ADVERTISEMENT

ನಾಗಮಂಗಲ: 7ನೇ ನುಡಿ ಹಬ್ಬಕ್ಕೆ ಕ್ಷಣಗಣನೆ

ಪ್ರೊ.ಎಚ್.ಎಲ್.ಕೇಶವಮೂರ್ತಿ ಹೆಸರಿನ ಪ್ರಧಾನ ವೇದಿಕೆ: ಡಾ.ಹಾಲತಿ ಸೋಮಶೇಖರ್ ಅಧ್ಯಕ್ಷತೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 1:46 IST
Last Updated 12 ಫೆಬ್ರುವರಿ 2021, 1:46 IST
ನಾಗಮಂಗಲದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಖ್ಯದ್ವಾರದಲ್ಲಿ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿರುವುದು
ನಾಗಮಂಗಲದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಖ್ಯದ್ವಾರದಲ್ಲಿ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿರುವುದು   

ನಾಗಮಂಗಲ:ಜನಪದ ಕಲೆಗಳ ತವರೂರಾಗಿರುವ ನಾಗಮಂಗಲ ತಾಲ್ಲೂಕಿನಲ್ಲಿ 7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಡೆಯಲಿದ್ದು, ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ವೇದಿಕೆ ಸಿದ್ಧವಾಗಿದೆ.

ಡಾ.ಹಾಲತಿ ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ಜರುಗಲಿದೆ. ತಹಶೀಲ್ದಾರ್ ಕುಂಞಿ ಅಹಮದ್ ಅವರು ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಫೆ.12ರ ‌ಬೆಳಿಗ್ಗೆ 8 ಗಂಟೆಗೆ ರಾಷ್ಟ್ರ ಧ್ವಜಾರೋಹಣ, ಜಿಲ್ಲಾ ಕಸಾಪ ಅಧ್ಯಕ್ಷ ರವಿ ಕುಮಾರ್ ಚಾಮಲಾ ಪುರ ಅವರು ನಾಡ ಧ್ವಜಾರೋಹಣ ನೆರವೇರಿಸುವರು. ತಾಲ್ಲೂಕು ಕಸಾಪ ಅಧ್ಯಕ್ಷ ಖರಡ್ಯ ಬಸವೇಗೌಡರು ಪರಿಷತ್‌ ಧ್ವಜಾರೋಹಣ ನೆರವೇರಿಸುವರು.

ಬೆಳಿಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಸುರೇಶ್ ಗೌಡ ಅಧ್ಯಕ್ಷತೆ ವಹಿಸುವರು. ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ದೊಡ್ಡರಂಗೇಗೌಡ ಅವರು ಸಮ್ಮೇಳನ ಉದ್ಘಾ ಟಿಸುವರು.

ADVERTISEMENT

ವಿಧಾನ ಪರಿಷತ್ ಸದಸ್ಯ ಅಪ್ಪಾಜಿ ಗೌಡ ಆಶಯ ನುಡಿಗಳನ್ನಾಡುವರು. ಪುಸ್ತಕ ಮಳಿಗೆಯನ್ನು ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಉದ್ಘಾಟಿಸಲಿದ್ದು, ಸ್ಮರಣ ಸಂಚಿಕೆಯನ್ನು ಕಾಂಗ್ರೆಸ್‌ ಮುಖಂಡ ಎನ್.ಚಲುವರಾಯ ಸ್ವಾಮಿ ಬಿಡುಗಡೆ ಮಾಡುವರು.

ನುಡಿಹಬ್ಬದ ಸಂದರ್ಭದಲ್ಲಿ ಸಮ್ಮೇಳನದ ಅಧ್ಯಕ್ಷ ಡಾ.ಹಾಲತಿ ಸೋಮಶೇಖರ್ ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದ್ದಾರೆ.

ಪುಟ್ಟ ಹಳ್ಳಿಯಲ್ಲಿ ಜನಿಸಿದ ನಿಮಗೆ ಗ್ರಾಮೀಣ ಜೀವನ ಹೇಗೆ ಪ್ರಭಾವ ಬೀರಿತ್ತು?

