ ಪ್ರೋತ್ಸಾಹ (ಪಿಎಂಎಫ್‌ಎಂಇ) ಯೋಜನೆ ಅಡಿ ಬೆಲ್ಲಕ್ಕೆ ರಾಷ್ಟ್ರದಾದ್ಯಂತ ಮಾರುಕಟ್ಟೆ ದೊರೆಯಲಿದೆ, ರಫ್ತು ಮಾಡುವ ಉದ್ದೇಶವಿದೆ. ಮಾರುಕಟ್ಟೆ ವಿಸ್ತರಣೆಗಾಗಿ ಕಂಪನಿಗೆ ₹37 ಲಕ್ಷ ಸಾಲದ ಮಂಜೂರಾತಿ ಪತ್ರವನ್ನು ಎಸ್‌ಬಿಐ ಬೆಲ್ಲದ ಪರಿಷೆಯಲ್ಲಿ ವಿತರಿಸಿದೆ’ ಎಂದು ಕಂಪನಿಯ ಅಧ್ಯಕ್ಷ ಕಾರಸವಾಡಿ ಮಹದೇವು ತಿಳಿಸಿದರು.

ADVERTISEMENT

ಮೇಳದಲ್ಲಿ 135 ಮಳಿಗೆ ತೆರೆಯಲಾಗಿತ್ತು. ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಸಿರಿಧಾನ್ಯ ಆಹಾರ ಉತ್ಪಾದಕರು ಉತ್ಪನ್ನಗಳ ಪ್ರದರ್ಶನ–ಮಾರಾಟ ಮಾಡಿದರು. ವಿವಿಧ ಜಿಲ್ಲೆಗಳ ರೈತ ಉತ್ಪಾದಕರು ಸಿರಿಧಾನ್ಯಗಳನ್ನು ಸಂಸ್ಕರಣೆ ಮಾಡಿ ತಯಾರಿಸಿದ್ದ ಸಿರಿಧಾನ್ಯ ಆಹಾರ ಪದಾರ್ಥಗಳನ್ನೂ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಮಂಡ್ಯ ಬೆಲ್ಲದ ನೋಟ
ಸೆ.2ಕ್ಕೆ ಬರಪೀಡಿತ ತಾಲ್ಲೂಕು ಘೋಷಣೆ
ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಮಾತನಾಡಿ ‘ಮಳೆ ಕೊರತೆಯಾಗಿರುವ ಸಂಬಂಧ ಈಗಾಗಲೇ ತಾಲ್ಲೂಕು ಮಟ್ಟದಲ್ಲಿ ಬರದ ಅಧ್ಯಯನ ನಡೆಯುತ್ತಿದೆ. ಸೆ.2ರಂದು ಬರಪೀಡಿತ ತಾಲ್ಲೂಕು ಘೋಷಣೆ ಮಾಡಲಾಗುವುದು’ ಎಂದರು. ‘ಸದ್ಯ ಮೋಡ ಬಿತ್ತನೆ ಮಾಡುವ ಆಲೋಚನೆ ಸರ್ಕಾರದ ಮುಂದಿಲ್ಲ. ಹಿಂದೆ 2–3 ಬಾರಿ ನಡೆಸಿದ್ದ ಮೋಡಬಿತ್ತನೆ ಫಲ ನೀಡಿಲ್ಲ’ ಎಂದರು. ‘ಕೃಷಿ ಅಧಿಕಾರಿಗಳು ಅಧಿಕಾರಿಗಳು ರಾಜ್ಯಪಾಲರಿಗೆ ಬರೆದಿದ್ದ ಪತ್ರದ ಸಂಬಂಧ ಸಿಐಡಿ ವರದಿ ಇನ್ನೂ ಬಂದಿಲ್ಲ. ಇಬ್ಬರು ಅಧಿಕಾರಿಗಳು ಬಂಧನಕ್ಕೊಳಗಾಗಿದ್ದು ಬಹಳ ಗಂಭೀರವಾಗಿ ತನಿಖೆ ನಡೆಯುತ್ತಿದೆ. ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ನನ್ನ ಹೆಸರು ಹೇಳದಿದ್ದರೆ ನಿದ್ದೆ ಬರುವುದಿಲ್ಲ. ಹೀಗಾಗಿ ಆರೋಪ ಮಾಡುತ್ತಿದ್ದಾರೆ’ ಎಂದರು.

Cut-off box -

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.