ಮಂಡ್ಯ: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್ಎಸ್ಕೆ) ವ್ಯಾಪ್ತಿಯ ಕಬ್ಬನ್ನು ಇತರ ಕಾರ್ಖಾನೆಗಳಿಗೆ ಸರಬರಾಜು ಮಾಡದಂತೆ ಜಿಲ್ಲಾಧಿಕಾರಿಗಳು ನಿರ್ಬಂಧ ವಿಧಿಸಬೇಕು ಎಂದು ಶಾಸಕ, ನಿರಾಣಿ ಗರ್ಸ್ ಮುಖ್ಯಸ್ಥ ಮುರುಗೇಶ್ ನಿರಾಣಿ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪಿಎಸ್ಎಸ್ಕೆ ವ್ಯಾಪ್ತಿಗೆ ಪಾಂಡವಪುರ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ ತಾಲ್ಲೂಕು ವ್ಯಾಪ್ತಿಯ ಕಬ್ಬನ್ನು ನಿಗದಿ ಮಾಡಲಾಗಿದೆ. ಆದರೆ ಇತರ ಖಾಸಗಿ ಸಕ್ಕರೆ ಕಾರ್ಖಾನೆಗಳು ಪಿಎಸ್ಎಸ್ಕೆ ವ್ಯಾಪ್ತಿಯ ಕಬ್ಬನ್ನು ಪಡೆಯುತ್ತಿವೆ. ಈ ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಇತರ ಕಾರ್ಖಾನೆಗಳ ಕಬ್ಬು ಅಭಿವೃದ್ಧಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಆ.11ರಿಂದ ಕಾರ್ಖಾನೆ ಆರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೊರೊನಾ ಸೋಂಕಿನ ನಡುವೆಯೂ ಕಾರ್ಖಾನೆ ಆರಂಭಿಸಲು ಮುಧೋಳ ಕಾರ್ಖಾನೆಯಿಂದ ಯಂತ್ರೋಪಕರಣಗಳು ಹಾಗೂ ಬಿಡಿಭಾಗಗಳನ್ನು ತರಲಾಗುತ್ತಿದೆ. ಕಳೆದ 3 ವರ್ಷಗಳಿಂದ ಬಳಸದ ಕಾರಣ ತುಕ್ಕು ಹಿಡಿದಿರುವ ಯಂತ್ರೋಪಕರಣಗಳನ್ನು ಸಮರೋಪಾದಿಯಲ್ಲಿ ದುರಸ್ತಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸ್ಥಳೀಯರಿಗೆ ಉದ್ಯೋಗ: ಕಾರ್ಖಾನೆಯ ಶೇ 90 ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ನೀಡಲು ನಿರ್ಧರಿಸಲಾಗಿದ್ದು ಈಗಾಗಲೇ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕಾರ್ಖಾನೆ ಆರಂಭಗೊಂಡ ನಂತರ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕಾರ್ಮಿಕರ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು. ಬಿಹಾರ, ಮುಧೋಳದಿಂದ ಬಂದಿರುವ ಕಾರ್ಮಿಕರು, ಎಂಜಿನಿಯರ್ಗಳು ಯಂತ್ರೋಪಕರಣಗಳ ದುರಸ್ತಿ ಕಾರ್ಯ ಮುಗಿಸಿ ಹಿಂದಿರುಗಲಿದ್ದಾರೆ ಎಂದು ತಿಳಿಸಿದ್ದಾರೆ.
ಕೋವಿಡ್–19 ಇರುವವರು ಯಾರೂ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿಲ್ಲ. ಹೊರಗಿನಿಂದ ಬಂದಿರುವ ಕಾರ್ಮಿಕರು 14 ದಿನ ಕ್ವಾರಂಟೈನಲ್ಲಿ ಇದ್ದು ವೈದ್ಯಕೀಯ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.