ಶ್ರೀರಂಗಪಟ್ಟಣ: ಕೋವಿಡ್ ಕಾರಣದಿಂದ ಆರು ತಿಂಗಳುಗಳಿಂದ ಬಂದ್ ಆಗಿದ್ದ ತಾಲ್ಲೂಕಿನ ಕೆಆರ್ಎಸ್ ಬೃಂದಾವನ ಬುಧವಾರ (ಸೆ.16)ದಿಂದ ಪ್ರವಾಸಿಗರ ಪ್ರವೇಶಕ್ಕೆ ಮುಕ್ತವಾಗಲಿದೆ.
ಬೆಳಿಗ್ಗೆ 8ರಿಂದ ರಾತ್ರಿ 8 ಗಂಟೆವರೆಗೆ ಪ್ರವೇಶಾವಕಾಶ ಇರುತ್ತದೆ. ಶನಿವಾರ ಮತ್ತು ಭಾನುವಾರ ರಾತ್ರಿ 9ರವರೆಗೂ ತೆರೆದಿರುತ್ತದೆ. ಉದ್ಯಾನದಲ್ಲಿ ಸಂಗೀತ ಕಾರಂಜಿ ಜತೆಗೆ ದೋಣಿ ವಿಹಾರವೂ ಇರುತ್ತದೆ. ಇಲ್ಲಿಗೆ ಬರುವವರನ್ನು ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಿ ಒಳ ಬಿಡಲಾಗುತ್ತದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
₹6 ಕೋಟಿ ನಷ್ಟ: ಬೃಂದಾವನ ನಿರ್ವಹಣೆಯ ಗುತ್ತಿಗೆಯನ್ನು ಕೆಸಿಐಸಿ ಸಂಸ್ಥೆ ಪಡೆದಿತ್ತು. ಕಾವೇರಿ ನೀರಾವರಿ ನಿಗಮಕ್ಕೆ ಮಾಸಿಕ ₹1.05 ಕೋಟಿ ನೀಡುವ ಒಪ್ಪಂದದೊಡನೆ ಈ ಸಂಸ್ಥೆ ಗುತ್ತಿಗೆ ಪಡೆದಿತ್ತು. ಕೆಸಿಐಸಿ ಸಂಸ್ಥೆ ಗುತ್ತಿಗೆ ಪಡೆದ 3 ತಿಂಗಳಲ್ಲೇ ಎಲ್ಲೆಡೆ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ಮಾ.23ರಿಂದ ಬೃಂದಾವನಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿತ್ತು.
ವಯಸ್ಕರಿಗೆ ₹50 ಹಾಗೂ ಮಕ್ಕಳಿಗೆ ₹10 ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ.
ವ್ಯಾಪಾರಿಗಳಲ್ಲಿ ಹರ್ಷ: ಕೆಆರ್ಎಸ್ ಹಾಗೂ ಬೃಂದಾವನ ಆವರಣದ ವ್ಯಾಪಾರಿಗಳು ಹರ್ಷಿತರಾಗಿದ್ದಾರೆ. 200ಕ್ಕೂ ಹೆಚ್ಚು ಮಂದಿ ವ್ಯಾಪಾರಿಗಳು ಇಲ್ಲಿ ಬದುಕು ಕಂಡುಕೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.