ಶ್ರೀರಂಗಪಟ್ಟಣ: ‘ಸಿನಿಮಾ ನಟಿ ದೃಶ್ಯಾ ಅವರು ಹಣಕಾಸಿನ ವಿಷಯಕ್ಕೆ ದುಷ್ಕರ್ಮಿಗಳನ್ನು ಬಿಟ್ಟು ಹಲ್ಲೆ ನಡೆಸಿದ್ದಾರೆ’ ಎಂದು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಕೆಆರ್ಎಸ್ ಠಾಣೆಗೆ ದೂರು ನೀಡಿದ್ದಾರೆ.
ಅಯೋಗ್ಯ ಸಿನಿಮಾದ ನಟಿ, ಕುಶಾಲನಗರದ ದೃಶ್ಯಾ ಮತ್ತು ಅವರ ತಂದೆ ಮನ್ಮಥ ಎಂಬುವರು ಕಳುಹಿಸಿದ್ದ ನಾಲ್ವರು ದುಷ್ಕರ್ಮಿಗಳು ಬಲಮುರಿ ಬಳಿ ರೇಜರ್ ಬ್ಲೇಡ್ನಿಂದ ಹಲ್ಲೆ ನಡೆಸಿದ್ದಾಗಿ ಕುಂದಾಪುರ ತಾಲ್ಲೂಕಿನ ವಣಸಿ ಗ್ರಾಮದ ನಾಗಪ್ಪ ಅವರ ಮಗ ರಾಜೇಶ್ ದೂರು ನೀಡಿದ್ದಾರೆ. ನ.12ರಂದು ಈ ಕೃತ್ಯ ನಡೆದಿದ್ದು, ನ.13ರಂದು ದೂರು ನೀಡಿದ್ದಾರೆ.
‘ನ.12ರಂದು ಸಂಜೆ 6 ಗಂಟೆ ಸುಮಾರಿಗೆ ನನ್ನ ಸಂಬಂಧಿ ಶರತ್ ಎಂಬವರ ಜತೆ ಕುಶಾಲನಗರದಿಂದ ಬೆಳಗೊಳಕ್ಕೆ ಬೈಕ್ನಲ್ಲಿ ಬಂದು ಅಲ್ಲಿಂದ ಬಲಮುರಿಗೆ ಒಬ್ಬನೇ ಹೋಗುತ್ತಿದ್ದೆ. ಈ ವೇಳೆ ಎರಡು ಬೈಕ್ಗಳಲ್ಲಿ ಬಂದ ನಾಲ್ವರು ಹುಡುಗರು, ದೃಶ್ಯಾ ಅವರ ಬಳಿ ಹಣ ಕೇಳುತ್ತೀಯಾ ಎಂದು ರೇಜರ್ ಬ್ಲೇಡ್ನಿಂದ ಬಲ ತೋಳು, ಬಲ ಎದೆ, ಎಡ ಕೈ, ಎಡ ಎದೆಗೆ ಗಾಯ ಮಾಡಿದರು. ಕೆಳಕ್ಕೆ ಕೆಡವಿ, ಬೇಸ್ ಬ್ಯಾಟ್ನಿಂದ ಬಲ ಹೊಟ್ಟೆ ಮತ್ತು ಎದೆ ಮೇಲೆ ಗುದ್ದಿದರು. ಅವರ ಬಳಿ ಲಾಂಗ್ ಕೂಡ ಇತ್ತು. ಯಾರೋ ನನ್ನನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಸೇರಿಸಿದರು’ ಎಂದು ರಾಜೇಶ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ
ತಿಳಿಸಿದ್ದಾರೆ.
ಕೆಆರ್ಎಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಯಾರನ್ನೂ ಬಂಧಿಸಿಲ್ಲ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಕೆಆರ್ಎಸ್ ಠಾಣೆ ಎಸ್ಐ ಎಸ್.ಬಿ.ನವೀನ್ಗೌಡ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.