ತಾಲ್ಲೂಕಿನ ಹಾಲತಿ, ಬೆಟ್ಟದ ತಪ್ಪಲಿನಲ್ಲಿರುವ ಗ್ರಾಮವಾಗಿದ್ದು, ಬಾಲ್ಯದಲ್ಲಿ ಕಡುಬಡತನವನ್ನು ಬಿಟ್ಟರೆ ಅಲ್ಲಿನ ಪರಿಸರದಲ್ಲಿ ಸಂಭ್ರಮಿಸಿದ್ದೇ ಹೆಚ್ಚು. ಗ್ರಾಮದ ಬೆಟ್ಟವೇ ಬಾಲ್ಯದ ದಿನಗಳಲ್ಲಿ ನಮ್ಮ ಆಕರ್ಷಣೆ. ದನ ಮೇಯಿಸುವುದು, ಬೆಟ್ಟಗುಡ್ಡ ಏರುವುದು, ಇಳಿಯುತ್ತಿದ್ದ ಬಾಲ್ಯದ ದಿನಗಳು ಬಹಳ ಸುಂದರವಾಗಿದ್ದವು. ಗ್ರಾಮದಲ್ಲಿದ್ದ ಆಶ್ರಮದಲ್ಲಿ ನಡೆಯು ತ್ತಿದ್ದ ಪ್ರವಚನ , ಭಗವದ್ಗೀತೆ, ಪುರಾಣ ಪುಣ್ಯಕಥೆಗಳು ಪ್ರಭಾವ ಬೀರಿದವು.

ಸಾಹಿತ್ಯದೆಡೆಗೆ ಆಕರ್ಷಿತರಾಗಿದ್ದು ಹೇಗೆ?

ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲೇ ಶಿಕ್ಷಕನಾಗಿ ಕೆಲಸ ಸಿಕ್ಕ ನಂತರವೂ ಓದಿನ ಕುತೂಹಲ ಮುಗಿದಿರಲಿಲ್ಲ. ಕನ್ನಡ ಪಂಡಿತ್‌ನಲ್ಲಿ ಆಯ್ಕೆಯಾಗಿ ಮೈಸೂರಿನಲ್ಲಿ ಶಿಕ್ಷಣ ಪಡೆದ ದಿನಗಳಲ್ಲಿ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಿದ್ವಾಂಸರಾದ ಹಾ.ಮಾ.ನಾಯಕ, ಜಿ.ಶಂ.ಪ, ತಾರಾ ನಾಥ, ಸಿಪಿಕೆ, ಟಿ.ವಿ.ವೆಂಕಟಾಚಲ ಶಾಸ್ತ್ರಿಗಳ ಒಡನಾಟದಿಂದ ಸಾಹಿತ್ಯದ ಸೆಳೆತ ಹೆಚ್ಚಾಯಿತು.

ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ನಿಮ್ಮ ಅನಿಸಿಕೆ?

ಆಶ್ಚರ್ಯ ಮತ್ತು ಸಂತೋಷ ಉಂಟಾಯಿತು. ತಾಲ್ಲೂಕಿನಲ್ಲಿ ಹಲವಾರು ಶ್ರೇಷ್ಠ ಸಾಧಕರಲ್ಲಿ ನನ್ನನ್ನೂ ಆಯ್ಕೆ ಮಾಡಿರುವುದು ಆಶ್ಚರ್ಯ ವಾಗಿದೆ. ನಾನು ಕಿರಿಯವನಾಗಿದ್ದರೂ ಗುರುತಿಸಿರುವುದಕ್ಕೆ ಸಂತೋಷವಾಗಿದೆ.

ತಾಲ್ಲೂಕಿನಲ್ಲಿ ಜನಪದ ಸಾಹಿತ್ಯ ಶ್ರೀಮಂತವಾಗಲು ಕಾರಣವೇನು?

ಜನಪದ ಸಾಹಿತ್ಯವು ನೋವಿನ ಮತ್ತು ಅನುಭವದ ಸಾಹಿತ್ಯವಾಗಿದ್ದು, ಎಲ್ಲಿ ಶ್ರಮಿಕ ವರ್ಗ, ಕೆಳವರ್ಗ ಇರುತ್ತದೋ ಅಲ್ಲಿ ಜನಪದ ಸಾಹಿತ್ಯ ಹುಟ್ಟಿ, ಬೆಳೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.