ಮಳವಳ್ಳಿ: ತಾಲ್ಲೂಕಿನ ಚನ್ನಪಿಳ್ಳೆಕೊಪ್ಪಲು ಗ್ರಾಮಸ್ಥರು ಗುರುವಾರ ಕೊರೊನಾ ಸೋಂಕು ನಿವಾರಣೆಗೆ ಪ್ರಾರ್ಥಿಸಿ 20ಕ್ಕೂ ಹೆಚ್ಚು ಮೇಕೆಗಳನ್ನು ಬಲಿ ನೀಡಿ ಪೂಜೆ ಸಲ್ಲಿಸಿದರು.
ಸುಜ್ಜಲೂರು ಮಾರಮ್ಮನ ಹೆಸರಿನಲ್ಲಿ ಮೇಕೆಗಳನ್ನು ಬಲಿ ನೀಡಿದರು. ಗ್ರಾಮದಲ್ಲಿ ಬೆಳಿಗ್ಗೆಯಿಂದಲೂ ಮನೆಮನೆಯಲ್ಲೂ ಪೂಜಾ ಕೈಂಕರ್ಯ ನೆರವೇರಿಸಿದರು. ಗ್ರಾಮದ ಎಲ್ಲಾ ಬೀದಿಗಳಲ್ಲಿ ಮಹಿಳೆಯರು ರಂಗೋಲಿ ಬಿಡಿಸಿ ಅಲಂಕಾರ ಮಾಡಿದ್ದರು.
ಕಲ್ಲುಗಳನ್ನು ಗದ್ದುಗೆ ಮಾಡಿ, ಹೂವು, ಬೇವಿನ ಸೊಪ್ಪಿನಿಂದ ಅಲಂಕಾರ ಮಾಡಿದ್ದರು. ಕೊರೊನಾ ಮಾರಿಯಿಂದ ರಕ್ಷಣೆ ನೀಡುವಂತೆ ಪ್ರಾರ್ಥನೆ ಸಲ್ಲಿಸಿ ಮೇಕೆಗಳನ್ನು ಬಲಿ ಕೊಟ್ಟರು.
‘ಕಳೆದ ಎರಡು ವರ್ಷಗಳಿಂದ ಇಡೀ ವಿಶ್ವವನ್ನೇ ಕೋವಿಡ್ ಎಂಬ ಮಹಾಮಾರಿ ಕಾಡುತ್ತಿದ್ದು, ಇದ್ದರಿಂದ ಸಾವಿರಾರು ಜನರು ಮೃತಪಟ್ಟಿದ್ಧಾರೆ. ಸಾಂಕ್ರಾಮಿಕ ರೋಗಗಳು ಬಂದಾಗ ಸಜ್ಜಲೂರು ಮಾರಮ್ಮನಿಗೆ ಮೇಲೆ ಬಲಿ ಕೊಡುವುದು ಸಂಪ್ರದಾಯವಾಗಿದೆ. ಸೋಂಕು ನಿಯಂತ್ರಣಕ್ಕೆ ಬರಲಿ ಎಂಬ ಉದ್ದೇಶದಿಂದ ಪೂಜೆ ಹಮ್ಮಿಕೊಳ್ಳಲಾಗಿದೆ’ ಎಂದು ಗ್ರಾಮದ ಮುಖಂಡ ಚಲುವರಾಜು ತಿಳಿಸಿದರು.
‘ಮೇಕೆಗಳನ್ನು ಬಲಿ ನೀಡಿರುವ ಮಾಹಿತಿ ಸಿಕ್ಕಿದೆ, ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು’ ಎಂದು ತಹಶೀಲ್ದಾರ್ ವಿಜಿಯಣ್ಣ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.