ADVERTISEMENT

ಮಂಡ್ಯ: ಮೈಷುಗರ್‌ ಕಬ್ಬು ಅನ್ಯ ಕಾರ್ಖಾನೆಗಳಿಗೆ ಹಂಚಿಕೆ

ಎಂ.ಎನ್.ಯೋಗೇಶ್‌
Published 27 ಜುಲೈ 2021, 19:30 IST
Last Updated 27 ಜುಲೈ 2021, 19:30 IST
ಲಾರಿಗೆ ಕಬ್ಬು ತುಂಬುತ್ತಿರುವ ರೈತರು (ಸಂಗ್ರಹ ಚಿತ್ರ)
ಲಾರಿಗೆ ಕಬ್ಬು ತುಂಬುತ್ತಿರುವ ರೈತರು (ಸಂಗ್ರಹ ಚಿತ್ರ)   

ಮಂಡ್ಯ: ಮೈಷುಗರ್‌ ಕಾರ್ಖಾನೆಯ ವ್ಯಾಪ್ತಿಯಲ್ಲಿ ಕಟಾವಿಗೆ ಬಂದಿರುವ 7 ಲಕ್ಷ ಮೆಟ್ರಿಕ್‌ ಟನ್‌ ಕಬ್ಬನ್ನು ಅನ್ಯ ಜಿಲ್ಲೆಯ 2 ಕಾರ್ಖಾನೆ ಸೇರಿ ಒಟ್ಟು 6 ಕಾರ್ಖಾನೆಗಳಿಗೆ ಹಂಚಿಕೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಐತಿಹಾಸಿಕ ಮೈಷುಗರ್‌ ಕಾರ್ಖಾನೆಯ ಚಕ್ರ ತಿರುಗದ ಕಾರಣ ಈ ಭಾಗದ ಕಬ್ಬು ಬೆಳೆಗಾರರು ಬೇರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡುವ ಅನಿವಾರ್ಯತೆ ಎದುರಾಗಿದೆ. ಸಾಗಣೆ ವೆಚ್ಚ ರೈತರ ಮೈಮೇಲೆ ಬಂದಿದ್ದು ನಷ್ಟ ಹೊಂದುವ ಭೀತಿ ಎದುರಿಸುತ್ತಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ, ಸತ್ವ ಕಳೆದುಕೊಂಡ ಹೋರಾಟದಿಂದಾಗಿ ರೈತರು ಮೈಷುಗರ್‌ ಕಾರ್ಖಾನೆ ತುಕ್ಕು ಹಿಡಿಯುತ್ತಿದ್ದು ರೈತರು ಸಂಕಷ್ಟ ಎದುರಿಸುವಂತಾಗಿದೆ.

ಮೈಷುಗರ್‌ ಕಾರ್ಖಾನೆಗೆ 112 ಹಳ್ಳಿಗಳು ಕಬ್ಬು ಸರಬರಾಜು ಮಾಡುತ್ತಿದ್ದವು. ಈಗ ಅವುಗಳನ್ನು 6 ವಿಭಾಗಗಳಾಗಿ ವಿಂಗಡಿಸಿ 6 ಕಾರ್ಖಾನೆಗಳಿಗೆ ಕಬ್ಬು ಹಂಚಿಕೆ ಮಾಡಲಾಗಿದೆ. 6ರಲ್ಲಿ ಯಾವುದೇ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಲು ರೈತರು ಸ್ವತಂತ್ರರು. ಕಾರ್ಖಾನೆ ಅಧಿಕಾರಿಗಳು ಆದ್ಯತೆಯ ಮೇರೆಗೆ ಇಲ್ಲಿಯ ಕಬ್ಬು ಅರೆಯಬೇಕು ಎಂದು ಜಿಲ್ಲಾಧಿಕಾರಿ ಎಸ್‌.ಅಶ್ವತಿ ಸೂಚಿಸಿದ್ದಾರೆ.

ADVERTISEMENT

80 ಕಿ.ಮೀ ದೂರ: ಮೈಸೂರು ಜಿಲ್ಲೆ ನಂಜನಗೂಡು ಸಮೀಪದ ಬನ್ನಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆ ಮಂಡ್ಯದಿಂದ 80 ಕಿ.ಮೀ ದೂರವಿದೆ. ಅಲ್ಲಿಯವರೆಗೆ ಕಬ್ಬು ಸರಬರಾಜು ಮಾಡುವುದು ರೈತರಿಗೆ ಕಷ್ಟ ಸಾಧ್ಯ. ಹೀಗಾಗಿ ಸಾಗಣೆ ವೆಚ್ಚವನ್ನು ಆಯಾ ಕಾರ್ಖಾನೆಗಳೇ ಭರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಚಾಮರಾಜನಗರ ಜಿಲ್ಲೆ, ಕುಂತೂರು ಕಾರ್ಖಾನೆ ಕೂಡ 60 ಕಿ.ಮೀ ದೂರದಲ್ಲಿದೆ. ಇವೆರಡು ಕಾರ್ಖಾನೆಗಳಿಗೆ ಮಂಡ್ಯ, ಕೊತ್ತತ್ತಿ, ಚಿಕ್ಕಮುಲಗೂಡು, ಹೊಳಲು, ಕೆರಗೋಡು ವಿಭಾಗದ 3 ಲಕ್ಷ ಮೆಟ್ರಿಕ್‌ ಟನ್‌ ಕಬ್ಬು ಸರಬರಾಜು ಮಾಡಲು ಸೂಚಿಸಲಾಗಿದೆ. ಕೆರಗೋಡು ಗ್ರಾಮದಿಂದ ನಂಜನಗೂಡುವರೆಗೆ ದೂರ ಮತ್ತಷ್ಟು ಹೆಚ್ಚಳವಾಗಲಿದ್ದು ಸಾಗಣೆ ವೆಚ್ಚ ಭರಿಸುವಂತೆ ರೈತರು ಆಗ್ರಹಿಸಿದ್ದಾರೆ.

