ADVERTISEMENT

ಬೆಂಗಳೂರು ದಾಳಿಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 12:56 IST
Last Updated 14 ಆಗಸ್ಟ್ 2020, 12:56 IST

ಮಂಡ್ಯ: ‘ಬೆಂಗಳೂರಿನ ಪುಲಕೇಶಿನಗರದ ಭೋವಿ ಸಮಾಜದ ಹಿರಿಯ ಮುಖಂಡರು ಹಾಗೂ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ನಿವಾಸದ ಮೇಲೆ ದಾಳಿ ಮಾಡಿ, ಬೆಂಕಿ ಹಚ್ಚಿರುವುದು ಅತ್ಯಂತ ಹೇಯ ಕೃತ್ಯವಾಗಿದೆ’ ಎಂದು ಭಾರತೀಯ ಭೋವಿ ಜನಾಂಗದ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಸಿ.ಗುರಪ್ಪ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಪೊಲೀಸರನ್ನು ಗುರಿಯಾಗಿಸಿಕೊಂಡು ಠಾಣೆಯ ಮೇಲೆ ದಾಳಿ ಮಾಡಿರುವುದು ಸಮಾಜವೇ ತಲೆ ತಗ್ಗಿಸುವಂತಿದೆ. ಒಂದು ಸಮುದಾಯದ ವಿರುದ್ಧ ಜಾಲ ತಾಣದಲ್ಲಿ ಪೋಸ್ಟ್‌ ಹಾಕಿದ್ದರೆ ಅದರ ಬಗ್ಗೆ ಕಾನೂನಿನಡಿ ಶಿಕ್ಷೆ ಇದೆ. ಅದನ್ನು ಮರೆತು ಬೆಂಕಿ ಹಚ್ಚುವಂತಹ ನೀಚ ಮಟ್ಟಕ್ಕೆ ಇಳಿದಿರುವುದನ್ನು ಒಪ್ಪಲಾಗದು. ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿರುವ ಸಂಘಟನೆಗಳನ್ನು ನಿಷೇಧಿಸಬೇಕು’ ಎಂದು ಒತ್ತಾಯಿಸಿದರು.

‘ಬೆಂಗಳೂರಿನ ಕೆ.ಜೆ.ಹಳ್ಳಿ ಮತ್ತು ಡಿ.ಜೆ ಹಳ್ಳಿಯಲ್ಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಮು ಗಲಭೆ ನಡೆಸುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಆ.17 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗೆ ಮನವಿ ನೀಡಲಾಗುವುದು’ ಎಂದರು. ಮುಖಂಡರಾದ ಅಂಕಯ್ಯ, ಟಿ.ವಿ.ರಾಮಕೃಷ್ಣ, ಶ್ರೀನಿವಾಸು, ವಿ.ವೆಂಕಟರಮಣ, ಶಂಕರ್, ರಾಜೇಂದ್ರ, ಮಯೂರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.