‘ಮೈಷುಗರ್ ವ್ಯಾಪ್ತಿಯ ಕಬ್ಬು ಬೆಳೆಗಾರರು ಆಹಾರ ಇಲಾಖೆ ಜಂಟಿ ನಿರ್ದೇಶಕರನ್ನು ಭೇಟಿಯಾಗಿ ಸಾಗಣೆ ವೆಚ್ಚ ಭರಿಸುವಂತೆ ಮನವಿ ಮಾಡಿದ್ದೇವೆ. ಜಿಲ್ಲಾಡಳಿತ ನಮ್ಮ ಮನವಿಗೆ ಸ್ಪಂದಿಸಿದರೆ ಮಾತ್ರ ಕಬ್ಬು ಸರಬರಾಜು ಮಾಡಲು ಸಾಧ್ಯ. ಇಲ್ಲದಿದ್ದರೆ ರೈತರಿಗೆ ನಷ್ಟವಾಗುತ್ತದೆ’ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಸಾತನೂರು ವೇಣುಗೋಪಾಲ್‌ ಹೇಳಿದರು.

‘30 ಕಿ.ಮೀವರೆಗೂ ರೈತರು ಸಾಗಣೆ ವೆಚ್ಚ ಭರಿಸಬಹುದು. ನಂತರದ ದೂರದ ಸಾಗಣೆವೆಚ್ಚವನ್ನು ಕಾರ್ಖಾನೆಯೇ ಭರಿಸಬೇಕು’ ಎಂದು ಮೈಷುಗರ್ ವ್ಯಾಪ್ತಿಯ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಶಂಭೂನಹಳ್ಳಿ ಕೃಷ್ಣ ಹೇಳಿದರು.

‘ಸಾಗಣೆ ವೆಚ್ಚವನ್ನು ಕಾರ್ಖಾನೆಗಳೇ ಭರಿಸಬೇಕು ಎಂಬ ತೀರ್ಮಾನವನ್ನು ಸರ್ಕಾರದ ಹಂತದಲ್ಲಿ ತೆಗೆದುಕೊಳ್ಳಬೇಕು. ಹಿಂದೆ ಯಾವ ರೀತಿ ನಡೆದಿದೆ ಎಂಬ ಬಗ್ಗೆ ಪರಿಶೀಲಿಸಲಾಗುವುದು. ಜಿಲ್ಲಾಡಳಿತದಿಂದ ರೈತರಿಗೆ ಎಲ್ಲಾ ರೀತಿಯ ಸಹಾಯ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಎಸ್‌.ಅಶ್ವತಿ ಹೇಳಿದರು.

ನಿಗದಿಯಾಗದ ನ್ಯಾಯಯುತ ದರ
ಕಬ್ಬು ಅರೆಯುವ ಹಂಗಾಮು ಆರಂಭಗೊಂಡಿದ್ದರೂ ಕೇಂದ್ರ ಸರ್ಕಾರದಿಂದ ನ್ಯಾಯಯುತ ದರ (ಎಫ್‌ಆರ್‌ಪಿ) ನಿಗದಿ ಮಾಡಿಲ್ಲ. ಹೀಗಾಗಿ ಆಯಾ ಸಕ್ಕರೆ ಕಾರ್ಖಾನೆಗಳು ನೀಡುವಷ್ಟು ಹಣವನ್ನು ರೈತರು ಪಡೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಕಳೆದ ಬಾರಿ ಶೇ 9.5 ಇಳುವರಿ ಬರುವ ಪ್ರತಿ ಟನ್‌ ಕಬ್ಬಿಗೆ ಸರ್ಕಾರ ₹ 2,708 ನಿಗದಿಯಾಗಿತ್ತು. ಈಗ ಆ ದರವನ್ನು ಪರಿಷ್ಕೃತಗೊಳಿಸಬೇಕಾಗಿದೆ. ಹೊಸ ದರ ನಿಗದಿಯಾಗದ ಕಾರಣ ಕಾರ್ಖಾನೆಗಳು ಪ್ರತ್ಯೇಕವಾಗಿ ಬೇರೆಬೇರೆ ದರ ನಿಗದಿ ಮಾಡುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.